ಬೆಂಗಳೂರು
ರಾಜ್ಯದಲ್ಲಿ ಅಪರೇಷನ್ ಕಮಲವೆಂಬ ಅನಿಷ್ಠ ಪದ್ಧತಿ ತಂದು ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದವರು ಬಿಜೆಪಿಯವರು ಎಂದು ಪ್ರಜಾವಾಣಿ ಸಂದರ್ಶನದಲ್ಲಿ ಬಿಜೆಪಿ ವಿರುದ್ದ ಎಂ ಬಿ ಪಾಟೀಲ ಕಿಡಿಕಾರಿದ್ದಾರೆ. ಸಂದರ್ಶನದ ಕೆಲ ವಿಚಾರಗಳು ಈ ಕೆಳಗಿನಂತಿವೆ.
ಲಿಂಗಾಯತ ವಿಚಾರ ಈ ಬಾರಿಯೂ ಚುನಾವಣಾ ಅಖಾಡದಲ್ಲಿ ಮುನ್ನೆಲೆಯಲ್ಲಿದೆಯಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2018 ರ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಷಯ ಮುಂದಿಟ್ಟು ಕಾಂಗ್ರೆಸ್ ವಿರುದ್ಧ ಸುಳ್ಳುಗಳನ್ನು ಹರಡಲಾಗಿತ್ತು. ಆದರೂ ಲಿಂಗಾಯತರಿಗೆ ಕಾಂಗ್ರೆಸ್ ಕೊಟ್ಟಿದ್ದ 43 ಸೀಟುಗಳಲ್ಲಿ 17 ಗೆದ್ದಿದ್ದೆವು. ಈ ಬಾರಿಯ ಪರಿಸ್ಥಿತಿ ನಮಗೆ ಅನುಕೂಲಕರವಾಗಿದೆ. ಲಿಂಗಾಯತ ಸಮುದಾಯ ನಮ್ಮ ಬೆಂಬಲಕ್ಕಿದೆ ಎಂದು ಹೇಳಿದರು.
ಬಿಜೆಪಿ ರಹಸ್ಯ ಕಾರ್ಯಸೂಚಿ ಲಿಂಗಾಯತರಿಗೆ ಅರ್ಥವಾಗಿದೆ. ಹೀಗಾಗಿ ಲಿಂಗಾಯತರು ಮರಳಿ ಮನೆಗೆ ಬರುತ್ತಿದ್ದಾರೆ. ಈ ಬಾರಿ ಶೇ 50ರಷ್ಟು ಲಿಂಗಾಯತರು ಕಾಂಗ್ರೆಸ್ ಪರ ನಿಲ್ಲುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ನಿಮ್ಮ ಈ ವಿಶ್ವಾಸಕ್ಕೆ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಅವರು ಕಾಂಗ್ರೆಸ್ ಸೇರಿದ್ದೂ ಕಾರಣವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟೀಯ ಪಕ್ಷವಾದ ಬಿಜೆಪಿಯೊಳಗೆ ಲಿಂಗಾಯತ ನಾಯಕರ ವಿರುದ್ದ ಕಾರ್ಯಸೂಚಿಯ ಕೆಲಸ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಆಗಿರುವ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ನಿರಾಕರಿಸಲು ಈ ಕಾರ್ಯಸೂಚಿಯೇ ಕಾರಣ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿಯನ್ನ ಸೋಲಿಸಲು ಯಡಿಯೂರಪ್ಪ ಅವರಿಗೆ ಸುಪಾರಿ ನೀಡಲಾಗಿದೆ. ಲಕ್ಷ್ಮಣ್ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಮುಗಿಸಲು ಸಂತೋಷ್, ಜೋಶಿ ಹೋಗಬಹುದಿತ್ತಲ್ಲವೇ? ಒಬ್ಬ ಲಿಂಗಾಯತ ಮುಖಂಡನನ್ನು ನಾಶ ಮಾಡಲು ಇನ್ನೊಬ್ಬ ಲಿಂಗಾಯತ ನಾಯಕನನ್ನು ಬಿಜೆಪಿ ಬಳಸಿದ. ಚುನಾವಣೆಯಲ್ಲಿ ಈ ವಿಷಯ ಒಳಸುಳಿಯಾಗಿ ಪರಿಣಾಮ ಬೀರಲಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ