ದಾವಣಗೆರೆ:
ನಿವೇಶನ ವ್ಯಾಜ್ಯದ ಪರ ವಕಾಲತ್ತು ವಹಿಸಿರುವ ಸರ್ಕಾರಿ ವಕೀಲರ ಹೆಸರು ಬಳಸಿ ದೂರುದಾರನಿಂದ ಹಣ ಪಡೆಯುತ್ತಿದ್ದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಯೊಬ್ಬ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗುರುವಾರ ಬೆಳಿಗ್ಗೆ ನಗರದ ಪಿ.ಬಿ.ರಸ್ತೆಯಲ್ಲಿರುವ ಆನಂದ ರೆಸಿಡೆನ್ಸಿ ಎದುರು ನಡೆದಿದೆ.
ತಾಲ್ಲೂಕಿನ ಮಳಲಕೆರೆ ಗ್ರಾಮ ಪಂಚಾಯಿತಿಯ ಪಿಡಿಒ ನಿಂಗಾಚಾರಿ ಎಂಬುವರೇ ದೂರುದಾರನಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿರುವ ಪಿಡಿಒ ಆಗಿದ್ದಾರೆ.
ಘಟನೆಯ ಹಿನ್ನೆಲೆ: ಕಾಶೀಪುರ ಗ್ರಾಮದ ಎಸ್.ಎನ್.ಮಹೇಶ್ ಎಂಬುವವರಿಗೆ ಸೇರಿದ್ದ ಮನೆಯ ಹಿಂಭಾಗದ ಸರ್ಕಾರಿ ಭೂಮಿಯನ್ನು ಪಿಡಿಒ ನಿಂಗಾಚಾರಿ ಗ್ರಾಮದ ಅನೇಕರಿಗೆ ಯಾವುದೇ ಹಕ್ಕು ಪತ್ರ, ಅನುಭವದ ಆಧಾರವಿಲ್ಲದೇ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದೇ 2008ರಲ್ಲಿ ಮಳಲಕೆರೆ ಗ್ರಾಮಪಂಚಾಯತಿ ಕಾರ್ಯದರ್ಶಿಯಾಗಿದ್ದಾಗ ಅಕ್ರಮವಾಗಿ ಹಂಗಾಮಿ ಖಾತೆ ಮಾಡಿಕೊಟ್ಟಿದ್ದರು.
ಇದೀಗ ಸದರಿ ಗ್ರಾಮ ಪಂಚಾಯತ್ಗೆ ನಿಂಗಾಚಾರಿಯೇ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹಂಗಾಮಿ ಖಾತೆ ಮಾಡಿಸಿಕೊಂಡಿದ್ದ ಮೂರು ಮಂದಿ, ಮಹೇಶ್ ಅವರ ತಂದೆಗೆ ಸೇರಿದ ಪಿತ್ರಾರ್ಜಿತ ಜಾಗವನ್ನು ಅತಿಕ್ರಮಿಸಿಕೊಂಡಿದ್ದರಲ್ಲದೇ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂಬಂಧ ಪಿಡಿಒ ನಿಂಗಾಚಾರಿ ದೂರುದಾರ ಮಹೇಶ್ ಅವರಿಗೆ ಕರೆ ಮಾಡಿ ಪಂಚಾಯಿತಿಯಿಂದ ನೇಮಿಸಿರುವ ವಕೀಲರಿಗೆ ಹಣ ನೀಡಬೇಕು. ಹಾಗಾದರೆ ಮಾತ್ರ ಅವರು ನಿಮ್ಮ ಪರವಾಗಿ ವಾದ ಮಾಡುತ್ತಾರೆ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಆಗ ಮಹೇಶ್ ಸರ್ಕಾರದಿಂದ ನೇಮಿಸಿರುವ ವಕೀಲರಿಗೆ ಏಕೆ ಹಣ ನೀಡಬೇಕು ಎಂದು ಪಿಡಿಒ ಅವರನ್ನು ಪ್ರಶ್ನಿಸಿದ್ದಾರೆ. ಆಗ ಪಿಡಿಒ ವಕೀಲರು ಪಂಚಾಯ್ತಿಗೆ ಒಂದು ಮೊಕದ್ದಮೆ 5500 ರೂ. ಶುಲ್ಕ ನಿಗಿಧಿ ಮಾಡಿ ಬಿಲ್ ನೀಡುತ್ತಾರೆ. ಅದನ್ನು ನಾವು ದೂರುದಾರರಿಂದ ವಸೂಲಿ ಮಾಡಿ ವಕೀಲರಿಗೆ ನೀಡುತ್ತೇವೆ ಎಂಬುದಾಗಿ ನಿಂಗಾಚಾರಿ ತಿಳಿಸಿದ್ದರು.
ಇದರಿಂದ ಅನುಮಾನಗೊಂಡ ಮಹೇಶ್ ಎಸಿಬಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಬಿ ಡಿವೈಎಸ್ಪಿ ಪರಮೇಶ್ವರ್ ನೇತೃತ್ವದ ತಂಡವು ಗುರುವಾರ ಬೆಳಿಗ್ಗೆ 10 ಗಂಟೆಗೆ ದೂರುದಾರ ಮಹೇಶ್ ಅವರಿಂದ ಆನಂದ ರೆಸಿಡೆನ್ಸಿ ಬಳಿ 5 ಸಾವಿರ ರೂ ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ, ಪಿಡಿಒ ನಿಂಗಾಚಾರಿಯನ್ನು ವಶಕ್ಕೆ ಪಡೆದು, ಅಗ್ನಿಶಾಮಕ ದಳದ ಕಚೇರಿಯಲ್ಲಿ ಕರೆದೊಯ್ದು ವಿಚಾರಣೆ ನಡೆ ನಡೆಸಿದರು.
ಈ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ಗಳಾದ ನಾಗಪ್ಪ, ಮಧುಸೂದನ್, ಸಿಬ್ಬಂದಿಗಳಾದ ಉಮೇಶ್, ವೀರೇಶ್, ಕಲ್ಲೇಶ್, ಮೋಹನ್, ಧನರಾಜ್, ನಾಗರಾಜ್, ವಿನಾಯಕ, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
