ಬೆಂಗಳೂರು:
ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಪತಿ ಮೇಲೆ ಪತ್ನಿ ಕಾದ ಎಣ್ಣೆ ಎರಚಿ ಗಾಯಗೊಳಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಯಶವಂತಪುರದ ಮೋಹನ್ ಕುಮಾರ್ ನಗರದ ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಂಪತಿ 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಮಂಜುನಾಥ್ ಮತ್ತು ಪದ್ಮ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಪತಿ ಮಂಜುನಾಥ್ ಗೆ ಇನ್ನೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಪತ್ನಿಗೆ ತಿಳಿದು ಆಗಾಗ ಜಗಳವಾಡುತ್ತಿದ್ದರು. ಇತ್ತೀಚೆಗೆ ಆತ ಕೆಲಸಕ್ಕೂ ಹೋಗುತ್ತಿರಲಿಲ್ಲ, ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುವುದಷ್ಟೇ ಅಲ್ಲದೆ ಹಲ್ಲೆ ಮಾಡುತ್ತಿದ್ದ.
ಭಾನುವಾರ ಬೆಳಗ್ಗೆ ಪದ್ಮಾ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಈ ವೇಳೆ ಕುಡಿದು ಬಂದು ಗಲಾಟೆ ಮಾಡಿದ್ದ, ಅಡುಗೆ ಸೌಟಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಗಂಡನಿಗೆ ತಕ್ಕಪಾಠ ಕಲಿಸಲು ನಿರ್ಧರಿಸಿದ ಆಕೆ ಸಿಟ್ಟಿನಲ್ಲಿ ಪದ್ಮಾ ಒಲೆ ಮೇಲೆ ಕುದಿಯುತ್ತಿದ್ದ ಎಣ್ಣೆಯನ್ನು ಪತಿಯ ಮುಖಕ್ಕೆ ಎರಚಿದ್ದಾಳೆ.
ಇದೀಗ ಪದ್ಮಾಳನ್ನು ಬಂಧಿಸಲಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
