ಬೆಂಗಳೂರು
ನಟ ದುನಿಯಾ ವಿಜಯ್ ಮನೆಗೆ ಹೋಗದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಮೊದಲ ಪತ್ನಿ ನಾಗರತ್ನ ಅವರಿಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಆದೇಶವನ್ನು ನೀಡಿದೆ.
ದುನಿಯಾ ವಿಜಿ ಆಗಲಿ ಅವರ ತಂದೆ-ತಾಯಿ ಕುಟುಂಬಸ್ಥರ ವಿರುದ್ಧವೂ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ ದುನಿಯಾ ವಿಜಯ್ ವಿರುದ್ಧ ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ ಎಂದು ಆದೇಶಿಸಿರುವ ನ್ಯಾಯಾಲಯವು ಪ್ರಕರಣದ ವಿಚಾರಣೆಯ ವೇಳೆ ಇನ್ ಕ್ಯಾಮೆರಾ ಬಳಸುವಂತೆಯೂ ಸೂಚನೆ ನೀಡಲಾಗಿದೆ.
ಕೆಲವು ದಿನಗಳ ಹಿಂದೆ ದುನಿಯಾ ಪತ್ನಿಯರ ಜಗಳ ರಂಪಾಟವನ್ನು ಇಡೀ ರಾಜ್ಯವೇ ನೋಡಿತ್ತು. ಪತ್ನಿಯರಿಬ್ಬರ ಜಗಳದಿಂದ ಬೇಸತ್ತ ವಿಜಿ ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶವನ್ನು ನೀಡಿದೆ.
ಸುಳ್ಳು ಹೇಳಿಕೆ
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ದುನಿಯಾ ವಿಜಯ್, ಈ ಮೊದಲೇ ನಾನು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ ವಕೀಲರ ಮುಂದೆ ಒಪ್ಪಂದ ಆಗಿದ್ದ ಕಾರಣ ನಾನು 2 ವರ್ಷ ಸುಮ್ಮನೆ ಇದ್ದೆ. ಶನಿ ಕಾಟ ಇದ್ದರೂ ಪಾರಾಗುತ್ತಾರೆ ಆದರೆ ಹೆಂಡತಿ ಕಾಟದಿಂದ ಪಾರಾಗಲು ಸಾಧ್ಯವೇ ಇಲ್ಲ. ನಾನು ಎಂದೂ ಶಾಂತಿ ಭಂಗ ಮಾಡಿಲ್ಲ. ಆಕೆಯೇ ನನಗೆ ಶಾಂತಿ ಇಲ್ಲದಂತೆ ಮಾಡಿದ್ದಾರೆ. ನಾನು ಏನೂ ತಪ್ಪು ಮಾಡಿಲ್ಲ. ಆದರೆ ಜನತೆಗೆ ಸುಳ್ಳು ಹೇಳಿಕೆ ನೀಡಿ ನನ್ನ ಹೆಸರು ಹಾಳು ಮಾಡಲು ಯತ್ನಿಸಿದ್ದು ನನಗೆ ಬೇಸರ ತಂದಿತ್ತು ಎಂದು ಹೇಳಿದ್ದರು.
ಎರಡು ವರ್ಷಗಳ ಕಾಲ ಎಷ್ಟೇ ನೋವು ನೀಡಿದರೂ ಸಹನೆಯಿಂದ ಇದ್ದೆ. ಆದರೆ ಈಗ ಎಲ್ಲದಕ್ಕೂ ಕೊನೆಗಾಣಿಸಬೇಕೆಂದು ವಿಡಿಯೋ ನೀಡಿ ಪೂರ್ಣ ವಿರಾಮ ಹಾಕಿದ್ದೇನೆ. ನನ್ನ ಮೇಲೆ ಇಲ್ಲ ಸಲ್ಲದ ನಕಲಿ ಎಫ್ಐಆರ್ ಮಾಡಿದ್ದರು. ಆದರೂ ಸುಮ್ಮನಿದ್ದೆ. ಇದನ್ನು ಸಹಿಸಲು ಸಾಧ್ಯವಾಗದೇ ಆಕೆ ಮತ್ತೆ ಇಷ್ಟೆಲ್ಲಾ ಮಾಡಿದ್ದಾರೆ. ನನ್ನ ತಾಯಿಯ ಮೇಲೂ 2 ಬಾರಿ ಹಲ್ಲೆ ನಡೆದಿತ್ತು, ಆದರೆ ನಾನು ಗೌರವಕ್ಕೆ ಅಂಜಿ ಮಾತನಾಡಿರಲಿಲ್ಲ ಎಂದು ತಿಳಿಸಿದರು.
ಕೀರ್ತಿ ಅದೃಷ್ಠ
ನನ್ನ ಬದುಕನ್ನೇ ಆಕೆ ಮುಗಿಸಲು ಯತ್ನ ಮಾಡಿದ್ದಾರೆ. ಇಷ್ಟು ಕಷ್ಟ ಅನುಭವಿಸಿದ್ದಕ್ಕೆ ಕೀರ್ತಿ ನನಗೆ ಸಿಕ್ಕಿದ್ದು ಅದೃಷ್ಟ. ದೇವರು ನನಗೆ ಕೀರ್ತಿಯನ್ನು ನೀಡಿದ್ದಾರೆ. ಆದರೆ ನನಗೆ ಈಗಲೂ ನೋವು ಇದೆ. ನನ್ನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾರೆ. ನನ್ನ ವಿರುದ್ಧವೇ ಮಕ್ಕಳು ದೂರು ನೀಡುವಂತೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಎರಡನೇ ಪತ್ನಿ ಕೀರ್ತಿಯನ್ನು ದುನಿಯಾ ವಿಜಯ್ ಕೊಂಡಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ