ತಿಪಟೂರು:
ಸಾರ್ಥವಳ್ಳಿ, ತಿಪಟೂರು ತಾಲೂಕು, ದಿನಾಂಕ 24.12.2021: ಸಾರ್ಥವಳ್ಳಿ ಗ್ರಾಮವನ್ನು ತಂಬಾಕು ಮುಕ್ತ ಮಾಡುವ ನಿಟ್ಟಿನಲ್ಲಿ ಗ್ರಾಮಸ್ಥರನ್ನು ಒಳಗೊಂಡಂತೆ ಇಂದು ವಿಶೇಷ ಗ್ರಾಮ ಸಭೆಯನ್ನು ನಡೆಸಲಾಯಿತು. ವಿಶೇಷ ಗ್ರಾಮ ಸಭೆ ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೂಪ ರವರು ಆರೋಗ್ಯಪೂರ್ಣ ಗ್ರಾಮದ ಮಹತ್ವವನ್ನು ತಿಳಿಸುತ್ತಾ ತಂಬಾಕು ಬಳಕೆಯು ಯುವಜನತೆಯನ್ನು ದಾರಿತಪ್ಪಿಸುತ್ತಿದ್ದು, ಇದರ ಕಪಿಮುಷ್ಠಿಯಿಂದ ಯುವಜನತೆಯನ್ನು ಹೊರಗೆ ತರಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಪ್ರತಿಯೊಂದು ಗ್ರಾಮವು ತಂಬಾಕು ಮುಕ್ತ ವಾಗುವ ನಿಟ್ಟಿನಲ್ಲಿ ಮುನ್ನಡೆದರೆ ನಮ್ಮ ದೇಶವೇ ಆರೋಗ್ಯಪೂರ್ಣ ರಾಷ್ಟ್ರವಾಗುವಲ್ಲಿ ಯಾವುದೇ ಸಂಶಯವಿಲ್ಲ. ಗ್ರಾಮವನ್ನು ತಂಬಾಕು ಮುಕ್ತ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಮಸ್ಥರು ಹಾಗೂ ಅಂಗಡಿ ಮಾಲೀಕರು, ಸಹಕರಿಸಬೇಕು” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ಥವಳ್ಳಿ ಗ್ರಾಮದ ಪ್ರವೇಶದ್ವಾರದಲ್ಲಿ “ತಂಬಾಕು ಮುಕ್ತ ಗ್ರಾಮ ನಾಮಫಲಕವನ್ನು” ಅಧಿಕೃತವಾಗಿ ನೆಡುವ ಮೂಲಕ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಶಾಲಾ ಮಕ್ಕಳು, ಗ್ರಾಮಸ್ಥರು, ಈ ಅಭಿಯಾನದ ಹಿಂದಿರುವ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಬೆಂಗಳೂರಿನ ಸಂಯೋಜಕರಾದ ಡಾ. ಚಂದ್ರಶೇಖರ್, ಪ್ರವೀಣ್ ರಾವ್ ಮತ್ತು ಅಚ್ಚುತ ಉಪಸ್ಥಿತರಿದ್ದರು.
ಎಸ್ ಎಲ್ ಬಿ ಎಸ್ ಪ್ರೌಢಶಾಲೆ ಸಾರ್ಥವಳ್ಳಿ ಶಾಲಾ ಮುಖ್ಯೋಪಾಧ್ಯಾಯರಾದ ಕಾಂತರಾಜು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಒಳ್ಳೆಯ ಕೆಲಸ ಮಾಡಿದರೆ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
