ತುರ್ತಾಗಿ ರಸ್ತೆ ಗುಂಡಿ ಮುಚ್ಚಲು ಜನಪ್ರತಿನಿಧಿಗಳ ಸೂಚನೆ

ತುಮಕೂರು
    ತುಮಕೂರು ನಗರಾದ್ಯಂತ ಎಲ್ಲ ರಸ್ತೆಗಳಲ್ಲಿ ಕಾಣಿಸಿಕೊಂಡಿರುವ ರಸ್ತೆಗುಂಡಿಗಳನ್ನು ಮುಚ್ಚಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಜನಪ್ರತಿನಿಧಿಗಳು ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ . ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಸಭಾಗಂಣದಲ್ಲಿ ಸೋಮವಾರ ಬೆಳಗ್ಗೆ ಏರ್ಪಟ್ಟಿದ್ದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಚನೆ ನೀಡಲಾಗಿದೆ. 
 
    ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನರಸಿಂಹರಾಜು, ಪಟ್ಟಣ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳ ಆದರ್ಶ್, ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಎಸ್.ಗಿರಿಜಾ, ವಿರೋಧ ಪಕ್ಷದ ನಾಯಕ ಸಿ.ಎನ್.ರಮೇಶ್ ಅವರುಗಳು ಈ ಸಭೆಯಲ್ಲಿ ಭಾಗವಹಿಸಿ, ಪಾಲಿಕೆಯ ದೈನಂದಿನ ಆಡಳಿತ, ತುಮಕೂರು ನಗರದ ವಿವಿಧೆಡೆ ಉದ್ಭವಿಸಿರುವ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. 
   “ಇತ್ತೀಚಿನ ಸತತ ಮಳೆಯಿಂದ ನಗರಾದ್ಯಂತ ಎಲ್ಲ ರಸ್ತೆಗಳಲ್ಲೂ ಪಾಟ್‌ಹೋಲ್ಸ್ ಉಂಟಾಗಿ ರಸ್ತೆಗಳಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ತೀವ್ರವಾದ ತೊಂದರೆ ಉಂಟಾಗುತ್ತಿದೆ. ಗುಂಡಿಗಳನ್ನು ಮುಚ್ಚಲು ಕಳೆದ ಒಂದು ತಿಂಗಳಿಂದ ಪಾಲಿಕೆಯ ಅಧಿಕಾರಿಗಳ ಗಮನ ಸೆಳೆಯುತ್ತಿದ್ದರೂ, ಅಧಿಕಾರಿಗಳು ಗಮನಿಸುತ್ತಿಲ್ಲ” ಎಂದು ಲಕ್ಷ್ಮಿನರಸಿಂಹರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ . “ಒಂದು ವಾರದೊಳಗೆ ಟಾರ್ ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ ಕ್ರಮ ಜರುಗಿಸಬೇಕು” ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಸಭೆಯಲ್ಲಿದ್ದ ಇತರರೂ ಇದಕ್ಕೆ ದನಿಗೂಡಿಸಿದರು.
     ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ಆಶಾ, ಈ ಬಗ್ಗೆ ಶೀಘ್ರವಾಗಿ ಟೆಂಡರ್ ಕರೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. “ಗುಂಡಿ ಮುಚ್ಚುವ ವಿಷಯದಲ್ಲಿ ಅಧಿಕಾರಿಗಳು ಮೊದಲಿಗೆ ಎಲ್ಲ ವಾರ್ಡ್ಗಳಲ್ಲೂ ಸ್ಥಳಪರಿಶೀಲನೆ ಮಾಡಬೇಕು. ವಾಸ್ತವ ಸಮಸ್ಯೆಯನ್ನು ಅರಿತುಕೊಳ್ಳಬೇಕು. ಕೇವಲ ಕಚೇರಿಯಲ್ಲೇ ಕುಳಿತುಕೊಂಡು ನಿರ್ಧಾರ ಕೈಗೊಳ್ಳಬಾರದು” ಎಂದು ಸಲಹೆ ನೀಡಿದ ಲಕ್ಷ್ಮಿ ನರಸಿಂಹರಾಜು,”ನಗರದಲ್ಲಿ ವಿವಿಧ ಏಜೆನ್ಸಿಗಳು ಕಾಮಗಾರಿಗಳನ್ನು ನಡೆಸುತ್ತಿದ್ದು, ಸದರಿ ಏಜೆನ್ಸಿಗಳ ಒಂದು ಸಭೆ ನಡೆಸಿ, ಅವರುಗಳು ಎಲ್ಲೆಲ್ಲಿ ಕಾಮಗಾರಿ ನಡೆಸುತ್ತಾರೋ ಆಯಾ ರಸ್ತೆಗಳನ್ನು ರೆಸ್ಟೊರೇಷನ್ ಮಾಡುವಂತೆ ತಾಕೀತು ಮಾಡಬೇಕು” ಎಂದು ಪಾಲಿಕೆ ಅಧಿಕಾರಿಗಳನ್ನು ಆಗ್ರಹಿಸಿದರು.
      ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, “ನಗರದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಪಾಲಿಕೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರಾದ್ಯಂತ ಹಂದಿ ಮತ್ತು ಬೀದಿನಾಯಿಗಳ ಹಾವಳಿ ಉಂಟಾಗಿರುವ ಬಗ್ಗೆ, ಬೀದಿದೀಪಗಳ ಸಮಸ್ಯೆ ಅಧಿಕವಾಗಿರುವ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಅಧಿಕಾರಿಗಳ ಗಮನ ಸೆಳೆದರಲ್ಲದೆ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. 
 
      ಈ ಮಧ್ಯ  ಪಾಲಿಕೆಯ ಪ್ರಭಾರ ಆಯುಕ್ತರಾಗಿರುವ ತುಮಕೂರು ಉಪವಿಭಾಗಾಧಿಕಾರಿ ಸಿ.ಎಲ್.ಶಿವಕುಮಾರ್ ಮಾತನಾಡಿ, ತಾವು ಎಲ್ಲೇ ಇದ್ದರೂ ಪಾಲಿಕೆಯ ಯಾವುದೇ ಕೆಲಸ ಕಾರ್ಯಗಳನ್ನು ಆದ್ಯತೆಯಿಂದ ಮಾಡಿಕೊಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಎಕ್ಸಿಕ್ಯುಟೀವ್ ಇಂಜಿನಿಯರ್‌ಗಳಾದ ತಿಪ್ಪೇರುದ್ರಪ್ಪ ಮತ್ತು ಸದಾನಂದ ಬಿ.ರಾಯ್ಕರ್, ಆರೋಗ್ಯಾಧಿಕಾರಿ ಡಾ. ನಾಗೇಶ್‌ಕುಮಾರ್, ಟೂಡಾ ಆಯುಕ್ತರೂ ಹಾಗೂ ಪಾಲಿಕೆಯ ಉಪ ಆಯುಕ್ತ (ಕಂದಾಯ)ರೂ ಆಗಿರುವ ಯೋಗಾನಂದ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link