ಬೆಂಗಳೂರು:
ಅಪ್ಪನ ಅನಂತರ ಮಕ್ಕಳಿಗೆ ಚುನಾವಣಾ ಟಿಕೆಟ್ ನೀಡುವುದು ಕುಟುಂಬ ರಾಜಕಾರಣವಲ್ಲ. ಕುಟುಂಬ ರಾಜಕಾರಣದ ಸ್ವರೂಪ ಬೇರೆ ಇದೆ. ಒಂದು ಕುಟುಂಬ ಇಡೀ ಪಕ್ಷ ಅಥವಾ ಆಡಳಿತ ವ್ಯವಸ್ಥೆಯನ್ನು ನಿಯಂತ್ರಣ ಮಾಡುವುದು ಮಾತ್ರ ಡೈನಾಸ್ಟಿ ಪಾಲಿಟಿಕ್ಸ್.
ಭಾರತೀಯ ಜನತಾ ಪಕ್ಷ ವಂಶವಾದಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿಯ ಚುನಾವಣ ಸಹ ಉಸ್ತುವಾರಿ ಕೆ.ಅಣ್ಣಾಮಲೈ ವ್ಯಾಖ್ಯಾನಿಸಿದ್ದಾರೆ.
“ಜಾತಿವಾದ, ವಂಶವಾದ, ಭ್ರಷ್ಟ ವಾದ’ದ ವಿಚಾರ ದಲ್ಲಿ ಬಿಜೆಪಿಯ ಉಳಿದ ನಾಯಕರು ಮಾತನಾಡುವ ಶೈಲಿಯನ್ನೇ ಅನು ಸರಿಸಿದ್ದಾರೆ. “ಅಪ್ಪನ ಅನಂತರ ಮಕ್ಕಳಿಗೆ, ಗಂಡನ ಬದಲು ಹೆಂಡತಿಗೆ ಟಿಕೆಟ್’ ನೀಡಿದ ವಿಚಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ನಾನು ಬಿಜೆಪಿಯ ಸಂಘಟನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇರುವ ವ್ಯಕ್ತಿ. ಇದು ನನಗೆ ಪಕ್ಷ ನೀಡಿರುವ ಜವಾಬ್ದಾರಿ. ನಮ್ಮ ಪಕ್ಷ ಸ್ಥಳೀಯ ನಾಯಕತ್ವದಲ್ಲಿ ಹೆಚ್ಚು ವಿಶ್ವಾಸವನ್ನು ಇಟ್ಟಿದೆ. ಕರ್ನಾಟಕದಲ್ಲೂ ನಾವು ಸ್ಥಳೀಯ ನಾಯಕತ್ವವನ್ನೇ ರಾಜಕೀಯವಾಗಿ ಮುಂಚೂಣಿಯಲ್ಲಿಟ್ಟಿದ್ದೇವೆ. ನಮ್ಮ ಪಾತ್ರ ಅವರಿಗೆ ಸಹಕಾರ ನೀಡುವುದು. ಈ ಚುನಾವಣೆಗೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಉಸ್ತುವಾರಿಗಳು. ಅವರ ಜತೆ ಮನ್ಸೂಖ್ ಭಾಯ್ ಮಾಂಡವೀಯ ಇದ್ದಾರೆ. ಕೇಂದ್ರ ಸರಕಾರದಲ್ಲಿ ಇವರಿಬ್ಬರು ಬಹಳ ಪ್ರಭಾವಿ ಖಾತೆಗಳನ್ನು ನಿರ್ವಹಣೆ ಮಾಡುತ್ತಿರುವುದರಿಂದ ನನ್ನನ್ನು ಸೇರಿ ಹಲವರಿಗೆ ಜವಾಬ್ದಾರಿಯ ಹಂಚಿಕೆ ಮಾಡಲಾಗಿದೆಯಷ್ಟೆ.
ಒಂದೇ ಸೈದ್ಧಾಂತಿಕ ಹಿನ್ನೆಲೆ ಅಥವಾ ಒಂದೇ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿದ್ದರೆ ಅದು ಡಬಲ್ ಎಂಜಿನ್ ಸರಕಾರ. ಸುದೈವದಿಂದ ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರಕಾರ ಅಧಿಕಾರದಲ್ಲಿದೆ. ಇದರಿಂದ ಅಭಿವೃದ್ಧಿ ಚಟುವಟಿಕೆಗಳು ಬಹಳ ವೇಗವಾಗಿ ನಡೆಯುತ್ತವೆ. ಉದಾಹರಣೆಗೆ “ಜಲ್ ಜೀವನ್ ಮಷಿನ್’ ಯೋಜನೆ. 2019ರಲ್ಲಿ ಈ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದಾಗ ಕೇವಲ ಶೇ.16ರಷ್ಟು ಫಲಾನುಭವಿಗಳಿಗೆ ಮಾತ್ರ ತಲುಪಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಅನಂತರ ಈ ಪ್ರಮಾಣ ಶೇ.64ಕ್ಕೆ ಏರಿಕೆಯಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಯೋಜನೆಗಳ ಅನುಷ್ಠಾನ ತ್ವರಿತವಾಗುತ್ತದೆ. ಇದೇ ಜಲಜೀವನ್ ಮಷಿನ್ ಯೋಜನೆ ಪಕ್ಕದ ತಮಿಳುನಾಡಿನಲ್ಲಿ ಶೇ.45ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಅಲ್ಲಿ ಭ್ರಷ್ಟಾಚಾರದ ಜತೆಗೆ ಸೈದ್ಧಾಂತಿಕ ಭಿನ್ನಮತವೂ ಕೆಲಸ ಮಾಡುತ್ತಿರುವುದರಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಅಂಥ ಪರಿಸ್ಥಿತಿ ಇಲ್ಲ. ವಿಮಾನ ನಿಲ್ದಾಣ, ರಸ್ತೆ, ಕುಡಿಯುವ ನೀರು, ಬೃಹತ ನೀರಾವರಿ, ಸಾಗರಮಾಲಾ, ವಿದೇಶಿ ಬಂಡವಾಳ ಹೂಡಿಕೆ ಸೇರಿದಂತೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಕರ್ನಾಟಕದಲ್ಲಿ ಆದಷ್ಟು ಸಮರ್ಪಕ ಜಾರಿ ಬೇರೆಲ್ಲೂ ಆಗಿಲ್ಲ. ಪ್ರತಿ ಊರಿನಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಯೋಜನೆಗಳ ಫಲಾನುಭವಿಗಳು ನಮಗೆ ಸಿಗುತ್ತಾರೆ. ಡಬಲ್ ಎಂಜಿನ್ ಸರಕಾರ ಜನಸಾಮಾನ್ಯರನ್ನು ತಲುಪಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/04/Untitled-3-8.jpg)