ಬೆಂಗಳೂರು :
ಸಂಕಷ್ಟದಲ್ಲಿರುವ ನೇಕಾರರ ಮತ್ತು ಮೀನುಗಾರರ ಸಾಲಮನ್ನಾ ಮಾಡುವ ಮೂಲಕ ಅವರ ಬದುಕಿನಲ್ಲಿ ಸಂಕಷ್ಟವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು 73ನೇ ಸ್ವಾತಂತ್ರ್ಯ ದಿನಾಚರಣೆ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಳಿಕ, ರಾಜಧಾನಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದ ಬಳಿಕ, ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದರು.
ಈ ವೇಳೆ ನೇಕಾರರು ಮತ್ತು ಮೀನುಗಾರರ 1 ಲಕ್ಷ ಸಾಲಮನ್ನಾ ಮಾಡುವುದಾಗಿ ಘೋಷಿಸುವ ಮೂಲಕ ಸಿಹಿ ಸುದ್ದಿ ನೀಡಿದರು. ನೇಕಾರರು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಲು ದುಡಿಮೆ ಬಂಡವಾಳದ ಕೊರತೆ ಇತ್ತು. ಜೊತೆಗೆ ಮಾರುಕಟ್ಟೆಯ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದರು. ಅವರು ನೇಕಾರಿಕೆ ಚಟುವಟಿಕೆ ಮುಂದುವರಿಸಿ, ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರವು ಇವರಿಗೆ ಸಹಾಯ ಹಸ್ತ ನೀಡುವುದು ಅಗತ್ಯವೆಂದು ಭಾವಿಸಿ, ಸಹಕಾರಿ ಬ್ಯಾಂಕ್ ಮತ್ತು ಸಹಕಾರ ಸಂಘಗಳಿಂದ ಪಡೆದ 1 ಲಕ್ಷ ರೂ ವರೆಗಿನ ಸಾಲ ಮನ್ನಾ ಮಾಡಲಾಗಿದೆ. ಇದಕ್ಕೆ 98.29 ಕೋಟಿ ರೂ ವೆಚ್ಚವಾಗಿಲಿದ್ದು, 29.621 ನೇಕರಾರಗಿ ಅನುಕೂಲವಾಗಲಿದೆ ಎಂದರು.
ಇನ್ನೂ ಕರಾವಳಿಯ 3 ಜಿಲ್ಲೆಗಳಲ್ಲಿ ರೈತರ ಸಾಲ ಮನ್ನಾ ಮಾದರಿಯಲ್ಲಿ ಮೀನುಗಾರರ ಸಾಲ ಮನ್ನಾ ಮಾಡಿದಲ್ಲಿ ಅವರ ಆರ್ಥಿಕ ಸಂಕಷ್ಟವನ್ನು ಮೀರಿ ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅರಿತು, ಮೀನುಗಾರರು ವಾಣಿಜ್ಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಶೇ.2ರ ಬಡ್ಡಿ ದರದಲ್ಲಿ ಪಡೆದಿರುವ 5 ಸಾವಿರ ರೂ ವರೆಗಿನ ಸಾಲ ಮನ್ನಾ ಮಾಡಲು ಆದೇಶ ಹೊರಡಿಸಲಾಗಿದೆ. ಇದಕ್ಕೆ 60.58 ಕೋಟಿ ವೆಚ್ಚವಾಗಲಿದ್ದು, 23,507 ಮೀನುಗಾರರು, ಅದರಲ್ಲೂ ಬಹುಪಾಲು ಮೀನುಗಾರ ಮಹಿಳೆಯರು ಸಾಲದ ಶೂಲದಿಂದ ಮುಕ್ತಿ ಪಡೆಯಲಿದ್ದಾರೆ ಎಂದು ತಿಳಿಸಿದರು.
ನಂತರ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ, ಹೊರ ರಾಜ್ಯ ಹೊರ ದೇಶಗಳಿಂದ ಬಂದು ರಾಜ್ಯದಲ್ಲಿ ನೆಲೆಸಿರುವ ಜನ ಇಲ್ಲಿನ ಭಾಷೆ ಸಂಸ್ಕೃತಿ ಮತ್ತು ಜೀವನ ವಿಧಾನಗಳಿಗೆ ಹೊಂದಿಕೊಂಡು ಕನ್ನಡತನವನ್ನು ಗೌರವಿಸುವುದಲ್ಲದೆ ತಮ್ಮತನವನ್ನು ವಹಿಸಿಕೊಳ್ಳಿ ಎಂದು ಕರೆ ನೀಡಿದರು. ಈ ವಿಚಾರದಲ್ಲಿ ಕನ್ನಡಿಗರು ಇತರರಿಗೆ ಮಾದರಿಯಾಗಿದ್ದಾರೆ ಕನ್ನಡಿಗರು ನಿಂತ ನೆಲ ಮತ್ತು ಅಲ್ಲಿನ ಜನರ ಜೊತೆ ಹೊಂದಿಕೊಂಡು ಬಾಳುತ್ತಿದ್ದಾರೆ ಇದು ಎಲ್ಲರಿಗೂ ಅನುಕರಣೀಯ ಮಾದರಿಯಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/fisherman.gif)