ಶಿರಾ
ದೇವಸ್ಥಾನದ ಬಳಿ ನಿಧಿ ಇದೆ ಎಂಬ ಅನುಮಾನದಿಂದ ದೇವಸ್ಥಾನವೊಂದರ ಹಿಂಬದಿಯಲ್ಲಿ ಆಳವಾದ ಗುಂಡಿಯನ್ನು ತೆಗೆÉದು ಪೂಜಾ ಕಾರ್ಯದಲ್ಲಿ ತೊಡಗಿದ್ದರೆನ್ನಲಾದ ಮೂವರು ಆರೋಪಿಗಳನ್ನು ಶಿರಾ ನಗರ ಠಾಣಾ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ತಾಲ್ಲೂಕಿನ ಓಜುಗುಂಟೆ ಗ್ರಾಮದಲ್ಲಿನ ಎಸ್.ಕೆ.ಜಯರಾಮ್ ಅವರಿಗೆ ಸೇರಿದ ಸ.ನಂ.38ರಲ್ಲಿ ಖರಾಬು ಜಮೀನು ಇದ್ದು, ಇದೇ ಜಮೀನಿನಲ್ಲಿ ಗ್ರಾಮ ದೇವತೆಯಾದ ಶ್ರೀ ಮರಿಯಮ್ಮ ದೇವಿ ದೇವಸ್ಥಾನವಿರುತ್ತದೆ. ಸದರಿ ಜಮೀನಿನ ಮಾಲಿಕರಾದ ಎಸ್.ಕೆ.ಜಯರಾಮ್ ಮತ್ತು ಇನ್ನಿತರ ಇಬ್ಬರು ಆರೋಪಿಗಳು ಜಯರಾಮ್ ಅವರೊಂದಿಗೆ ಸೇರಿಕೊಂಡು ನಿಧಿ ಇಲ್ಲವೇ ವಿಗ್ರಹಗಳನ್ನು ಹುಡುಕುವ ಪ್ರಯತ್ನದಲ್ಲಿದ್ದರು ಎನ್ನಲಾಗಿದೆ.
ಶಿರಾ ನಗರದ ಎಸ್.ಕೆ.ಜಯರಾಮ್, ಮೂಗನಹಳ್ಳಿ ಗ್ರಾಮದ ರಮೇಶ್ ಹಾಗೂ ಬೆಂಗಳೂರಿನ ಎಸ್.ಕೆ.ಜಿ. ಕಾಫಿವಕ್ರ್ಸ್ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಲಕ್ಷ್ಮೀ ನರಸಿಂಹ ಎಂಬ ಆರೋಪಿಗಳು ಶುಕ್ರವಾರ ಸಂಜೆ 6 ಗಂಟೆಯ ಸಮಯದಲ್ಲಿ ಓಜುಗುಂಟೆಯ ಜಯರಾಮ್ ಅವರ ಜಮೀನಿನಲ್ಲಿರುವ ಮರಿಯಮ್ಮದೇವಿ ದೇವಸ್ಥಾನದ ಹಿಂಭಾಗದಲ್ಲಿ ದೊಡ್ಡದಾದ ಗುಂಡಿಯನ್ನು ತೋಡಿ ಪೂಜಾ ಕಾರ್ಯದಲ್ಲಿ ತೊಡಗಿದ್ದು ನಿಧಿ ಇಲ್ಲವೇ ಬೆಲೆ ಬಾಳುವ ವಿಗ್ರಹದ ಹುಡುಕಾಟದಲ್ಲಿರುವುದನ್ನು ಕಂಡ ಗ್ರಾಮಸ್ಥರು ಕೂಡಲೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ಓಜುಗುಂಟೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಅರ್ಚಕ ರಂಗನಾಥಪ್ಪ ಸೇರಿದಂತೆ ಗ್ರಾಮದ ಹಲವರು ಪೊಲೀಸರಿಗೆ ನಿಧಿಗಾಗಿ ನಡೆಸುತ್ತಿರುವ ಸಂಚಿನ ಬಗ್ಗೆ ಆರೋಪಿಗಳ ವಿರುದ್ದ ದೂರು ನೀಡಿದ ಹಿನ್ನೆಲೆಯಲ್ಲಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.