ಬೆಂಗಳೂರು
ಗ್ರಹಿಸುವ ಶಕ್ತಿಯನ್ನು ಹೆಚ್ಚಿಸಿಕೊಂಡು ಕಕ್ಷಿದಾರರನ್ನು ಗೌರವಿಸಿ ನ್ಯಾಯ ದೊರಕಿಸಲು ವಕೀಲರು ಶ್ರಮಿಸಿದರೆ ನ್ಯಾಯಮೂರ್ತಿಗಳನ್ನು ಗೌರವಿಸಿದಂತಾಗುತ್ತದೆ ಎಂದು ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ನುಡಿದರು.
ನಗರದ ಕಬ್ಬನ್ ಪಾರ್ಕ್ನ ಎನ್ ಜಿಒ ಸಭಾಂಗಣದಲ್ಲಿ ಶನಿವಾರ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಮಹಿಳಾ ವಕೀಲರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ ಜಗತ್ತಿಗೆ ನ್ಯಾಯ ಕೊಡುವ ಶಾಖೆ ನ್ಯಾಯಾಲಯ. ಕಕ್ಷಿದಾರರಿದ್ದರೆ ಮಾತ್ರ ಈ ಸಂಸ್ಥೆ ಎನ್ನುವುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಹಿರಿಯವರು ತೋರಿಸಿದ ದಾರಿಯಲ್ಲಿ ನಾವು ನಡೆಯಬೇಕು. ನ್ಯಾಯಕ್ಕಾಗಿ ಬಂದ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ನೀಡಿದರೆ ನ್ಯಾಯಾಲಯದ ಬಗ್ಗೆ ಉತ್ತಮ ಅಭಿಪ್ರಾಯ ಮೂಡುತ್ತದೆ.ನ್ಯಾಯಕ್ಕಾಗಿ ನಿಮ್ಮ ಬಾಗಿಲಿಗೆ ಬರುವ ಸಂತ್ರಸ್ತರನ್ನು ವಕೀಲರು ನಗು ಮುಖದಲ್ಲಿ ಮಾತನಾಡುವುದನ್ನು ಕಲಿಯಬೇಕು. ಕೆಲವರು ಕೋಪವಾಗಿರುತ್ತಾರೆ. ಇದರಿಂದ, ಮತ್ತಷ್ಟು ಸಮಸ್ಯೆ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟರು.
ವಕೀಲ ವೃತ್ತಿಯ ತರಬೇತಿಗಾಗಿ ದೆಹಲಿಗೆ ಸಾಕಷ್ಟು ವಕೀಲರು ದೇಶದ ಮೂಲೆ ಮೂಲೆಗಳಿಂದ ಬರುತ್ತಾರೆ.ಅಲ್ಲಿನ ಅನುಭವವೇ ಬೇರೆಯಾಗಿದೆ ಎಂದ ಅವರು, ಮೊದಲ ಬಾರಿಗೆ ಖಾಸಗಿ ಸುದ್ದಿ ವಾಹಿನಿ ಪರವಾಗಿ ವಕಾಲತ್ತು ವಹಿಸಿದ್ದೇ.ಇದರಿಂದ ವಾಹಿನಿ ಪ್ರಸಾರ ಕಾಯ್ದೆಯೊಂದು ರೂಪಗೊಂಡಿದೆ ಎಂದು ಅವರು ಹೇಳಿದರು.
ಕರ್ನಾಟಕ ಹೈ ಕೋರ್ಟಿನ ನ್ಯಾಯಮೂರ್ತಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮಾತನಾಡಿ, ಮಹಿಳಾ ವಕೀಲರು ಸಂಘಟಿತರಾಗಿ ಮಾಡಬೇ ಕಾದ ಕೆಲಸ ಸಾಕಷ್ಟಿದೆ. ಕಾನೂನಿನ ಸೀಮಿತ ತಿಳಿವಳಿಕೆಯೊಳಗೇ ಅನೇಕ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಇಂದು ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿವೆ. ಬೀದಿಗಿಳಿದು ಹೋರಾಟ ಮಾಡಲಾಗದಿದ್ದರೂ ಮಹಿಳಾ ವಕೀಲರು ಇವರ ಬೆನ್ನಿಗೆ ನಿಂತು ಕಾನೂನು ನೆರವು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








