ತುಮಕೂರು:
ನಗರದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸಂಸ್ಥೆ ಹಾಗೂ ಇತರೆ ಸಂಸ್ಥೆಗಳ ನಡುವೆ ನಡೆದಿರುವ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದ್ದಾರೆ.
ಈ ನಡುವೆ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಉದ್ಯೋಗಿಗಳ ಹೆಸರಿನಲ್ಲಿ ತುಮಕೂರಿನ ಶಿವಶ್ರೀ ಸೌಹಾರ್ದ ಸಹಕಾರ ಸಂಘ ದಲ್ಲಿ ಠೇವಣಿ ಇಡಲಾಗಿರುವ 4.7 ಕೋಟಿ ರೂ.ಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸೌಹಾರ್ದ ಸಹಕಾರಿ ಸಂಸ್ಥೆಯು 3 ಕಡೆ ಶಾಖೆಗಳನ್ನು ಹೊಂದಿದೆ. ಸದರಿ ಸೌಹಾರ್ದ ಸಹಕಾರ ಸಂಘದಲ್ಲಿ ಠೇವಣಿ ಇಡಲಾಗಿರುವ ಮೊತ್ತದಿಂದ ಬರುವ ಬಡ್ಡಿಯು ಡಾ.ಜಿ.ಪರಮೇಶ್ವರ ಅವರ ಅಣ್ಣನ ಮಗ ಆನಂದ್ ಎಂಬುವರಿಗೆ ಜಮೆಯಾಗುತ್ತಿತ್ತೆಂದು ತಿಳಿದು ಬಂದಿದೆ.
ಮೆಡಿಕಲ್ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಹಲವು ದೂರುಗಳಿದ್ದು, ಸಹಕಾರ ಸಂಘದಲ್ಲಿ ಬೇನಾಮಿ ಹೆಸರಿನಲ್ಲಿ ಖಾತೆ ತೆರೆದಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದಾರೆ. ಡಾ.ಜಿ.ಪರಮೇಶ್ವರ ಹಾಗೂ ಆನಂದ್ ಅವರ ಖಾತೆಗಳನ್ನು ಮತ್ತು ಆ ಖಾತೆಗಳಿಂದ ಆಗಿರುವ ವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳನ್ನು ಐ.ಟಿ. ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಪರಿಶೀಲನಾ ವೇಳೆ ಆನಂದ್ ಅವರು ಶಿವಶ್ರೀ ಸೊಸೈಟಿಯಿಂದ 6.7 ಕೋಟಿ ರೂ. ಸಾಲವನ್ನು ಪಡೆದಿರುವುದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ