ತುಮಕೂರು:
ಶ್ರೀಕೃಷ್ಣನು 5 ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದನು. ಧರ್ಮಪಾಲನೆಗಾಗಿ ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಿಸಿದವನು ಶ್ರೀಕೃಷ್ಣ ಎಂದು ಮುರಳಿಕೃಷ್ಣಪ್ಪ ಅಭಿಪ್ರಾಯಪಟ್ಟರು.
ದೇವರಾಯಪಟ್ಟಣದ ಶ್ರೀಕೃಷ್ಣ ಕಲಾ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಮತ್ತು ಕುರುಕ್ಷೇತ್ರ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಪ್ಪು ಮಾಡಿದವರು, ತಪ್ಪಿಗೆ ಕಾರಣರಾದವರೆಲ್ಲರನ್ನೂ ಶ್ರೀಕೃಷ್ಣ ಸಂಹಾರ ಮಾಡಿದನು. ಹಾಗೆ ಶ್ರೀಕೃಷ್ಣನನ್ನು ಸ್ತ್ರೀಲೋಲ ಎಂದು ಯಾರೇ ಕರೆದರೂ ಸ್ತ್ರೀ ಕುಂದು ಕೊರತೆಗಳ ನಿವಾರಕನು ಕೂಡಾ ಹೌದು ಎಂದು ಮುರಳಿಕೃಷ್ಣಪ್ಪ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಅರಣ್ಯಾಧಿಕಾರಿ ಬಿ.ಚಿಕ್ಕಪ್ಪಯ್ಯ ಮಾತನಾಡಿ ಶ್ರೀಕೃಷ್ಣ ಸರ್ವರಿಗೂ ದೇವರಾಗಿದ್ದಾನೆ. ಆತನ ಬಗೆಗಿನ ಕುರುಕ್ಷೇತ್ರ ನಾಟಕ ಪ್ರದರ್ಶನ ಮಾಡುತ್ತಿರುವ ಶ್ರೀಕೃಷ್ಣ ಕಲಾ ಸಂಘಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದರು.
ಆನಂತರ ಪ್ರದರ್ಶನಗೊಂಡ ಕುರುಕ್ಷೇತ್ರ ನಾಟಕದಲ್ಲಿ ಕರ್ಣನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ ಸಜ್ಜೆಹೊಸಹಳ್ಳಿ ಚಿಕ್ಕಪ್ಪಯ್ಯನವರ ನಟನೆ ಎಲ್ಲರಿಗೂ ಮೆಚ್ಚುಗೆ ಉಂಟು ಮಾಡಿತು. ಜೊತೆಗೆ ನಾಟಕದಲ್ಲಿ ದುರ್ಯೋಧನನ ಪಾತ್ರಧಾರಿ ಮಹಾಲಿಂಗಯ್ಯ, ಶಿವಕುಮಾರ್, ಕೃಷ್ಣನ ಪಾತ್ರಧಾರಿ, ಬಸವರಾಜು, ಶಕುನಿ ಶಿವಲಿಂಗಯ್ಯ, ಅರ್ಜುನ ಶ್ರೀರಂಗಯ್ಯ, ಭೀಮನ ಪಾತ್ರಧಾರಿ ಡಾ.ಶಿವಕುಮಾರ್, ಮಹಾಲಿಂಗಪ್ಪ ಮೊದಲಾದವರು ಅಭಿಮಾನಿಗಳನ್ನು ರಂಜಿಸಿದರು.
ಕುರುಕ್ಷೇತ್ರ ನಾಟಕದ ಗಂಗಾತೀರ ಸನ್ನಿವೇಶದಲ್ಲಿ ಕರ್ಣನ ಪಾತ್ರದ ಮೂಲಕ ನೋಡುಗರ ಕಣ್ಣುಗಳನ್ನು ಒದ್ದೆಯಾಗುವಂತೆ ಮಾಡಿದ ಚಿಕ್ಕಪ್ಪಯ್ಯನವರ ಅಭಿನಯ ಮನಮೋಹಕವಾಗಿತ್ತು. ಕಾರ್ಯಕ್ರಮದಲ್ಲಿ ಸಾಹಿತಿ ಎನ್.ನಾಗಪ್ಪ, ಡಾ.ಎಸ್.ಶಿವಣ್ಣ ಬೆಳವಾಡಿ, ಡಾ. ರಾಜಣ್ಣ, ಬಸವಲಿಂಗಯ್ಯ, ಕೃಷ್ಣಪ್ಪ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ರಾಜಣ್ಣ, ಪ್ರೇಮಮಹಾಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಬಿ.ಕರಿಯಣ್ಣ ನಿರೂಪಿಸಿದರೆ, ಸಂಘದ ಅಧ್ಯಕ್ಷರಾದ ಸಜ್ಜೆ ಹೊಸಹಳ್ಳಿ ಚಿಕ್ಕಪ್ಪಯ್ಯ ಸ್ವಾಗತಿಸಿದರು.