ಪಪಂಗೆ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರಕ್ಕೆ ಪತ್ರ : ರಾಕೇಶ್ ಕುಮಾರ್

ಹುಳಿಯಾರು:

    ಹುಳಿಯಾರು ಪಪಂ ಅಧ್ಯಕ್ಷರು ಮತ್ತು ಉಪಾಧ್ಯಕರ ಸದಸ್ಯತ್ವ ವಜಗೊಂಡಿರುವ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳ ನೇಮಕ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದರು.

    ಹುಳಿಯಾರು ಪಟ್ಟಣ ಪಂಚಾಯ್ತಿಗೆ ಗುರುವಾರ ದಿಡೀರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಅವರು ಮಾತನಾಡಿದರು.ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇಲ್ಲದ ಕಾರಣ ಸಾರ್ವಜನಿಕರಿಗೆ ಮೂಲ ಸೌಕರ್ಯ ಸೇರಿದಂತೆ ಅನೇಕ ತೊಂದರೆಗಳಾಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ಆಡಳಿತಾಧಿಕಾರಿಗಳು ನೇಮಕವಾದ ನಂತರ ಸಾರ್ವಜನಿಕ ಕೆಲಸಗಳು ಸುಲಲಿತವಾಗಿಯೂ, ಸರಾಗವಾಗಿ ನಡೆಯುತ್ತದೆ. ಅಲ್ಲಿಯವರೆವಿಗೂ ಸಾರ್ವಜನಿಕರು ಸಹಕರಿಸುವಂತೆ ಹೇಳಿದರು.

      ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬರ ಪರಿಹಾರದಲ್ಲಿ 12 ಲಕ್ಷ ರೂ. ಮಂಜೂರಾಗಿದೆ. ಅಲ್ಲದೆ ಈ ಹಣದಲ್ಲಿ ತುರ್ತಾಗಿ ಆಗಬೇಕಿರುವ ಕಾಮಗಾರಿಗೆ ಅನುಮೋದನೆ ಸಹ ಸಿಕ್ಕಿದೆ. ಜಿಯಾಲಜಿಸ್ಟ್ ಕಳಿಸಿ ನೀರಿನ ಪಾಯಿಂಟ್ ಮಾಡಿಸಿ ಹೊಸ ಕಳವೆಬಾವಿ ಕೊರಿಸಿ ಸಮಸ್ಯೆ ಪರಿಹರಿಸಲಾಗುವುದು. ಅಲ್ಲಿಯವರೆವಿಗೂ ಟ್ಯಾಂಕರ್ ಮೂಲಕ ನೀರು ಸರಬರಾಜುವಿಗೆ ಅವಕಾಶವಿದ್ದು ಒಂದು ಟ್ಯಾಂಕರ್‍ಗೆ 550 ರೂ. ನಂತೆ ಸರ್ಕಾರ ನೀಡಲಿದ್ದು ಮುಖ್ಯಾಧಿಕಾರಿಗಳೇ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ನೀರು ಹೊಡೆಸಬಹುದಾಗಿದೆ ಎಂದರು.

       ಹುಳಿಯಾರು ಗ್ರಾಮ ಪಂಚಾಯ್ತಿಯಾಗಿದ್ದ ಸಂದರ್ಭದಲ್ಲಿ ನಿವೇಶನ ನೊಂದಣಿಯಾದ ತಕ್ಷಣ ಖಾತೆ ಮಾಡಿ ಮನೆ ಕಟ್ಟಲು ಪರವಾನಗಿ ಕೊಡುತ್ತಿದ್ದರು. ಆದರೆ ಈಗ ಪಟ್ಟಣ ಪಂಚಾಯ್ತಿಯಾಗಿದ್ದು ಖಾತೆ ಬದಲಾವಣೆಗೆ ಟೌನ್ ಪ್ಲಾನ್ ಕೇಳುತ್ತಿದ್ದಾರೆ. ವಾಸ್ತವವಾಗಿ ಅನೇಕರು ಟೌನ್ ಪ್ಲಾನ್ ಇಲ್ಲದೆ ನಿವೇಶನ ಖರಿಧಿಸಿದ್ದಾರೆ. ಹಾಗಾಗಿ ಮನೆ ಕಟ್ಟಲಾಗದೆ, ಬ್ಯಾಂಕ್ ಲೋನ್ ಪಡೆಯಲಾಗದೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಹೇಳಿಕೊಂಡರು.

      ಇದಕ್ಕೆ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಆಗುವ ಸಂದರ್ಭದಲ್ಲೇ ಟೌನ್ ಪ್ಲಾನ್ ಮಾಡಿಸಬೇಕಿರುತ್ತದೆ. ಹಾಗಾಗಿ ಊರು ಸುಂದರವಾಗಿಯೂ, ವ್ಯವಸ್ಥಿತವಾಗಿಯೂ, ಸ್ವಚ್ಚವಾಗಿಯೂ ಕಟ್ಟಬೇಕಾದಾಗ ಕೆಲ ತೊಂದರೆ ಆಗುವುದು ಸಹಜ. ಇದನ್ನು ಅರ್ಥ ಮಾಡಿಕೊಂಡು ಸಹಕರಿಸುವುದು ನಾಗರೀಕರ ಕರ್ತವ್ಯ ಎಂದರು.

     ಇದೇ ಸಂದರ್ಭದಲ್ಲಿ ಮತ್ತೊಂದು ಆಧಾರ್ ಕೇಂದ್ರ ತೆರೆಯುವಂತೆಯೂ, ಬೀದಿ ದೀಪಗಳನ್ನು ಅಳವಡಿಸುವಂತೆಯೂ, ಕಾಲಕಾಲಕ್ಕೆ ಚರಂಡಿ ಸ್ವಚ್ಚ ಮಾಡಿಸುವಂತೆಯೂ, ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆಯೂ ಜಿಲ್ಲಾಧಿಕಾರಿಗಳ ಬಳಿ ಕೇಳಿಕೊಳ್ಳಲಾಯಿತು.

      ಈ ಬಗ್ಗೆ ಪಪಂ ಮುಖ್ಯಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿಯೂ ಜಿಲ್ಲಾಧಿಕಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಮಲ್ಲಿಕಾರ್ಜುನ್, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಪಪಂ ಸದಸ್ಯರುಗಳಾದ ಎಲ್.ಆರ್.ಚಂದ್ರಶೇಖರ್, ರಾಘವೇಂದ್ರ, ಗೀತಾಬಾಬು, ಕೋಳಿ ಶ್ರೀನಿವಾಸ್, ರೈತ ಸಂಘದ ಕೆಂಕೆರೆ ಸತೀಶ್, ಸಾಮಾಜಿಕ ಕಾರ್ಯಕರ್ತ ಪ್ರಸನ್ನಕುಮಾರ್, ಇಮ್ರಾಜ್, ಕರವೇಯ ಲಕ್ಷ್ಮೀಕಾಂತ್, ಫುಟ್‍ಪಾತ್ ವ್ಯಾಪಾರಿಗಳ ಸಂಘದ ಹೂವಿನ ಬಸವರಾಜು, ಕಾಮನಬಿಲ್ಲು ಪೌಂಡೇಷನ್‍ನ ಚನ್ನಕೇಶವ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link