ಹುಳಿಯಾರು:
ಹೋಬಳಿಯ ತಮ್ಮಡಿಹಳ್ಳಿ ಬಳಿಯ ಬಿಳಿಕಲ್ಲು ಗೊಲ್ಲರಹಟ್ಟಿ ಗ್ರಾಮದ ಸಮೀಪದ ಹೊಲದಲ್ಲಿ ಕಾಣಿಸಿಕೊಂಡ ಎರಡು ಹೆಬ್ಬಾವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.ಬಿಳಿಕಲ್ಲು ಗೊಲ್ಲರಹಟ್ಟಿ ಬಳಿಯ ರಮೇಶ್ ಎಂಬುವವರ ಹೊಲದಲ್ಲಿ ರಾಗಿ ಕೊಯ್ಲು ಮಾಡಲು ಹೋಗಿದ್ದಾರೆ. ಈ ವೇಳೆ 2 ಹೆಬ್ಬಾವುಗಳು ಕಾಣಿಸಿ ಕೊಂಡಿವೆ. ಕೂಡಲೇ ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿಗೆ ಕಚೇರಿಗೆ ರೈತರು ಸುದ್ದಿ ಮುಟ್ಟಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಪ್ಪ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆಗೆ ಮುಂದಾಗಿದ್ದಾರೆ. ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ಸಂಜೆ ವೇಳೆಗೆ ಸುರಕ್ಷಿತವಾಗಿ ಹೆಬ್ಬಾವುಗಳನ್ನು ಹಿಡಿದಿದ್ದಾರೆ.ಸುಮಾರು 20 ಕೆ.ಜಿ. ತೂಕದ ಗಂಡು ಹಾಗೂ 12 ಕೆ.ಜಿ ತೂಕದ ಹೆಣ್ಣು ಹೆಬ್ಬಾವುಗಳನ್ನು ಬುಕ್ಕಾಪಟ್ಟಣ ವನ್ಯಜೀವಿಧಾಮಕ್ಕೆ ಬಿಡಲಾಯಿತು ಎಂದು ಬುಕ್ಕಾಪಟ್ಟಣ ಉಪ ವಲಯ ಅರಣ್ಯಾಧಿಕಾರಿ ಕಿರಣ್ ತಿಳಿಸಿದ್ದಾರೆ. ಅರಣ್ಯ ರಕ್ಷಕರಾದ ದಿಲೀಪ್ಕುಮಾರ್, ಆರ್.ಶೇಖರ್, ಸುರೇಶ್, ಅರಣ್ಯ ವೀಕ್ಷಕ ಸಂತೋಷ್ ಸವಣೂರು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
