ಹೊಸಪೇಟೆ:
ನಗರದಲ್ಲಿ ನೂರಾರು ಬಡಜನರು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಅವರಿಗೆ ಕೂಡಲೇ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸವಾದಿ) ತಾಲೂಕು ಘಟಕದ ನೇತೃತ್ವದಲ್ಲಿ ನೂರಾರು ಜನರು ನಗರಸಭೆ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಸಿಪಿಐ(ಎಂ)ನ ಜಿಲ್ಲಾಧ್ಯಕ್ಷ ಆರ್.ಭಾಸ್ಕರ್ ರೆಡ್ಡಿ ಮಾತನಾಡಿ, ನಗರದಲ್ಲಿ ನಾನಾ ಸಮಸ್ಯೆಗಳು ಇದ್ದರೂ ಸ್ಥಳೀಯ ಶಾಸಕ ಆನಂದ್ ಸಿಂಗ್ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡದೆ ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರ, ಸ್ವಾರ್ಥ ಸಾಧನೆಗೆ ಶಾಸಕರು ಮುಂದಾಗಿದ್ದಾರೆ. ರಾಜೀನಾಮೆ ನೀಡುವ ಮೂಲಕ ಜವಾವ್ದಾರಿಯಿಂದ ದೂರವಿದ್ದು, ಜನರ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಕಳೆದ ಕೆಲವು ತಿಂಗಳಿನ ಹಿಂದೆ ನಿವೇಶನ ರಹಿತ ಬಡಜನರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ 8 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ ಈವರೆಗೂ ಅರ್ಜಿಗಳಿಗೆ ಸೂಕ್ತ ಸ್ಪಂದನೆ ಮಾಡದೆ ಕಡೆಗಣಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
2015ನೇ ಸಾಲಿನಲ್ಲಿ ನಿವೇಶನಕ್ಕಾಗಿ ಅರ್ಜಿಹಾಕಿದ ಎಲ್ಲರಿಗೂ ಆದ್ಯತೆ ಮೇರೆಗೆ ಮಂಜೂರು ಮಾಡಬೇಕು. ನಗರ ಹಾಗೂ ಗ್ರಾಮೀಣ ಭಾಗದ ನಿವೇಶನ ರಹಿತರಿಗೆ 1 ಸಾವಿರ ಎಕರೆ ಭೂಮಿಯನ್ನು ನಿವೇಶನ ಕ್ಕೆ ಸ್ವಾಧೀನ ಪಡಿಸಿ ಕೊಳ್ಳಬೇಕು.
ನಗರದಲ್ಲಿ ಕುಡಿವ ನೀರನ್ನು ಸರಿಯಾಗಿ ಪೂರೈಸಬೇಕು. 24/7 ನಿರಂತರ ಕುಡಿವ ನೀರಿನ ವ್ಯವಸ್ಥೆಯನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಆರ್.ಎಸ್. ಬಸವರಾಜ್, ಜಂಬಯ್ಯ ನಾಯಕ, ಕರುಣಾನಿಧಿ, ಗೋಪಾಲ್, ಯಲ್ಲಾಲಿಂಗ, ಸ್ವಾಮಿ, ನಾಗರತ್ನ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








