ಕೊರಟಗೆರೆ
ವಿಶೇಷ ವರದಿ:ರಂಗಧಾಮಯ್ಯ
ಸರಕಾರಿ ಬಸ್ ನಿಲ್ದಾಣದ ಹಿರಿಯ ಮಹಿಳೆಯರ ಹಾಗೂ ಮಕ್ಕಳ ಪೋಷಣೆಗಾಗಿ ಮೀಸಲಿರುವ ತಾಯಂದಿರ ವಿಶೇಷ ಕೊಠಡಿಯಲ್ಲಿ ಸಾರಿಗೆ ಇಲಾಖೆಯ ಹಳೆಯ ಸಾಮಾಗ್ರಿ ಮತ್ತು ಸಿಬ್ಬಂದಿಗಳ ಹಳೆಯ ಬಟ್ಟೆಯನ್ನು ಶೇಖರಿಸಿ ಹಗಲಿನಲ್ಲಿಯೇ ಕೊಠಡಿಗೆ ಬೀಗ ಹಾಕಲಾಗಿರುತ್ತದೆ. ನಿಲ್ದಾಣಕ್ಕೆ ರಾತ್ರಿ ಪಾಳೆಯದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಮದ್ಯ ಪಾನ ಮಾಡುವವರಿಗೆ ಅನುಕುಲ ಮಾಡಿಕೊಟ್ಟಂತಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷಾಂತರ ರೂ ಅನುದಾನದಿಂದ ಅಂದಿನ ಸಚಿವ ಸಿ.ವೀರಣ್ಣ ಅವಧಿಯಲ್ಲಿ ಬಸ್ಸಿನ ನಿಲ್ದಾಣಕ್ಕೆ 1986ರಲ್ಲಿ ಶಂಕುಸ್ಥಾಪನೆ ನೇರವೇರಿ, 1989ರಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಂದಿನ ರಾಜ್ಯ ಸಾರಿಗೆ ಸಚಿವ ಭೀಮಣ್ಣ ಖಂಡ್ರೆ ಬಸ್ ನಿಲ್ದಾಣP ಉದ್ಘಾಟನೆ ಮಾಡಿದ್ದರು.
ಬೆಂಗಳೂರು, ತುಮಕೂರು, ಪಾವಗಡ ಹಾಗೂ ಗೌರಿಬಿದನೂರು ಕಡೆಗೆ ಪ್ರಯಾಣಿಸಲು ಬರುವ ಮಹಿಳೆಯರ ವಿಶ್ರಾಂತಿಗಾಗಿ ಮೀಸಲಿರುವ ಕೊಠಡಿಯಲ್ಲಿ ಇಲಾಖೆ ಸಾಮಾಗ್ರಿ ಇಟ್ಟು ಬೀಗ ಜಡಿಯಲಾಗಿದೆ. ನಿಲ್ದಾಣದಲ್ಲಿ ಇರುವಂತಹ ಶುದ್ದ ಕುಡಿಯುವ ನೀರಿನ ಘಟಕದ ಸ್ವಚ್ಚತೆ ಇಲ್ಲದಾಗಿದೆ. ಪ್ರಯಾಣಿಕರು ನೀರು ಕುಡಿಯುವ ನೀರಿನ ಲೋಟ ಸಹ ಮಾಯವಾಗಿದೆ. ನಿಲ್ದಾಣದ ಪಕ್ಕದಲ್ಲಿಯೇ ಕಸದ ತೋಟ್ಟಿಯು ಸಹ ನಿರ್ಮಾಣವಾಗಿ ದುರ್ವಾಸನೆ ಬೀರುತ್ತೀದೆ.
ಪಟ್ಟಣದ ಚರಂಡಿ ನೀರು, ಮೀನು ಸಾಕಾಣಿಕೆಯ ವ್ಯರ್ಥ ನೀರು ಹಾಗೂ ಶೌಚಾಲಯದ ಅಶುದ್ದ ನೀರು ಸರಕಾರಿ ಬಸ್ ನಿಲ್ದಾಣಕ್ಕೆ ನೇರವಾಗಿ ಹರಿದುಬಂದು ನಿಲ್ದಾಣವು ದುರ್ವಾಸನೆ ಬೀರುತ್ತೀದೆ. ತುಮಕೂರಿನಿಂದ ಕೊರಟಗೆರೆ ನಿಲ್ದಾಣಕ್ಕೆ ಬರುವತಿರುವಿನಲ್ಲಿ ಗುಂಡಿಗಳಿದ್ದು ಪ್ರಯಾಣಕ್ಕೆ ತೊಂದರೆಯಾಗಿದೆ. ಸರಕಾರಿ ಬಸ್ ನಿಲ್ದಾಣದ ಸುತ್ತಮುತ್ತಲು ಗಿಡ-ಗೆಂಟೆ ಬೆಳೆದು ನಿಂತು ಹಂದಿ ಮತ್ತು ನಾಯಿಗಳ ಆವಾಸ ಸ್ಥಾನವಾಗಿದೆ.
ಪ್ರಯಾಣಿಕರಿಗೆ ಅನುಕೂಲ ಆಗುವಂತಹ ನಾಮಫಲಕ ನೆಲಕ್ಕೆ ಬಿದ್ದಿವೆ. ಖಾಸಗಿ ಮಾಹಿತಿ ಇರುವ ನಾಮಫಲಕಗಳು ಇಲಾಖೆ ಪರವಾನಗಿ ಇಲ್ಲದೇ ನಿಲ್ದಾಣದಲ್ಲಿ ಬಿತ್ತಾರವಾಗಿವೆ. ಪಪಂ ನೀಡಿರುವ ಜಾಗದಲ್ಲಿ ಸಾರಿಗೆ ಸಂಸ್ಥೆಯಿಂದ ಅಂಗಡಿ ಮಳಿಗೆಗಳಿಂದ ಸಾಕಷ್ಟು ಲಾಭ ಬಂದರೂ ಸಹ ಅಭಿವೃದ್ದಿ ಮರೀಚಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ