ಗಂಡನಿಗೆ ಆರೆಸ್ಟ್ ವಾರಂಟ್‌ ಹಿಡಿದು ಬಂದ ಪೊಲೀಸರು : ಮಗುವಿನ ಜೊತೆಗೆ ಪತ್ನಿ ಆತ್ಮಹತ್ಯೆ

ಬ್ರಹ್ಮಾವರ:

    ಉಡುಪಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ  ಘಟನೆಯೊಂದು ನಡೆದಿದೆ. ಆರೂರು ಗ್ರಾಮದ ಅಡ್ಜಿಲ್‌ ಎಂಬಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಲು ವಾರಂಟ್‌ ಹಿಡಿದು ಬಂದಿರುವುದನ್ನು ಕಂಡು ಹೆದರಿದ ಅವರ ಪತ್ನಿ ಸುಶ್ಮಿತಾ (35) ಎಂಬವರು ತನ್ನ ಒಂದೂವರೆ ವರ್ಷದ ಮಗು ಶ್ರೇಷ್ಠ ಎಂಬಾಕೆಯನ್ನು ನೇಣು ಬಿಗಿದು ಕೊಲೆ  ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

    ಸುಶ್ಮಿತಾ ಎಂಬವರ ಪತಿ ಸುಭಾಶ್‌ ವಿರುದ್ಧ 2009ರಲ್ಲಿಕೊಲೆ ಯತ್ನ ಪ್ರಕರಣ ದಾಖಲಾಗಿ ಈ ಬಗ್ಗೆ ಶಿಕ್ಷೆ ಪ್ರಕಟವಾಗಿತ್ತು. ಶನಿವಾರ ಪೊಲೀಸರು ಸುಭಾಷ್‌ನನ್ನು ಹುಡುಕಿಕೊಂಡು ಮನೆಗೆ ಬಂದಿದ್ದರು. ಆದರೆ ಈ ಸಂದರ್ಭ ಸುಭಾಷ್‌ ವ್ಯಕ್ತಿಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ತೆರಳಿದ್ದು, ಪೊಲೀಸರಿಗೆ ಸಿಕ್ಕಿಲ್ಲ.

    ಸೋಮವಾರ ಬೆಳಗ್ಗೆ ಪೊಲೀಸರು ಮತ್ತೆ ಸುಭಾಷ್‌ನನ್ನು ಹುಡುಕಿಕೊಂಡು ಮನೆಗೆ ಬಂದಿದ್ದರು. ಆದರೆ ಅವರು ಇತರ ಆರೋಪಿಗಳ ಜತೆಯಲ್ಲಿ ಪ್ರಕರಣದಲ್ಲಿ ಜಾಮೀನು ಪಡೆಯಲು ವಕೀಲರನ್ನು ಸಂಪರ್ಕಿಸಲು ಬೆಂಗಳೂರಿಗೆ ಹೋಗಿದ್ದರು. ಈ ವೇಳೆ ಸುಶ್ಮಿತಾ ನನ್ನ ಪತಿಯನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಆತಂಕದಲ್ಲಿ ಮೊದಲು ಮಗುವನ್ನು ನೇಣಿಗೆ ಹಾಕಿ ಕೊಂದು ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬಂಧನ ವಾರಂಟ್‌ ಎಂದಿದ್ದರಿಂದ ಹೆದರಿದ ಸುಶ್ಮಿತಾ ಪೊಲೀಸರು ಹೋದ ನಂತರ ತನ್ನ ಸಂಬಂದಿ, ಕುಂದಾಪುರದಲ್ಲಿದ್ದ ಅನುಶ್ರೀ ಎಂಬವರಿಗೆ ಫೋನ್‌ ಮಾಡಿ, ʼಪೊಲೀಸರು ಬಂದು ನನ್ನ ಗಂಡನ ಮೇಲೆ ಅರೆಸ್ಟ್‌ ವಾರಂಟ್‌ ಇದೆ ಎಂದು ಹೇಳಿದ್ದಾರೆ. ನನಗೆ ಹೆದರಿಕೆ ಆಗುತ್ತಿದೆ’ ಎಂದು ತಿಳಿಸಿದ್ದಳು. ಆಗ ಅನುಶ್ರೀ ಸುಶ್ಮಿತಾಳಿಗೆ ಧೈರ್ಯ ಹೇಳಿ ಹೆದರಬೇಡ, ವಕೀಲರ ವ್ಯವಸ್ಥೆ ಹಾಗೂ ಹಣದ ವ್ಯವಸ್ಥೆ ಮಾಡಿದ್ದೇನೆ ಎಂದಿದ್ದರು.

   ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅನುಶ್ರೀ ಮತ್ತೆ ಸುಶ್ಮಿತಾಳಿಗೆ ಸತತ ಕರೆ ಮಾಡಿದರೂ ಸುಶ್ಮಿತಾ ಫೋನ್‌ ರಿಸೀವ್‌ ಮಾಡಿರಲಿಲ್ಲ. ಇದರಿಂದ ಅನುಮಾನಗೊಂಡ ಅನುಶ್ರೀ ಬ್ರಹ್ಮಾವರದ ಶರತ್‌ ಎಂಬವರಿಗೆ ಫೋನ್‌ ಮಾಡಿ ಸುಶ್ಮಿತಾಳ ಮನೆಗೆ ಹೋಗಿ ನೋಡಿ ಬರಲು ಹೇಳಿದ್ದರು. ಶರತ್‌ ಸುಶ್ಮಿತಾಳ ಮನೆಗೆ ಹೋದಾಗ ಮನೆ ಬಾಗಿಲು ಹಾಕಿಕೊಂಡಿದ್ದು ಮನೆಯ ಹಿಂಬದಿಯ ಕಿಟಕಿಯಿಂದ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು.

    ಸುಭಾಶ್‌ ಹಾಗೂ ಸುಶ್ಮಿತಾ ಪ್ರೀತಿಸಿ ಮದುವೆಯಾಗಿದ್ದು ಬ್ರಹ್ಮಾವರದಲ್ಲಿ ವಾಸಿಸುತ್ತಿದ್ದರು. ಸುಶ್ಮಿತಾ ಮನೆಯವರಿಂದ ಅಂತರ ಕಾಯ್ದುಕೊಂಡಿದ್ದರು. ಗಂಡನನ್ನು ಪೊಲೀಸರು ಬಂಧಿಸಿದರೆ ನನಗೆ ನನ್ನ ಮನೆಯವರ ಸಹಕಾರವೂ ಸಿಗದು ಎಂದು ಭಾವಿಸಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ ಶಂಕರ್‌, ಡಿವೈಎಸ್‌ಪಿ ಪ್ರಭು ಡಿ.ಟಿ., ಸರ್ಕಲ್‌ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ, ಬ್ರಹ್ಮಾವರ ಪಿಎಸ್‌ಐ ಅಶೋಕ್‌ ಮಾಳಬಾಗಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಜ್ಞರ ತಂಡ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದೆ.

    ಪ್ರಾಥಮಿಕ ತನಿಖೆಯ ಪ್ರಕಾರ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಮಗುವನ್ನು ಹ್ಯಾಂಗ್‌ ಮಾಡಿ ತಾನು ಕುತ್ತಿಗೆಗೆ ಹಗ್ಗ ಬಿಗಿದು ನೇಣು ಹಾಕಿಕೊಂಡಿರುವಂತೆ ಕಂಡು ಬರುತ್ತಿದೆ. ಸ್ಥಳದಲ್ಲಿ ಡೆತ್‌ ನೋಟ್‌ ಸಿಕ್ಕಿದ್ದು, ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಉಡುಪಿ ಪೊಲೀಸ್‌ ಅಧೀಕ್ಷಕ ಹರಿರಾಂ ಶಂಕರ್‌ ಹೇಳಿದರು.

Recent Articles

spot_img

Related Stories

Share via
Copy link