ಭೂಮಿ ಮೇಲಿನ ಕೆಲವು ಸಂಬಂಧಗಳಿಗೆ ಬೆಲೆ ಕಟ್ಟಲಾಗದು. ಅದರಲ್ಲಿ ಸೋದರ ಮತ್ತು ಸೋದರಿಯ ಸಂಬಂಧವು ಪ್ರಮುಖವಾಗಿರುವಂತಹದ್ದು. ಮನೆಯಲ್ಲಿ ಅಣ್ಣ ಅಥವಾ ತಮ್ಮನಿಗೆ ತಂಗಿ ಅಥವಾ ಅಕ್ಕ ಯಾವಾಗಲೂ ಬೆಂಬಲವಾಗಿ ನಿಲ್ಲುವರು. ಅದೇ ರೀತಿಯಲ್ಲಿ ಸೋದರನು ಯಾವುದೇ ಪರಿಸ್ಥಿತಿಯಲ್ಲೂ ತನ್ನ ಸೋದರಿಯನ್ನು ಕಾಪಾಡುವನು. ಸೋದರ ಮತ್ತು ಸೋದರಿಯ ಸಂಬಂಧದ ಮಹತ್ವವನ್ನು ಸಾರುವಂತಹ ರಕ್ಷಾ ಬಂಧನವು ಪ್ರಮುಖವಾಗಿ ಭಾರತೀಯರು ಹೆಚ್ಚಾಗಿ ಆಚರಿಸಿಕೊಳ್ಳುವರು. ರಕ್ಷಾ ಬಂಧನದ ಮಹತ್ವ ಸೋದರ ಮತ್ತು ಸೋದರಿ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯದೆ ಉಳಿಯಲು ಪ್ರತೀ ವರ್ಷ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.
ರಕ್ಷಾಬಂಧನವನ್ನು ರಾಷ್ಟ್ರದೆಲ್ಲೆಡೆಯಲ್ಲಿ ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ಹಿಂದೂಗಳ ಹಬ್ಬವಾದರೂ ಹೆಚ್ಚಿನ ಧರ್ಮಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ದಿನ ಸೋದರಿಯು ತನ್ನ ಸೋದರನ ಕೈಗೆ ರಕ್ಷೆಯ ದಾರವನ್ನು ಕಟ್ಟುವಳು. ರಾಖಿ ಎಂದು ಕರೆಯಲ್ಪಡುವಂತಹ ಈ ದಾರವನ್ನು ಕಟ್ಟುವ ವೇಳೆ ಆಕೆ ತನ್ನ ಸೋದರನಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯವು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವಳು. ಇದಕ್ಕೆ ಪ್ರತಿಯಾಗಿ ಸೋದರನು ತನ್ನ ತನ್ನ ಸೋದರಿಯನ್ನು ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ರಕ್ಷಿಸುವ ಭರವಸೆ ನೀಡುವನು ಮತ್ತು ಆಕೆಗೆ ಇಷ್ಟವಾಗಿರುವ ಉಡುಗೊರೆ ನೀಡುವನು.
ರಕ್ಷಾಬಂಧನ ಮತ್ತು ಅದರ ಅರ್ಥ ರಕ್ಷಾಬಂಧನದಲ್ಲಿ ಎರಡು ಪದಗಳಿವೆ. ಅದೇ ರಕ್ಷಾ ಮತ್ತು ಬಂಧನ. ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧವೆಂದರ್ಥ. ಸೋದರ ಮತ್ತು ಸೋದರಿ ತಮ್ಮೊಳಗೆ ಹಂಚಿಕೊಳ್ಳುವ ಯಾವತ್ತೂ ಕೊನೆಗೊಳ್ಳದ ಪ್ರೀತಿಯನ್ನು ರಕ್ಷಾಬಂಧನವೆನ್ನಬಹುದು. ಕೇವಲ ಸೋದರ-ಸೋದರಿ ಮಾತ್ರ ಈ ಹಬ್ಬವನ್ನು ಆಚರಿಸುವುದಿಲ್ಲ. ಸೋದರ ಸಂಬಂಧಿಗಳು ಕೂಡ ಇದನ್ನು ಆಚರಿಸಿಕೊಳ್ಳುವರು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಂದು ಆಧುನೀಕರಣಗೊಂಡಿದೆ. ಅದೇ ರೀತಿ ರಕ್ಷಾಬಂಧನವು ಆಧುನೀಕರಣಗೊಂದಿದೆ. ಇಂದಿನ ದಿನಗಳಲ್ಲಿ ಚಿಕ್ಕಮ್ಮ, ಅತ್ತಿಗೆ ಮತ್ತು ಇತರರು ರಕ್ಷಾ ಬಂಧನ ಕಟ್ಟುತ್ತಾರೆ.
ರಕ್ಷಾಬಂಧನ ಆಚರಿಸುವ ಪೌರಾಣಿಕ ಕಾರಣಗಳು ವ್ರತ್ರ ಅಸುರನಿಂದ ಸೋಲಿಸಲ್ಪಟ್ಟಂತಹ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ಕೈಗೆ ರಾಖಿ ಕಟ್ಟಿಕೊಳ್ಳಬೇಕು ಎಂದು ಗುರು ಬ್ರಹಸ್ಪತಿ ಅವರು ಹೇಳಿದರು. ಬ್ರಹಸ್ಪತಿ ಅವರ ಮಾತಿನಂತೆ ಇಂದ್ರನ ಒಡನಾಡಿ ಸಚಿ ದೇವಿಯು ಇಂದ್ರನಿಗೆ ರಾಖಿ ಕಟ್ಟಿದಳು ಎಂದು ಭವಿಷ್ಯ ಪುರಾಣದಲ್ಲಿದೆ. ವರುಣ ದೇವನನ್ನು ಒಲೈಸಿಕೊಳ್ಳುವ ಸಲುವಾಗಿ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ ಎಂದು ಇನ್ನೊಂದು ಪುರಾಣವು ಹೇಳಿದೆ. ರಕ್ಷಾಬಂಧನ ಹಬ್ಬದಂದು ಹಬ್ಬದ ಸ್ನಾನ, ತೆಂಗಿನ ಕಾಯಿ ಉಡುಗೊರೆ ನೀಡುವುದು ಮತ್ತು ಸಮುದ್ರ ದೇವನಿಗೆ ಪೂಜೆ ಮಾಡುವುದು ಈ ಹಬ್ಬದ ದಿನ ನಡೆಯುತ್ತದೆ.
ರಕ್ಷಾಬಂಧನ ಹಬ್ಬವನ್ನು ಮೀನುಗಾರ ಸಮುದಾಯದವರು ತುಂಬಾ ವಿಜೃಂಭಣೆಯಿಂದ ಆಚರಿಸುವರು. ಈ ವೇಳೆ ವರುಣ ದೇವನಿಗೆ ರಾಖಿ ಮತ್ತು ತೆಂಗಿನಕಾಯಿಯನ್ನು ಸಮರ್ಪಿಸುವರು. ಪುರಾಣಗಳ ಪ್ರಕಾರ ಈ ದಿನವನ್ನು ನಾರಿಯಲ್ ಪೂರ್ಣಿಮಾ’ ಎಂದು ಕರೆಯಲಾಗುತ್ತದೆ. ರಕ್ಷಾ ಬಂಧನದ ದಿನ ಶುಭ ಮತ್ತು ಅಶುಭ ಮುಹೂರ್ತ ಪ್ರತೀ ರಕ್ಷಾ ಬಂಧನದಂದು ಬರುವಂತಹ ಭದ್ರಾ ಸಮಯದ ಬಗ್ಗೆ ಎಲ್ಲರೂ ಗಮನವನ್ನಿಡಬೇಕು. ಜ್ಯೋತಿಷಿಗಳ ಪ್ರಕಾರ ಭದ್ರಾ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಈ ಸಮಯದಲ್ಲಿ ರಾಖಿ ಕಟ್ಟುವುದು ಕೂಡ ಅಶುಭವೆಂದು ನಂಬಲಾಗಿದೆ. ಅದಾಗ್ಯೂ ಈ ರಕ್ಷಾ ಬಂಧನದ ದಿನದಂದು ಭದ್ರಾ ಸಮಯವಿಲ್ಲದೆ ಇದ್ದರೂ ದಿನದಲ್ಲಿ ಕೆಲವು ಬೇರೆ ಅಶುಭ ಸಮಯವಿದೆ. ಇದನ್ನು ಕಡೆಗಣಿಸಬೇಕು. ಅಶುಭ ಚೌಗಾಡಿಯಾ, ರಾಹುಕಾಲ ಮತ್ತು ಯಮಘಂಟ ಕಾಲದಲ್ಲಿ ರಾಖಿ ಕಟ್ಟಬಾರದು.
ಶ್ರಾವಣ ತಿಂಗಳ ಪೂರ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಪೂರ್ಣಿಮೆಯು ತಿಂಗಳ 15ನೇ ದಿನವಾಗಿದೆ. ಈ ವರ್ಷ ಆಗಸ್ಟ್ 26, 2018ರಂದು ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಪೂರ್ಣಿಮಾ ತಿಥಿಯು ಆ.25ರಂದು ಮಧ್ಯಾಹ್ನ 3.15ಕ್ಕೆ ಆರಂಭವಾಗಿ ಆ.26ರಂದು ಸಂಜೆ 5.25ರ ತನಕ ಇರುವುದು. ದನಿಷ್ಠ ನಕ್ಷತ್ರವಿರುವುದು ಮತ್ತು ಪಂಚಕವು(ಐದು ದಿನಗಳ ಸಮಯ)ವು ಆರಂಭವಾಗುವುದು. ಎಲ್ಲಾ ರೀತಿಯ ಪೂಜೆ ಮತ್ತು ಶುಭ ಕಾರ್ಯಗಳಿಗೆ ಪಂಚಕವನ್ನು ಅಶುಭವೆಂದು ನಂಬಲಾಗಿದೆ.
ಆ.26ರಂದು ಬೆಳಗ್ಗೆ 7.45ರಿಂದ ಮಧ್ಯಾಹ್ನ 12.28ರ ವರೆಗಿನ ಸಮಯವು ರಾಖಿ ಕಟ್ಟಲು ತುಂಬಾ ಶುಭ ಸಮಯವೆಂದು ಪರಿಗಣಿಸಲಾಗಿದೆ. ಮಧ್ಯಾಹ್ನ 2.03ರಿಂದ 3.38ರ ವರೆಗಿನ ಸಮಯ ಕೂಡ ಶುಭವಾಗಿದೆ. ರಾಹುಕಾಲ ಬೆಳಗ್ಗೆ 5.13ರಿಂದ 6.48ರ ತನಕ ಯಮಗಂಟೆ ಮಧ್ಯಾಹ್ನ 3.38ರಿಂದ 5.13ರ ತನಕ ಕಾಲ ಚೌಗಾರಿಯಾ(ಅಶುಭ ಚೌಗಾರಿಯಾ: ಮಧ್ಯಾಹ್ನ 12.28 ರಿಂದ 2.03
ಲಕ್ಷ್ಮೀ ದೇವಿಯು ರಾಕ್ಷಸನ ಕೈಗೆ ರಾಖಿ ಕಟ್ಟಿದ್ದರು ರಕ್ಷಾ ಬಂಧನವೆನ್ನುವುದು ಹಿಂದಿಯ ಎರಡು ಪದಗಳಿಂದ ಬಂದಿದೆ. ಒಂದು ರಕ್ಷೆ ಅಂದರೆ ರಕ್ಷಿಸುವುದು ಮತ್ತು ಬಂಧನ ಅಂದರೆ ಕಟ್ಟುವುದು. ಎರಡನ್ನು ಜತೆಯಾಗಿ ಸೇರಿಸಿದರೆ ಇದು ರಕ್ಷಣೆಯ ಬಂಧವಾಗುವುದು.
ಪುರಾಣಗಳ ಪ್ರಕಾರ ಒಂದು ಸಲ ಬಲಿ ರಾಕ್ಷಸನು ತನ್ನೊಂದಿಗೆ ಇರಬೇಕೆಂದು ವಿಷ್ಣುವಿನಿಂದ ಮಾತು ಪಡೆಯುತ್ತಾನೆ. ವಿಷ್ಣು ತುಂಬಾ ದೀರ್ಘ ಕಾಲ ತನಕ ವೈಕುಂಠಕ್ಕೆ ಬರದೇ ಇದ್ದಾಗ ಲಕ್ಷ್ಮೀ ದೇವಿಯು ಚಿಂತಿತಳಾಗಿ ಬಂದು ಬಲಿಯ ಕೈಗೆ ರಕ್ಷೆಯನ್ನು ಕಟ್ಟಿ ಆತನನ್ನು ಸೋದರನನ್ನಾಗಿಸುವಳು. ತನಗೆ ಉಡುಗೊರೆಯಾಗಿ ವಿಷ್ಣುವನ್ನು ನೀಡಬೇಕೆಂದು ಆಕೆ ಕೇಳುವಳು. ಬಲಿಯು ಆಕೆಯ ಮಾತಿನಂತೆ ವಿಷ್ಣುವನ್ನು ವೈಕುಂಠಕ್ಕೆ ಕಳುಹಿಸಿಕೊಡುವನು. ಇತಿಹಾಸದಲ್ಲಿ ರಾಖಿಯ ಕುರಿತಾದ ಉಲ್ಲೇಖಗಳು ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸನಿಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು.
ಮತ್ತೊಂದು ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಆಗ ಆಕೆಯು ಚಕ್ರವರ್ತಿ ಹುಮಾಯೂನನಿಗೆ ರಾಖಿಯನ್ನು ಕಳುಹಿಸಿದಳು. ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು.ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
