ಬೆಂಗಳೂರು
ಪ್ರೀತಿ ಮಾಡಿದ ತಪ್ಪಿಗೆ ನಗರದ ಯುವ ಜೋಡಿಯ ಬದುಕು ದುರಂತ ಅಂತ್ಯ ಕಂಡಿದೆ ಪ್ರೀತಿಸಿದ ಇಬ್ಬರು ಒಬ್ಬರ ಹಿಂದೆ ಒಬ್ಬರು ಶಂಕಾಸ್ಪದವಾಗಿ ಮೃತಪಟ್ಟು ಪೋಷಕರನ್ನು ದು:ಖದ ಮಡುವಿಗೆ ತಳ್ಳಿದ್ದಾರೆ.
ಬಿನ್ನಿಪೇಟೆಯಲ್ಲಿ ಯುವತಿ ಕವಿತಾ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಮೃತಪಟ್ಟ ನಂತರ ಕಾಣೆಯಾಗಿದ್ದ ಪ್ರಿಯಕರ ಚೇತನ್ ಮೃತದೇಹ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದ್ದು ಅನುಮಾನಗಳಿಗೆ ಕಾರಣವಾಗಿದೆ
ಬಿನ್ನಿಪೇಟೆಯಿಂದ ನಾಪತ್ತೆಯಾಗಿದ್ದ ಚೇತನ್ದೇಹ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ಯುವತಿ ಸಾವಿನ ಬಳಿಕ ಆಕೆಯ ಪ್ರಿಯತಮ ಚೇತನ್ನನ್ನೂ ಕೊಲೆ ಮಾಡಲಾಗಿದೆ ಎಂದು ಆತನ ಪಾಲಕರು ಆರೋಪಿಸುತ್ತಿದ್ದಾರೆ.
ಚೇತನ್ ಬೆನ್ನ ಮೇಲೆ ಆಗಿರುವ ಗಾಯಗಳ ಗುರುತಿನಿಂದ ಆತ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದ್ದು, ಕವಿತಾ ಪೋಷಕರು ಇಬ್ಬರ ಪ್ರೀತಿಗೆ ಅಡ್ಡಪಡಿಸಿದ್ದರು. ಇದೇ ವಿಚಾರಕ್ಕೆ ಕಳೆದ 20 ದಿನಗಳ ಹಿಂದೆ ಕವಿತಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಕವಿತಾ ಮೃತಪಟ್ಟ ನಂತರ ಆಕೆಯ ಪಾಲಕರು ಚೇತನ್ಗೆ ಬೆದರಿಕೆ ಒಡ್ಡುತ್ತಿದ್ದರು ಎನ್ನಲಾಗಿದ್ದು, ಆಕೆಯೇ ಹೋದ ಮೇಲೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದರು ಎಂದು ಚೇತನ್ ಪೋಷಕರು ದೂರಿದ್ದಾರೆ.
ಕವಿತಾ ಮನೆಯವರು ಮೂರು ದಿನಗಳ ಹಿಂದೆ ಚೇತನ್ನನ್ನು ಕರೆದಿದ್ದರು.ನಂತರ ಆತನ ಮೊಬೈಲ್ ಸ್ವಿಚ್ ಆಫ್ಆಗಿತ್ತು. ಮೂರು ದಿನಗಳ ಬಳಿಕ ಆತನ ಮೃತದೇಹ ಕೆರೆಯಲ್ಲಿ ಸಿಕ್ಕಿದೆ.ತಾವರೆಕೆರೆ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ