ನಗರದಲ್ಲಿ ಮಳೆ : ಸರ್ಕಾರಿ ಕಚೇರಿಗಳು ಜಲಾವೃತ

ಬಳ್ಳಾರಿ

    ಕಳೆದ ಎರಡ್ಮೂರು ದಿನಗಳಿಂದ ಗಣಿನಗರಿಯಲ್ಲಿ ಆಗೊಮ್ಮೆ ಈಗೊಮ್ಮೆ ಜಿಟಿಜಿಟಿಯಾಗಿ ಸುರಿಯುತ್ತಿದ್ದ ಮಳೆ, ಬುಧವಾರ ಮಧ್ಯ ರಾತ್ರಿ ಮತ್ತು ಗುರುವಾರ ಧಾರಾಕಾರವಾಗಿ ಸುರಿದಿದ್ದು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಸಾಂಖ್ಯಿಕ (ಅಂಕಿ- ಸಂಖ್ಯೆಗಳ) ಇಲಾಖೆ ಕಚೇರಿಗೆ, ತಹಸೀಲ್ದಾರ್ ಕಚೇರಿ, ಕರ್ನಾಟಕ ಪಬ್ಲಿಕ್ ಸ್ಕೂಲ್‍ಗೆ ನೀರು ನುಗ್ಗಿದ್ದು, ರೈಲ್ವೆ ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಸಾಂಖಿಕ ಇಲಾಖೆಗೆ ಮಧ್ಯಾಹ್ನದಿಂದ ರಜೆಯನ್ನು ಘೋಸಿಸಲಾಗಿದೆ.

     ಜಿಲ್ಲಾ ಸಾಂಖ್ಯಿಕ (ಅಂಕಿ – ಸಂಖ್ಯೆಗಳ) ಕಚೇರಿ ಸಿಬ್ಬಂದಿಯ ಕೆಲಸ, ಕಾರ್ಯಕ್ಕೂ ಅಡ್ಡಿಯುಂಟಾಗಿದ್ದರಿಂದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಅನುಮತಿ ಮೇರೆಗೆ ಮಧ್ಯಾಹ್ನದ ರಜೆಯನ್ನು ಆ ಕಚೇರಿಯ ಸಿಬ್ಬಂದಿಗೆ ಮೇಲಾಧಿಕಾರಿ ಘೋಷಿಸಿದ್ದಾರೆ.

     ಅಲ್ಲದೇ, ಬಳ್ಳಾರಿಯ ರಾಯಲ್ ಕಾಲೊನಿಯಲ್ಲಂತೂ ಗುಡಿಸಲು ಮನೆಗೂ ಈ ಮಳೆ ನೀರು ನುಗ್ಗಿವೆ. ಗುಡಿಸಲು ನಿವಾಸಿಗಳು ತಗ್ಗು ಪ್ರದೇಶದಲ್ಲಿ ವಾಸವಿದ್ದರಿಂದ ಕೂರಲು, ನಿಲ್ಲಲು ಜಾಗ ಕೂಡ ಇಲ್ಲದಂತಾಗಿದೆ. ಹಾಗೂ ಮನೆಗಳ ಮುಂದೆಯೂ ಕೂಡ ಮಳೆಯ ನೀರು ಜಲಾವೃತಗೊಂಡಿದೆ. ಅದರೊಳಗೆ ಒಳಚರಂಡಿ ನೀರು ಮಿಶ್ರಿತಗೊಂಡ ಪರಿಣಾಮ ಕಾಲೊನಿಯೆಲ್ಲಾ ದುರ್ವಾಸನೆ ಹಬ್ಬಿದೆ. ಪ್ರತಿಬಾರಿ ಮಳೆ ಸುರಿದಾಗಲೆಲ್ಲಾ ಈ ಕಾಲೊನಿಯ ನಿವಾಸಿಗಳು ಈ ಸಮಸ್ಯೆಯನ್ನು ಎದುರಿಸುತ್ತಿರೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

     ಸೇತುವೆಗಳು ಜಲಾವೃತ, ಸಂಚಾರ ವ್ಯವಸ್ಥೆ ಬಂದ್: ನಗರದ ಕನಕದುರ್ಗಮ್ಮ ದೇಗುಲ ರಸ್ತೆಯ ಕೆಳಸೇತುವೆ, ಸತ್ಯನಾರಾಯಣ ಪೇಟೆ ಕೆಳಸೇತುವೆ ಹಾಗೂ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರ ರಸ್ತೆಯ ಕೆಳಸೇತುವೆಯಲ್ಲಿ ಮಳೆ ನೀರು ಜಲಾವೃತ ಗೊಂಡಿದೆ. ಎಸ್ಪಿ ವೃತ್ತದಿಂದ ಕನಕದುರ್ಗಮ್ಮ ದೇಗುಲ ರಸ್ತೆಯ ಮಾರ್ಗ, ಗಾಂಧಿನಗರದಿಂದ ಸತ್ಯನಾರಾಯಣ ಪೇಟೆ ಕೆಳಸೇತುವೆ ರಸ್ತೆ ಮಾರ್ಗ ಮತ್ತು ಖಾಸಗಿ ಬಸ್ ನಿಲ್ದಾಣದ ರಸ್ತೆಯ ಮಾರ್ಗವು ಸಂಪೂರ್ಣ ಸಂಚಾರ ಸ್ಥಗಿತಗೊಂಡಿತ್ತು. ನಗರದ ಬಹುತೇಕ ಖಾಸಗಿ ಸಂಸ್ಥೆಗಳ ಕಚೇರಿಗಳು ಹಾಗೂ ಅಂಗಡಿ, ಮುಂಗಟ್ಟುಗಳು ಈ ಮಳೆ ಸುರಿದ ಕಾರಣ ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದವು.

    ಕೆಲವರು ಮನೆಯಿಂದ ಹೊರಗಡೆಯೇ ಬರಲಿಲ್ಲ. ಸರಿಸುಮಾರು ಮೂರೂವರೆ ಗಂಟೆಗೂ ಅಧಿಕಕಾಲ ಧಾರಾಕಾರವಾಗಿ ಮಳೆಯು ಸುರಿದಿದ್ದು, ಮಧ್ಯಾಹ್ನವೂ ಕೂಡ ಜಿಟಿ, ಜಿಟಿ ಹನಿಯಿಂದ ಕೂಡಿದೆ. ಈಗಲೂ ಅದು ಆಗಾಗ ಮುಂದುವರಿದಿದೆ.

ಹೆಚ್ಚಿನಮಳೆಯ ಪ್ರಮಾಣ ಎಷ್ಟೇಷ್ಟು?:

    ಜಿಲ್ಲಾದ್ಯಂತ ಸುರಿದ ಮಳೆಯ ಪ್ರಮಾಣದ ಕುರಿತು ಹೀಗಿದೆ. ಬಳ್ಳಾರಿಯಲ್ಲಿ ಶೇ. 60, ಹಡಗಲಿಯಲ್ಲಿ ಶೇ.30.6, ಹಗರಿಬೊಮ್ಮನಹಳ್ಳಿಯಲ್ಲಿ ಶೇ. 59.4, ಹೊಸಪೇಟೆಯಲ್ಲಿ 34.0, ಕೂಡ್ಲಿಗಿಯಲ್ಲಿ ಶೇ.38.9, ಸಂಡೂರಿನಲ್ಲಿ ಶೇ. 92.8, ಸಿರುಗುಪ್ಪಾದಲ್ಲಿ ಶೇ. 62.8, ಹರಪನಹಳ್ಳಿಯಲ್ಲಿ ಶೇ. 21.6 ಮಿಲಿಮೀಟರ್ ನಷ್ಟು ಮಳೆಯು ಸುರಿದಿದೆ.

    ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕಚೇರಿ ಹಾಗೂ ಖಾಸಗಿ ಕಂಪನಿಗಳ ನೌಕರರು ಮನೆಯಿಂದ ಹೊರಗಡೆ ಹೋಗಲು ಅತೀವ ತೊಂದರೆ ಅನುಭವಿಸಿದರು. ಇನ್ನು ಮಳೆ ಆರಂಭಕ್ಕೂ ಮುನ್ನವೇ ಮನೆಯಿಂದ ಹೊರಗಡೆ ಹೋದವರು ಮಳೆಯಿಂದ ತಪ್ಪಿಸಿ ಕೊಳ್ಳಲು ವಿವಿಧೆಡೆ ಆಶ್ರಯ ಪಡೆದುಕೊಂಡರು.

    ಇಲ್ಲಿನ ಕನಕದುರ್ಗಮ್ಮ ದೇಗುಲ ರಸ್ತೆಯ ಕೆಳಸೇತುವೆ ಹಾಗೂ ಸತ್ಯನಾರಾಯಣ ಪೇಟೆ ರಸ್ತೆಯ ಕೆಳಸೇತುವೆ ಮತ್ತು ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದ ರಸ್ತೆಯ ಕೆಳಸೇತುವೆಯಲ್ಲಿ ಮಳೆಯ ನೀರು ವಿಪರೀತ ಸಂಗ್ರಹಗೊಂಡಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ಅಡೆತಡೆ ಉಂಟಾಯಿತು.

     ಅಲ್ಲದೇ, ಕುರುಗೋಡು ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿದವು. ಸಿದ್ಧಮ್ಮನ ಹಳ್ಳಿ ಗ್ರಾಮದ ಸಂಪರ್ಕ ಸೇತುವೆ ಮೇಲೆಲ್ಲಾ ಮಳೆಯ ನೀರಿನ ಕೋಡಿ ಹರಿಯಿತು. ಅದರಿಂದ ಕೆಲಕಾಲ ಸಾರ್ವಜನಿಕ ವಾಹನಗಳ ಸಂಚಾರದ ಅಡೆತಡೆ ಉಂಟಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link