ಬಳ್ಳಾರಿ:
ನಗರದ ನಲ್ಲಚೇರವು ಪ್ರದೇಶದ ವಾಲ್ಮೀಕಿ ಭವನದ ಎದುರುಗಡೆಯ ಮೈದಾನದಲ್ಲಿ ಆ.14ರಿಂದ 28ರವರೆಗೆ 15 ದಿನಗಳ ಕಾಲ ನಡೆದ ರಾಜ್ಯಮಟ್ಟದ ಖಾದಿ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.
ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ, ತೆಲಂಗಾಣ, ಮುಂಬೈ, ಮಧ್ಯಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧೆಡೆಯಿಂದ ಖಾದಿ ವ್ಯಾಪಾರಿಗಳು ಆಗಮಿಸಿದ್ದರು. 75 ಮಳಿಗೆಗಳು ಹಾಕಲಾಗಿತ್ತು. ಎಲ್ಲ ಮಳಿಗೆಗಳು ಭರ್ತಿಯಾಗಿದ್ದವು. ಖಾದಿ ಮತ್ತು ಗ್ರಾಮೋದ್ಯಗ ಮಂಡಳಿ ಇಟ್ಟುಕೊಂಡಿದ್ದ ಟಾರ್ಗೆಟ್ ದಾಟಿದ್ದು, ನಿನ್ನೆ ಸಂಜೆಯವರೆಗೆ 2 ಕೋಟಿ ರೂ. ವ್ಯಾಪಾರ ವಹಿವಾಟು ನಡೆದಿದೆ.
ಮಂಗಳವಾರ ಸಂಜೆ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿ ಅಂಬರ ಚರಕ ಸಂಘದ ಅಧ್ಯಕ್ಷ ಸೀತಾರಾಮಚಾರಿ ಅವರು ಮಾತನಾಡಿ, 3 ವರ್ಷಗಳ ನಂತರ ನಗರದಲ್ಲಿ ನಡೆದ ಖಾದಿ ಉತ್ಸವ ಅತ್ಯಂತ ಯಶಸ್ವಿಯಾಗಿದೆ. ಇಷ್ಟೊಂದು ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿರುವುದು ಇದೇ ಮೊದಲು ಎಂದರು.
ಈ ಖಾದಿ ಗ್ರಾಮೋದ್ಯಗ ಮಂಡಳಿಯ ಜಾಗದ ಬದಲು ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಈ ಉತ್ಸವ ನಡೆದಿದ್ದರೇ ಹೆಚ್ಚಿನ ವಹಿವಾಟು ಆಗುತ್ತಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಿವೃತ್ತ ಜಿಲ್ಲಾ ಖಾದಿಗ್ರಾಮೋದ್ಯಗ ಅಧಿಕಾರಿ ನಜೀರ್ ಅಹ್ಮದ್ ಮಾತನಾಡಿ, ರಾಜ್ಯಮಟ್ಟದ ಖಾದಿ ಉತ್ಸವಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ರೀತಿಯ ಉತ್ಸವವನ್ನು ಪ್ರತಿವರ್ಷ ಖಾದಿ ಮಂಡಳಿಗೆ ಸೇರಿದ ವಾಲ್ಮೀಕಿಭವನದ ಎದುರುಗಡೆಯ ಜಾಗದಲ್ಲಿಯೇ ನಡೆಸಬೇಕು. ಇನ್ಮುಂದೆ ಜನರಿಗೆ ಈ ಜಾಗದಲ್ಲಿ ಖಾದಿ ಉತ್ಸವ ನಡೆಯುತ್ತದೆ ಎಂಬ ಭಾವನೆ ಮೂಡಲು ಸಾಧ್ಯವಾಗುತ್ತದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಲಿಂಗಪ್ಪ ಬಿ.ಕೆ, ಜಿಲ್ಲಾ ಖಾದಿಗ್ರಾಮೋದ್ಯಗ ಅಧಿಕಾರಿ ಗೋವಿಂದಪ್ಪ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸೌಮ್ಯ ಗಾರ್ಮೆಂಟ್ಸ್ನ ಬಸವರಾಜ, ರೂರಲ್ ಡೆವಲಪ್ಮೆಂಟ್ ಖಾದಿ ಗ್ರಾಮೋದ್ಯಗ ಸಂಘದ ಅಧ್ಯಕ್ಷ ರಂಗನಾಥ ಮತ್ತಿತರರು ಇದ್ದರು.
ಈ ಖಾದಿ ಉತ್ಸವದಲ್ಲಿ ಭಾಗವಹಿಸಿದ್ದ ವ್ಯಾಪಾರಿಗಳಿಗೆ ಇದೇ ಸಂದರ್ಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
