ಬೀಜ ಮಸೂದೆ 2019 : ರೈತರ ಸ್ವಾಭಿಮಾನಕ್ಕೆ ಕುತ್ತು : ಕೋಡಿಹಳ್ಳಿ ಚಂದ್ರಶೇಖರ್

ತುಮಕೂರು

   ಕೇಂದ್ರ ಸರಕಾರ ಮುಂದಿನ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಬೀಜ ಮಸೂದೆ -2019 ಹಾಗೂ ಮಾದರಿ ಕೃಷಿ ಅಭಿವೃದ್ದಿ ಗುತ್ತಿಗೆ ಕಾಯ್ದೆ-2020 ಈ ಮಸೂದೆಗಳು ರೈತರಿಗೆ ಕೃಷಿ ಕೂಲಿ ಕಾರ್ಮಿಕರಿಗೆ ಮಾರಕವಾಗಿದ್ದು, ಇದರಿಂದ ಹಿಂದೆ ಸರಿಯುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

     ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಈ ಎರಡು ಮಸೂದೆಗಳಿಂದ ಕೃಷಿ ಉದ್ದಿಮೆದಾರರಿಗೆ, ಬಹು ರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗಲಿದೆಯೆ ಹೊರತು, ಸಾಮಾನ್ಯ ರೈತರಿಗಲ್ಲ. ಇದು ರೈತರ ಭೂಮಿಗಳನ್ನು ಕಿತ್ತುಕೊಂಡು ಅಭಿವೃದ್ದಿ ಹೆಸರಿನಲ್ಲಿ ಉದ್ದಿಮೆದಾರರಿಗೆ ನೀಡುವ ಯೋಜನೆಗಳಾಗಿವೆ. ಇದಕ್ಕೆ ಭಾರತದ ಎಲ್ಲಾ ಕೃಷಿಕರ ವಿರೋಧವಿದೆ ಎಂದು ತಿಳಿಸಿದರು.

    ಬೀಜ ಮಸೂದೆ-2019ರಿಂದ ಇದುವರೆಗೂ ರೈತರಿಗೆ ಬೀಜಗಳ ಮೇಲೆ ಇದ್ದ ಹಕ್ಕು ಹೋಗಿ, ಪ್ರತಿಯೊಂದಕ್ಕೂ ಎಂ.ಎನ್.ಸಿ ಕಂಪನಿಗಳು, ಬೀಜ ತಯಾರಿಕೆಯಲ್ಲಿ ತೊಡಗಿರುವ ಉದ್ದಿಮೆದಾರರ ಆಜ್ಞಾಧಾರಕರಾಗಿ ಬದುಕಬೇಕಾಗುತ್ತದೆ. ತಮ್ಮ ಭೂಮಿಯಲ್ಲಿ ತಾವೇ ತಯಾರಿಸಿ ಬಿತ್ತಿ ಬೆಳೆ ಬೆಳೆಯಬಹುದಾದ ಸಾರ್ವಭೌಮತ್ವ ಕಳೆದುಕೊಂಡು ಕಂಪನಿಗಳ ಸರ್ವಾಧಿಕಾರಕ್ಕೆ ಬಲಿಯಾಗ ಬೇಕಾಗುತ್ತದೆ. ಆದ್ದರಿಂದ ಈ ಕಾಯ್ದೆಯಿಂದ ಪ್ರಧಾನಿಗಳು ಹಿಂದೆ ಸರಿಯಬೇಕು ಎಂಬುದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜೊತೆಗೆ, ದೇಶದ ಎಲ್ಲಾ ಕೃಷಿಪರ ಸಂಘಟನೆಗಳ ಒತ್ತಾಯವಾಗಿದೆ ಎಂದು ತಿಳಿಸಿದರು.

   ರೈತರ ಫಲವತ್ತಾದ ಭೂಮಿಯನ್ನು ಕೃಷಿಯಲ್ಲಿ ತೊಡಗಿರುವ ವಿದೇಶಿ ಕಂಪನಿಗಳಿಗೆ, ದೊಡ್ಡ ಬಂಡವಾಳದಾರರಿಗೆ ಗುತ್ತಿಗೆ ನೀಡುವ ಮಾದರಿ ಕೃಷಿ ಅಭಿವೃದ್ದಿ ಗುತ್ತಿಗೆ ಪದ್ದತಿ-2020 ಅಷ್ಟೋ, ಇಷ್ಟೋ ತುಂಡು ಭೂಮಿ ಇಟ್ಟುಕೊಂಡು, ಸ್ವಾಭಿಮಾನದಿಂದ ಬದುಕುತ್ತಿರುವ ರೈತರಿಗೆ ಮಾರಕವಾಗಿದೆ. ಅಭಿವೃದ್ದಿ ಹೆಸರಿನಲ್ಲಿ ರೈತರ ಜಮೀನುಗಳನ್ನು ದೊಡ್ಡ ದೊಡ್ಡ ಕಂಪನಿಗಳಿಗೆ ಗುತ್ತಿಗೆ ನೀಡಿ, ಅವರು ನೀಡುವ ಪುಡಿ ಕಾಸಿಗೆ ಕಾಯುವಂತಹ ಸ್ಥಿತಿಯನ್ನು ಕೇಂದ್ರ ಸರಕಾರ ತರಲು ಹೊರಟಿದೆ.

   ಕರ್ನಾಟಕ ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶವನ್ನು ಈಗಾಗಲೇ ಗುತ್ತಿಗೆ ಕೃಷಿ ಪದ್ದತಿಗೆ ನೀಡಲು ಗುರುತಿಸಲಾಗಿದೆ. ಸಾಲದ ಹೊರೆಯಲ್ಲಿ ಬೇಯುತ್ತಿರುವ ರೈತರನ್ನು ಎಂ.ಎನ್.ಸಿ. ಕಂಪನಿಗಳಂತಹ ಬಾಣಲಿಗೆ ತಳ್ಳುವ ಕೆಲಸದಿಂದ ಕೇಂದ್ರ ಸರಕಾರ ಹಿಂದೆ ಸರಿಯಬೇಕು ಎಂಬುದು ರೈತರ ಆಗ್ರಹವಾಗಿದೆ ಎಂದರು.

     ರೈತರ ಮಕ್ಕಳು, ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳುತ್ತಲೇ ಎಚ್.ಡಿ.ಕುಮಾರಸ್ವಾಮಿ ಜಾರಿಗೆ ತಂದ 2013ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಮುಂದುವರೆಸಲು ಹೊರಟಿದೆ. ಇದರಿಂದ ರೈತರ ಫಲವತ್ತಾದ ಭೂಮಿಗಳು ಕೈಗಾರಿಕೆಗಳಿಗೆ ಬಲಿಯಾಗಲಿವೆ. ಈ ಬಗ್ಗೆ ಯಡಿಯೂರಪ್ಪ ಗಮನಹರಿಸಿ, ತಿದ್ದುಪಡಿ ಕಾಯ್ದೆಯನ್ನು ಪುನರ್ ಪರಿಶೀಲಿಸಿ, ರೈತರಿಗೆ ಅನುಕೂಲವಾಗುವಂತೆ ರೂಪಿಸಬೇಕು ಎಂದು ಆಗ್ರಹಿಸಿದರು.

     ರಾಜ್ಯದಲ್ಲಿ ಇದುವರೆಗೂ ನಡೆದ ಹೇಮಾವತಿ, ಎತ್ತಿನಹೊಳೆ ಹಾಗೂ ಇನ್ನಿತರ ನೀರಾವರಿ ಯೋಜನೆಗಳಲ್ಲಿ ರೈತರಿಗೆ ಪರಿಹಾರ ಸರಿಯಾಗಿ ಸಿಕ್ಕಿಲ್ಲ. ಎತ್ತಿನ ಹೊಳೆ ಯೋಜನೆ ಜನರಿಗಿಂತ ಹೆಚ್ಚಾಗಿ, ಗುತ್ತಿಗೆದಾರರ ಲಾಭಕೋಸ್ಕರ ರೂಪಿಸಲಾಗಿದೆ. ಅಗತ್ಯಕ್ಕಿಂತ ಸುಮಾರು 10ಕೋಟಿ ರೂಗಳಷ್ಟು ಹೆಚ್ಚಿನ ಫೈಪ್ ಖರೀದಿ ಮಾಡಿದ್ದರೂ, ಅದನ್ನು ತಡೆಹಿಡಿಯದೆ ಹಣ ಬಿಡುಗಡೆ ಮಾಡಲಾಗಿದೆ ಎಂದರೆ ಗುತ್ತಿಗೆದಾರರು ಇನ್ನೆಷ್ಟು ಪ್ರವಾವಿಗಳಾಗಿರಬೇಕು ಎಂಬುದನ್ನು ಯೋಚಿಸಬೇಕಿದೆ ಎಂದರು.

  ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಕಳೆದ 30 ವರ್ಷಗಳ ಹಿಂದೆ ಆರಂಭವಾದ ಹೇಮಾವತಿ ಯೋಜನೆಯಿಂದಲೆ ಇನ್ನೂ 120 ಕೋಟಿ ರೂ ಪರಿಹಾರದ ಹಣ ರೈತರಿಗೆ ಬಾಕಿ ಇದೆ. ಅಲ್ಲದೆ ಎತ್ತಿನಹೊಳೆ ಯೋಜನೆಯಲ್ಲಿರುವ ರೈತರಿಗೆ ಅಧಿಕಾರಿಗಳು ಮನಬಂದಂತೆ ಪರಿಹಾರ ನೀಡಿ, ಕಾಮಗಾರಿ ನಡೆಸುತ್ತಿದ್ದಾರೆ. ಇದರ ವಿರುದ್ದ ಜಿಲ್ಲಾಡಳಿತ ಮೌನ ವಹಿಸಿದೆ. ಈ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಒಂದು ವೇಳೆ ರೈತರಿಗೆ ಪರಿಹಾರ ನೀಡದೆ ಕಾಮಗಾರಿ ಪ್ರಾರಂಭಿಸಿದರೆ ಕಾಮಗಾರಿ ಮಾಡಲು ಬಂದವರನ್ನು ಕಂಬಕ್ಕೆ ಕಟ್ಟಿ ಹಾಕುವ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಧನಂಜಯ ಆರಾಧ್ಯ, ಕೋಡ್ಲಹಳ್ಳಿ ಶಿವರಾಜು, ಶಿವಪ್ಪ, ಅನಿಲ್‍ಕುಮಾರ್, ಲಕ್ಕಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link