ಕೊರಟಗೆರೆ
ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದು ರೈತರಿಗೆ ತೊಂದರೆ ಕೊಡುತ್ತಿದ್ದ ಚಿರತೆಗಳು ರೈತರ ಜಮೀನಿನ ಹತ್ತಿರ ಪ್ರತ್ಯೇಕ ಎರಡು ಕಡೆಯಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಬಿದ್ದು ಚೀರಾಟ ನಡೆಸಿರುವ ಘಟನೆ ಮಂಗಳವಾರ ಮತ್ತು ಬುಧವಾರ ಎರಡು ದಿನ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ರೈತನ ತೋಟದಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಸೋಮವಾರ ತಡರಾತ್ರಿ ಚಿರತೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ವರ್ಗ ಮಂಗಳವಾರ ಮುಂಜಾನೆ ಮತ್ತೊಂದು ಅರಣ್ಯಕ್ಕೆ ರವಾನಿಸಿದ್ದಾರೆ.
ಓಬಳದೇವರಹಳ್ಳಿ ಬೆಟ್ಟದ ಕೆಳಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮಂಗಳವಾರ ರಾತ್ರಿ ಮತ್ತೊಂದು ಚಿರತೆ ಬಿದ್ದಿದೆ. ಅದನ್ನು ಸಹ ಅರಣ್ಯ ಇಲಾಖೆ ಬುಧವಾರ ಮುಂಜಾನೆ ಚಿರತೆಯನ್ನು ಸೆರೆಹಿಡಿದು ಮತ್ತೊಂದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಚಿರತೆಯನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಸಾರ್ವಜನಿಕರು ಮುಗಿಬಿದ್ದು, ಚಿರತೆಯ ಮುಖಕ್ಕೆ ಕಡ್ಡಿಯಿಂದ ತಿವಿದು ಗಾಯಗೊಳಿಸಿ ಗಾಬರಿಗೊಳಿಸಿ ನಂತರ ಅದರ ಹೊಟ್ಟೆಯ ಭಾಗಕ್ಕೂ ಸಹ ನೋವುಂಟು ಮಾಡಿದ್ದಾರೆ. ಬೋನಿನಲ್ಲಿದ್ದ ಚಿರತೆಯ ಮೇಲೆ ಕೂಗಾಡುತ್ತಾ ಚಿರತೆಗೆ ಸಾಕಷ್ಟು ಆಯಾಸ ಉಂಟು ಮಾಡುವುದರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲು ಸಹ ಸ್ಥಳೀಯರು ದರ್ಪ ಮೆರೆದಿದ್ದಾರೆ.
ಚಿರತೆಯ ರಕ್ಷಣೆಗೆ ಮತ್ತು ಅದನ್ನು ರವಾನಿಸಲು ಬಂದ ಅರಣ್ಯ ಮತ್ತು ಪೋಲೀಸ್ ಇಲಾಖೆ ಸಿಬ್ಬಂದಿ ಮೇಲು ಸಹ ಚಿರತೆ ನೋಡಲು ಆಗಮಿಸಿದ ಸಾರ್ವಜನಿಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮಗೆ ಬರಲು ಹೇಳಿದವರು ಯಾರು? ಚಿರತೆ ಬೋನಿಗೆ ಬಿದ್ದ ಮೇಲೆ ಏಕೆ ಬರುತ್ತೀರಿ? ನಾವೆ ಕಾಡಿಗೆ ಬಿಟ್ಟು ಬರುತ್ತೇವೆ ಎಂದು ದರ್ಪದ ಮಾತುಗಳನ್ನಾಡಿದ್ದು ಅರಣ್ಯ ಅಧಿಕಾರಿಗಳಿಗೆ ರಕ್ಷಣೆಯೆ ಇಲ್ಲದಂತಾಗಿದೆ.
ಕೊರಟಗೆರೆ ಪೋಲೀಸ್ ಸಿಪಿಐ ನದಾಫ್ ಮತ್ತು ಅರಣ್ಯ ಇಲಾಖೆಯ ಸತೀಶಚಂದ್ರ ಸ್ಥಳಕ್ಕೆ ಆಗಮಿಸಿ ಸ್ಥಳೀಯರನ್ನು ದೂರ ಸರಿಸುವ ಪ್ರಯತ್ನ ಮಾಡಿದರೂ ಸಹ, ಸಾರ್ವಜನಿಕರ ನಡುವೆ ಮೊಬೈಲ್ನಲ್ಲಿ ಚಿತ್ರ ಸೆರೆ ಹಿಡಿಯಲು ನೂಕುನುಗ್ಗಲು ಉಂಟಾಗಿದೆ. ಕೊನೆಗೆ ಹರಸಾಹಸ ಪಟ್ಟು ಚಿರತೆಯನ್ನು ಕಾಡಿಗೆ ರವಾನಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
