ಹುಳಿಯಾರು:
ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಪಂ ವ್ಯಾಪ್ತಿಯ ಸೋಮನಹಳ್ಳಿ ಗ್ರಾಮದ ಚರಂಡಿ ಕ್ಲೀನ್ ಮಾಡಿ ದುರ್ನಾತ ತಪ್ಪಿಸುವಂತೆನಿಲ್ಲಿನ ನಿವಾಸಿ ಕ್ಯಾತಯ್ಯ ಅವರು ಮನವಿ ಮಾಡಿದ್ದಾರೆ.ಈ ಹಿಂದೆ ಇಲ್ಲಿನ ಮನೆಗಳ ಬಚ್ಚಲು ಮನೆಯ ನೀರು, ಬಟ್ಟೆ ತೊಳೆಯುವ ನೀರು ಹಾಗೂ ಇಲ್ಲಿನ ಸಿಸ್ಟನ್ನ ನೀರು ಹರಿಯಲು ಎರಡೂ ಬದಿಯಲ್ಲಿ ಚಪ್ಪಡಿಕಲ್ಲಿನಿಂದ ಚರಂಡಿ ನಿರ್ಮಿಸಿ ಹರಿಸಲಾಗುತ್ತಿತ್ತು.
ಆದರೆ ಸಿಸಿ ರಸ್ತೆ ಮಾಡುವಾಗ ಈ ಚಪ್ಪಡಿಕಲ್ಲಿನ ಚರಂಡಿ ಕಿತ್ತು ಕಾಂಕ್ರೀಟ್ ಚರಂಡಿ ಮಾಡಿದ್ದು ಈ ಚರಂಡಿಯನ್ನು ಸರಾಗವಾಗಿ ನೀರುಹರಿಯುವಂತೆ ವಾಟ ಕೊಟ್ಟು ಮಾಡದೆ ಬೇಕಾಬಿಟ್ಟಿ ಮಾಡಿರುವುದರಿಂದ ಚರಂಡಿಯ ನೀರು ಹರಿಯದೆ ಅಲ್ಲೇ ಸಂಗ್ರಹವಾಗುತ್ತಿದೆ.ಪರಿಣಾಮ 2 ತಿಂಗಳಿಂದ ನೀರು ನಿಂತಲ್ಲೇ ನಿಂತು ದುರ್ನಾತ ಬೀರುತ್ತದೆ. ಅಲ್ಲದೆ ಹಂದಿ ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು ರೋಗ ರುಜಿನಗಳನ್ನು ಹರಡುತ್ತಿದೆ. ಅಲ್ಲದೆ ಚರಂಡಿಗೆ ಸ್ಲ್ಯಾಬ್ ಮುಚ್ಚದಿರುವುದರಿಂದ ಮಕ್ಕಳು ಬೀಳುವ ಸಾಧ್ಯತೆಯಿದೆ.
ಜನರು ರೋಗಗ್ರಸ್ತರಾಗುವ ಮೊದಲೇ ಗ್ರಾಪಂ ಎಚ್ಚೆತ್ತುಕೊಳ್ಳಬೇಕಿದೆ. ಚರಂಡಿ ಸಂಪೂರ್ಣ ಸ್ವಚ್ಛಗೊಳಿಸಿ ಚಪ್ಪಡಿ ಕಲ್ಲುಗಳಿಂದ ಮುಚ್ಚಿದರೆ ಜನರು ನೆಮ್ಮದಿಯಿಂದ ಇರಬಹುದು. ಅಲ್ಲದೆ ಸಿಸಿ ರಸ್ತೆ ಗುತ್ತಿಗೆದಾರರಿಗೆ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ವಾಟಕೊಟ್ಟು ಕಾಂಕ್ರೇಟ್ ಹಾಕುವಂತೆ ಸೂಚಿಸುವಂತೆ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
