ಲವರ್‌ಗಾಗಿ ಆಕೆಯ ಪತಿಯನ್ನು ಕೊಂದು ರಸ್ತೆ ಬದಿ ಮಲಗಿಸಿದ ಶಾಲಾ ವಾಹನ ಚಾಲಕ

ಹಾಸನ:

    ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಅಪಘಾತದಿಂದ ಸಾವಾಗಿದೆ ಎಂದು ಊಹಿಸಲಾಗಿತ್ತು. ನಂತರ ಇದು ಕೊಲೆ  ಎಂದು ಗೊತ್ತಾಗಿದೆ. ಹಾಸನದಿಂದ  ಬೇಲೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 376ರ ಹೂವಿನಹಳ್ಳಿ ಕಾವಲು ಬಳಿ ಶನಿವಾರ ಅಪರಿಚಿತ ಶವ ಪತ್ತೆಯಾಗಿತ್ತು. ಹಾಸನ ತಾಲೂಕಿನ ಹೂವಿನಹಳ್ಳಿ ಗ್ರಾಮದ ಮಧು (36) ಮೃತ ದುರ್ದೈವಿ. ಶಾಲಾ ವಾಹನದ ಚಾಲಕ ಮೋಹನ್ ಕುಮಾರ್ ಎಂಬಾತ ಕೊಲೆ ಮಾಡಿರುವುದು ಗೊತ್ತಾಗಿದೆ.

    ಹೆದ್ದಾರಿ ಪಕ್ಕದಲ್ಲಿ ಮಧು ಶವ ಕಂಡ ಸ್ಥಳೀಯರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಸ್ಥಳೀಯರು, ಮಧು ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದರು. ಆದರೆ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ, ಮಧು ಅಪಘಾತದಿಂದ ಮೃತಪಟ್ಟಿಲ್ಲ, ಕೊಲೆಯಾಗಿದ್ದಾನೆ ಎಂದು ಗೊತ್ತಾಗಿದೆ. ಏಳು ವರ್ಷಗಳ ಹಿಂದೆ ಅರಸೀಕೆರೆ ಮೂಲದ ಯುವತಿಯ ಜೊತೆಗೆ ಮಧು ಅವರ ವಿವಾಹವಾಗಿದೆ. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಬೆಳಗ್ಗೆ ಕೂಲಿ ಕೆಲಸಕ್ಕೆ ಹೋದ ಮಧು, ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬರುತ್ತಿದ್ದ. ಈ ನಡುವೆ ಶಾಲಾ ವಾಹನದ ಚಾಲಕ ಮೋಹನ್ ಕುಮಾರ್ ಎಂಬಾತನ ಜೊತೆಗೆ ಮಧು ಪತ್ನಿಯ ಗೆಳೆತನವಾಗಿತ್ತು. ಮೋಹನ್ ಕುಮಾರ್ ಆಗಾಗ ಮಧು ಪತ್ನಿಯನ್ನು ಭೇಟಿಯಾಗುವುದು, ಆಕೆಯನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಿ ಬರುವುದು ಮಾಡುತ್ತಿದ್ದ.

   ಇವರ ಸಂಬಂಧ ಬೆಳೆದು, ಮೋಹನ್ ಕುಮಾರ್ ಒಂದು ದಿನ ಮಧು ಪತ್ನಿಯನ್ನು ತನ್ನವಳನ್ನಾಗಿಸಿಕೊಳ್ಳಲು ಮಧು ಅನ್ನು ಕೊಲೆ ಮಾಡುವ ಪ್ಲಾನ್ ಮಾಡಿದ್ದಾನೆ. ಶುಕ್ರವಾರ (ಜು.04) ರಾತ್ರಿ ಕೂಲಿ ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಮಧುವನ್ನು ಕರೆದೊಯ್ದ ಮೋಹನ್​ ಕುಮಾರ್​ ಆತನಿಗೆ ಕಂಠಪೂರ್ತಿ ಕುಡಿಸಿದ್ದಾನೆ. ಬಳಿಕ, ಮದ್ಯದ ನಶೆಯಿಂದ ನಿತ್ರಾಣಗೊಂಡ ಮಧುವಿನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

   ರಾತ್ರಿ ಮಧು ಮನೆಗೆ ಬಾರದಿದ್ದಾಗ ಮನೆಯವರು ಫೋನ್ ಮಾಡಿದ್ದಾರೆ. ಆದರೆ, ಆತನ ಫೋನ್​ಗೆ ಕಾಲ್​ ಕನೆಕ್ಟ್ ಆಗಿಲ್ಲ. ಬೆಳಗ್ಗೆ ಮಧು ಶವ ಹೆದ್ದಾರಿ ಪಕ್ಕದಲ್ಲಿ ಪತ್ತೆಯಾಗಿದೆ. ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಧು ತಾಯಿ ನೀಡಿದ ದೂರು ಆಧರಿಸಿ ಕೊಲೆ ಕೇಸ್​ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಧು ಕುಟುಂಬ ಸದಸ್ಯರು ಆಕ್ರೋಶ ಹೊರ ಹಾಕಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Recent Articles

spot_img

Related Stories

Share via
Copy link