ನಗರಸಭೆ ಸದಸ್ಯರಿಗೆ ತಿಪ್ಪಾರೆಡ್ಡಿ ಸಲಹೆ; ಪಕ್ಷಬೇಧ ಬಿಟ್ಟು ಅಭಿವೃದ್ದಿಗೆ ಒತ್ತುಕೊಡಿ

ಚಿತ್ರದುರ್ಗ;
            ನಿಮ್ಮಲ್ಲಿ ಪಕ್ಷಭೇದ ಯಾವ ಕಾರಣಕ್ಕೂ ಬರಕೂಡದು, ನಗರದ ಅಭಿವೃದ್ಧಿಯೇ ನಿಮ್ಮ ಮೂಲ ಮಂತ್ರವಾಗಲಿ ಎಂದು ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ನೂತನವಾಗಿ ನಗರಸಭೆಗೆ ಆಯ್ಕೆಯಾದ ಸದಸ್ಯರಿಗೆ ಕಿವಿಮಾತು ಹೇಳಿದರು.
              ಸೆಪ್ಟೆಂಬರ್ 7 ರ ಶುಕ್ರವಾರ ರಾತ್ರಿ ಚಿತ್ರದುರ್ಗ ನಗರದ ವಾಸವಿ ದೇವಾಲಯದಲ್ಲಿ ನೂತನ ನಗರÀ ಸಭಾ ಸದಸ್ಯರಿಗೆ ಆರ್ಯವೈಶ್ಯ ಸಮಾಜದ ಪರವಾಗಿ ನೀಡಿದ ಸನ್ಮಾನದ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಒಂದೇ ದಿನದಲ್ಲಿ ನಗರವನ್ನು ಬಂಗಾರ ಮಾಡುತ್ತೇವೆಂದು ಯಾರೂ ಭಾವಿಸಬಾರದು. ಆದರೆ ನಗರದ ಅಭಿವೃದ್ಧಿ ಬಗೆಗೆ ಎಲ್ಲರಿಗೂ ಪಕ್ಷಭೇದವಿಲ್ಲದ ಬದ್ಧತೆ ಬೇಕು. ಆರ್ಯವೈಶ್ಯ ಸಮಾಜದವರು ಅವರಿಗಾಗಿ ಏನನ್ನೂ ಕೇಳಿಲ್ಲ; ನಗರದ ಅಭಿವೃದ್ಧಿಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಸನ್ಮಾನವನ್ನು ಕೇವಲ ಮರ್ಯಾದೆ ಎಂದು ಭಾವಿಸದೆ, ಮುಂಬರುವ ದಿನಗಳಲ್ಲಿ ಸದಸ್ಯರು ತಾವು ಮಾಡಬೇಕಾದ ನಗರದ ಸೇವೆಗೆ ಕಂಕಣ ಎಂದು ತಿಳಿಯಬೇಕೆಂದು ಅವರು ಹೇಳಿದರು.
               ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್ ಕಾಶಿ ವಿಶ್ವನಾಥ ಶೆಟ್ಟಿ ಅವರು ನೂತನ ಸದಸ್ಯರಿಗೆ ಸನ್ಮಾನವನ್ನು ಮಾಡಿದ ನಂತರ ಮಾತನಾಡಿ ಈಗ ನಡೆದಿರುವ ನಗರಸಭೆಯ ಚುನಾವಣೆಗಳಲ್ಲಿ ವಿಜೇತ ಸದಸ್ಯರನ್ನು ಅಭಿನಂದಿಸಿ ತಮ್ಮನ್ನು ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯಕ್ಕೆ ಕರೆಸಿಕೊಂಡು ಆರ್ಯ ವೈಶ್ಯ ಸಮಾಜದ ಪರವಾಗಿ ಇಂದು ಸನ್ಮಾನಿಸುತ್ತಿದ್ದೇವೆ. ಇದನ್ನು ಸ್ವೀಕರಿಸಲು ತಾವುಗಳು ಆಗಮಿಸಿರುವುದು ನಮ್ಮ ಜನಾಂಗದವರಿಗೆ ಅತೀವ ಸಂತೋಷವನ್ನು ಉಂಟುಮಾಡಿದೆ. ಅಧಿಕಾರ ಹಿಡಿಯುವ ಈ ಸಂದರ್ಭದಲ್ಲಿ ತಮ್ಮನ್ನು ಬರಮಾಡಿಕೊಂಡು ಸನ್ಮಾನಿಸುವುದರ ಮೂಲಕ ನಗರದ ಇಂದಿನ ಸ್ಥಿತಿಗತಿಯನ್ನು ತಮಗೆಲ್ಲರಿಗೆ ಮನವರಿಕೆ ಮಾಡಿಕೊಟ್ಟು ಅದರ ಅಭಿವೃದ್ಧಿಗೆ ಶ್ರಮಿಸಲು ಕೋರುವ ಉದ್ದೇಶವೂ ಸಹ ನಮ್ಮದಾಗಿದೆ. ಆರ್ಯವೈಶ್ಯ ಜನಾಂಗವು ಯಾವುದೇ ಪಕ್ಷದ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ; ನಮ್ಮ ಜನಾಂಗದ ಕಳಕಳಿ ಏನಿದ್ದರೂ ನಗರದ ಸರ್ವಾಂಗೀಣ ಅಭಿವೃದ್ಧಿ ಮಾತ್ರ. ನಗರದ ರಚನಾತ್ಮಕ ಕಾರ್ಯದಲ್ಲಿ ನಾವು ನಗರಸಭೆಯೊಂದಿಗೆ ಸದಾ ಕೈಜೋಡಿಸುತ್ತೇವೆ. ವಿಜಯಶಾಲಿಗಳಾದ ನೀವುಗಳು ಯಾವ ಪಕ್ಷದವರಾಗಿದ್ದರೂ ಸರಿ, ಅಭಿವೃದ್ಧಿಯ ವಿಷಯದಲ್ಲಿ ಪಕ್ಷಭೇದವನ್ನು ಮರೆತು ಟೊಂಕಕಟ್ಟಿ ನಿಲ್ಲಬೇಕು ಎಂದರು.
                  ನಗರದ ಸಮಸ್ಯೆಗಳನ್ನು ವಿವರವಾಗಿ ಪ್ರಸ್ತಾಪಿಸಿದ ಅವರು ಹೊಸದಾಗಿ ಅದಿಕಾರವನ್ನು ಹಿಡಿದಿರುವವರು ನ್ಯೂನತೆಗಳನ್ನು ಒಂದು ಸವಾಲೆಂಬಂತೆ ಎಲ್ಲರೂ ಸ್ವೀಕರಿಸಿ ನಗರವನ್ನು ಸರ್ವಾಂಗ ಸುಂದರವಾಗಿ ಕಟ್ಟಲು ಶ್ರಮಿಸಬೇಕೆಂದು ಕೋರಿದರು.
ಆರ್ಯವೈಶ್ಯ ಸಂಘದ ಪದಾಧಿಕಾರಿಗಳು, ವಾಸವಿ ಸಹಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಲ್.ಆರ್ ವೆಂಕಟೇಶ ಕುಮಾರ್ ಸ್ವಾಗತಿಸಿ ವಂದಿಸಿದರು.