ಕುಣಿಗಲ್
ವಿಶೇಷ ವರದಿ: ಎಂ.ಡಿ. ಮೋಹನ್
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೋಟೆ ನಿಂಗಯ್ಯನಪಾಳ್ಯ (ಮಾವಿನಕಟ್ಟೆಪಾಳ್ಯ) ಗ್ರಾಮದ ಹೆಣ್ಣು ಮಗುವೊಂದನ್ನ ಬಲಿಪಡೆದ ಬೀದಿ ನಾಯಿಗಳ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಪಟ್ಟಣದಲ್ಲಿ ದಿನೆ ದಿನೆ ಬೀದಿ ನಾಯಿಗಳ ಕಾಟ ಹೆಚ್ಚುತ್ತಿರುವ ಬಗ್ಗೆ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರೀಕರು ಆತಂಕ ವ್ಯಕ್ತಪಡಿಸುವ ಮೂಲಕ ಸಂಬಂಧಪಟ್ಟ ಪುರಸಭಾ ಅಧಿಕಾರಿಗಳಾಗಲಿ ಅಥವಾ ನೂತನವಾಗಿ ಪುರಸಭೆಗೆ ಆಯ್ಕೆಯಾದ ಸದಸ್ಯರುಗಳಾಗಲಿ ಸೂಕ್ತ ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಹಿಡಿಶಾಪ ಹಾಕುತ್ತಿದ್ದಾರೆ.
ಬೀದಿನಾಯಿಗಳು ಹೆಚ್ಚಲು ಬೇಕಾಬಿಟ್ಟಿಯಾಗಿ ನಾಯಿಕೊಡೆಗಳಂತೆ ಸೃಷ್ಟಿಯಾಗಿರುವ ಕೋಳಿ ಮತ್ತು ಮಾಂಸದಂಗಡಿಗಳಿಂದ ಬಿಸಾಕುವ ತ್ಯಾಜ್ಯವು ಒಂದು ಕಾರಣವಾಗಿದೆ. ಪಟ್ಟಣದ ಪುರಸಭಾ ಕಚೇರಿಯನ್ನೊಳಗೊಂಡಂತಿರುವ 12ನೇ ವಾರ್ಡ್ನ ಜಿ.ಕೆ.ಬಿ.ಎಂ.ಎಸ್. ಶಾಲಾ ಮೈದಾನ ಮತ್ತು ಆಸ್ಪತ್ರೆಯ ಹಿಂಭಾಗ ಹಾಗೂ ಅದೇ ಸರಹದ್ದಿನಲ್ಲಿ ಬರುವ ಕಾಲುವೆ ರಸ್ತೆ ಹಾಗೂ ಛೌಟರಿಗಳ ಪಕ್ಕದಲ್ಲಿ ನಿತ್ಯ ಬೀದಿ ನಾಯಿಗಳು ಗುಂಪು ಗುಂಪಾಗಿ ಸಂಚರಿಸುತ್ತಿದ್ದು ಶಾಲಾ ಮಕ್ಕಳು, ಮಹಿಳೆಯರು, ವಯಸ್ಸಾದವರು ಮಕ್ಕಳನ್ನು ಕರೆದೊಯ್ಯುವಾಗ ಎದುರಾದ ನಾಯಿಗಳ ಗುಂಪು ಮಕ್ಕಳನ್ನು ಕಡಿಯಲು ಮುಂದಾಗುತ್ತಿವೆ.
ಅಲ್ಲದೆ ಒಬ್ಬಂಟಿ ಇದ್ದರಂತೂ ಅಟ್ಟಾಡಿಸಿಕೊಂಡು ಕಡಿಯುತ್ತಿವೆ ಎಂದು ನಾಗರೀಕರು ತಮ್ಮ ಅಳಲನ್ನ ಭಯ ಭೀತಿಯಿಂದಲೇ ಪತ್ರಿಕೆಯೊಂದಿಗೆ ಹೇಳಿಕೊಳ್ಳುವ ಮೂಲಕ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಾಗಲಿ ಅಥವಾ ಪುರಸಭಾ ಸದಸ್ಯರಾಗಲಿ ಮುಂದಿನ ದಿನದಲ್ಲಿ ಮಕ್ಕಳ ಪ್ರಾಣಕ್ಕೆ ಸಂಚಕಾರ ಉಂಟಾಗುವ ಮೊದಲು ಬೀದಿ ನಾಯಿಗಳ ಕಾಟವನ್ನು ತಪ್ಪಿಸಲಿ ಎಂದು ಆರೋಪಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಪಟ್ಟಣದ 18 ನೇ ವಾರ್ಡ್ ಹೌಸಿಂಗ್ ಬೋರ್ಡ್ನಲ್ಲಿಯೂ ನಾಯಿಗಳ ಕಾಟ ಹೆಚ್ಚಾಗಿದ್ದು ಬೈಕ್ ಸವಾರರನ್ನೇ ಬೆನ್ನಟ್ಟಿ ಓಡುವ ಮೂಲಕ ಭಯಭೀತಿಯನ್ನ ಉಂಟು ಮಾಡಿವೆ. ಇದೇ ವ್ಯಾಪ್ತಿಯಲ್ಲಿರುವ ದೊಡ್ಡಕೆರೆ ದಂಡೆಗೆ ಹೊಂದಿಕೊಂಡಂತಿರುವ ಕೋಟೆನಿಂಗಯ್ಯನ ಪಾಳ್ಯ ಗ್ರಾಮದ 6ನೇ ತರಗತಿ ಓದುತ್ತಿದ್ದ ತೇಜಸ್ವಿನಿ ಎಂಬ ಹೆಣ್ಣುಮಗಳೊಬ್ಬಳು ನಾಯಿಗಳಿಗೆ ಬಲಿಯಾದ ಸಂಗತಿ ಇನ್ನೂ ಹಸಿರಾಗಿರುವಾಗಲೇ…ಇದೀಗ ನಾಗರಿಕ ವಲಯದಲ್ಲಿ ನಾಯಿಗಳ ಉಪಟಳದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಬೇಕಾ ಬಿಟ್ಟಿ ಮನಸೋ ಇಚ್ಚೇ ಹಾಕುವ ಮಾಂಸದ ತ್ಯಾಜ್ಯವನ್ನು ತಿಂದು ದಷ್ಟಪುಷ್ಟವಾದ ಇದೇ ಬೀದಿ ನಾಯಿಗಳು ಮಗುವನ್ನ ಕಡಿದು ಸಾಯಿಸಿದ್ದ ದೃಶ್ಯ ಇನ್ನೂ ನಾಗರೀಕರ ಕಣ್ಮುಂದೆ ಹಸಿರಾಗಿರುವಾಗಲೇ 9, 10, 13, 16ನೇ ವಾರ್ಡ್ ಸೇರಿದಂತೆ ಪಟ್ಟಣದಾದ್ಯಂತ ನಾಯಿಗಳ ಕಾಟ ಹೆಚ್ಚುತ್ತಲೇ ಇದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ನಾಯಿ ಹಿಡಿಸುವ ಕೆಲಸದಲ್ಲಿ ಮಾತ್ರ ಬೇಕಾಬಿಟ್ಟಿ ಮಾಡುತ್ತಿದ್ದಾರೆ.
ಮಗುವಿನ ಹತ್ಯೆಯಾದ ಹಿನ್ನೆಲೆಯಲ್ಲಿ ಒತ್ತಡ ಹೆಚ್ಚಿದಾಗ ಅಧಿಕಾರಿಗಳು ನಾಯಿ ಹಿಡಿಯುವ ಆಟ ಆಡಿದರು ಅದರಲ್ಲು ಬೋಗಸ್ ಮಾಡಿದ್ದಾರೆ ಎಂಬುದು ನಾಗರೀಕರ ವಾದ. ಎರಡು ಮೂರು ದಿನ ನಾಯಿ ಹಿಡಿದರೆ 40-50 ಸಾವಿರ ಬಿಲ್ ಮಾಡಿಕೊಂಡಿದ್ದಾರೆಂದು ಟೀಕಿಸುತ್ತಿರುವ ನಾಗರೀಕರು ಅಂದು ನಾಯಿ ಹಿಡಿದಿದ್ದರೆ ಇಷ್ಟು ಬೇಗ ಎಲ್ಲಿಂದ ಬರುತ್ತಿವೆ ನಾಯಿಗಳು ಎಂದು ಪ್ರಶ್ನಿಸುವ ಮೂಲಕ ಸಮರ್ಪಕವಾಗಿ ನಾಯಿ ಹಿಡಿಸುವ ಕೆಲಸವನ್ನು ಸಹ ಮಾಡುತಿಲ್ಲಾ ಎಂದು ಆಕ್ರೋಶ ಪಡಿಸುವ ನಾಗರೀಕರು ಕೂಡಲೇ ಮಕ್ಕಳ ಪ್ರಾಣಕ್ಕೆ ಕುತ್ತು ಉಂಟಾಗುವ ಮೊದಲು ಹೆಚ್ಚಾಗಿರುವ ಬೀದಿ ನಾಯಿಗಳ ಕಾಟದಿಂದ ಮುಕ್ತಿ ಗೊಳಿಸಿ ನಾಗರಿಕರ ಮತ್ತು ಮಕ್ಕಳ ಹಕ್ಕನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ.
ಇನ್ನಾದರೂ ಗುಂಪು ಗುಂಪಾಗಿ ಸಂಚರಿಸುವ ನಾಯಿಗಳು ಯಾವಾಗ ಎಲ್ಲಿ ಇರುತ್ತವೆ ಎಂಬುದನ್ನ ಶೀಘ್ರವಾಗಿ ಪತ್ತೆ ಹಚ್ಚಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ನಾಯಿ ಹಾವಳಿಯಿಂದ ಮುಕ್ತಿಗೊಳಿಸಿ ಸಾರ್ವಜನಿಕರಿಗೆ ನೆಮ್ಮದಿ ನೀಡುತ್ತಾರೆಯೇ ಎಂದು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
