ದಾವಣಗೆರೆ:
ಹುತಾತ್ಮ ರೈತರ ಸಮಾಧಿಗಳ ಸ್ಥಳಾಂತರಕ್ಕೆ ಸೂಕ್ತ ನಿವೇಶನ ಕಲ್ಪಿಸಬೇಕೆಂದು ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಆಗ್ರಹಿಸಿದರು.
ತಾಲೂಕಿನ ಆನಗೋಡು ಗ್ರಾಮದಲ್ಲಿ ಶುಕ್ರವಾರ ನಡೆದ ಹುತಾತ್ಮ ರೈತ ದಿನಾಚರಣೆಯಲ್ಲಿ ಹುತಾತ್ಮ ರೈತರಾದ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ದನೂರು ನಾಗರಾಜಾಚಾರ್ ಅವರುಗಳ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಸಗೊಬ್ಬರದ ಬೆಲೆ ಏರಿಕೆ ವಿರುದ್ಧ ರೈತರಿಂದ ನಡೆದ ಹೆದ್ದಾರಿ ತಡೆ ಚಳವಳಿಯಲ್ಲಿ ಪೆÇಲೀಸರ ಗುಂಡಿಗೆ ಬಲಿಯಾಗಿದ್ದ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ದನೂರು ನಾಗರಾಜಾಚಾರ್ ಸಮಾಧಿಗಳು ಆನಗೋಡು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಂತೆ ಇವೆ. ಇದೀಗ ಹೆದ್ದಾರಿ ಅಗಲೀಕರಣವಾಗುತ್ತಿದ್ದು, ಇವುಕ್ಕೆ ಯಾವುದೇ ತೊಂದರೆಯಾಗದಂತೆ ಗ್ರಾಪಂ ನಿರ್ಧಾರ ಕೈಗೊಂಡು, ಇವುಗಳ ಸ್ಥಳಾಂತರಕ್ಕೆ ನಿವೇಶನ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸೂಚನೆಯಂತೆ, ಸಮಿತಿಯ ಮುಖಂಡರೂ ಸಹ ಸಮಾಧಿ ಸ್ಥಳಾಂತರಕ್ಕೆ ಸೂಕ್ತ ಜಾಗ ಒದಗಿಸಿದರೆ ಸಮಿತಿ ಸಮ್ಮತಿ ನೀಡಲಿದ್ದೇವೆಂದು ಸ್ಪಷ್ಟಪಡಿಸಿದರು.ಜಗಳೂರು, ಭರಮಸಾಗರ ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸುವ ಮೂಲಕ ರೈತರ ಬದುಕನ್ನು ಹಸನಾಗಿಸುವ ಕೆಲಸವನ್ನು ಸರ್ಕಾರ ಪ್ರಥಮಾದ್ಯತೆಯ ಮೇಲೆ ಕೈಗೊಳ್ಳಬೇಕಾಗಿದೆ. ಕೆರೆಗಳನ್ನು ತುಂಬಿಸುವ ಕೆಲಸ ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಸಂಕಲ್ಪದಿಂದ ಸಾಧ್ಯವಾಗುತ್ತಿದೆ ಎಂದರು.
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿಯಿಂದಾಗಿ ನಿತ್ಯವೂ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಇದರಿಂದಾಗಿ ರೈತರಿಗೆ ಇನ್ನಿಲ್ಲದ ತೊಂದರೆ ಯಾಗುತ್ತಿದೆ. ತಕ್ಷಣವೇ ಜನ ಪ್ರತಿನಿಧಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಆಗಿರುವ ಲೋಪವನ್ನು ಸರಿಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದ ಅವರು, ಹೆದ್ದಾರಿಯಂಚಿನ ರೈತರಿಗೆ, ಗ್ರಾಮಸ್ಥರಿಗೆ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಸರ್ವೀಸ್ ರಸ್ತೆ, ಕೆಳ ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಮಾತನಾಡಿ, ನೆರೆ ಸಂತ್ರಸ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಪರಿಹಾರದ ಹಣವನ್ನು ಕೆಲವೆಡೆಯಲ್ಲಿ ಲೇವಾದೇವಿಗಾರರು, ಬಡ್ಡಿ ವ್ಯವಹಾರಸ್ಥರು ಕಸಿದುಕೊಳ್ಳುವ ಸಾಧ್ಯತೆ ಇದ್ದು, ಸಂತ್ರಸ್ತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೇರವಾಗಿ ರೈತರಿಗೆ ಪರಿಹಾರದ ಹಣವು ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಭಾರತೀಯ ರೈತ ಒಕ್ಕೂಟದ ಮುಖಂಡ ಎಚ್.ಆರ್.ಲಿಂಗರಾಜ ಮಾತನಾಡಿ, ಹರಿಹರ ತಾಲೂಕಿನಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇರೀತಿ ಕರ್ನಾಟಕದ ಕೇಂದ್ರ ಬಿಂದು ಆಗಿರುವ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ ಮಾತನಾಡಿ, ರಾಜಕಾರಣಿಗಳು ಎಂದೂ ಸಹ ರೈತರ ಒಳಿತನ್ನು ಬಯಸುವ ಹಿತೈಷಿಗಳಲ್ಲ. ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ ದುಬಾರಿ ದಂಡ ವಿಧಿಸುವಂತಹ ಕಾನೂನು ತರುವ ಸರ್ಕಾರವು ನಿತ್ಯವೂ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಹಿತರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನಾದರೂ ಸರ್ಕಾರಗಳು ಎಂ.ಎಸ್.ಸ್ವಾಮಿನಾಥನ್ ವರದಿಯ ಶಿಫಾರಸ್ಸಿನಂತೆ ರೈತ ಬೆಳೆಯುವ ಬೆಳೆಗೆ ವೈe್ಞÁನಿಕ ಬೆಲೆ ನಿಗದಿ ಮಾಡುವ ಮೂಲಕ ರೈತರ ಏಳಿಗೆಗೆ ಶ್ರಮಿಸಬೇಕೆಂದು ಒತ್ತಾಯಿಸಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನನಾಯಕನಹಳ್ಳಿ ಮುರುಗೇಂದ್ರಪ್ಪ ಮಾತನಾಡಿ, ರಸಗೊಬ್ಬರದ ಬೆಲೆ ಏರಿಕೆಯ ವಿರುದ್ಧ ಹೋರಾಟದ ಸಂದರ್ಭದಲ್ಲಿ ಪೆÇಲೀಸ್ ಗೋಲಿಬಾರ್ನಲ್ಲಿ ಹುತಾತ್ಮರಾದ ಕಲ್ಲಿಂಗಪ್ಪ, ನಾಗರಾಜಾಚಾರ್ ಜೊತೆಗೆ ಹೋರಾಟದ ಕ್ಷಣಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ರೈತ ಮುಖಂಡರಾದ ಆಲೂರು ನಾಗರಾಜ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಮಲ್ಲಾಪುರ ದೇವರಾಜ, ಇಟಗಿ ಬಸವರಾಜಪ್ಪ, ಹೊನ್ನನಾಯಕನಹಳ್ಳಿ ಶಿವರುದ್ರಪ್ಪ, ಆರ್.ಜಿ.ಹಳ್ಳಿ ರಾಜಶೇಖರ, ಆವರಗೆರೆ ರುದ್ರಮುನಿ, ಎಚ್.ಮೌಲಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
