ಬೆಂಗಳೂರು
ಹುಬ್ಬಳ್ಳಿಯ ಪಾಕ್ ಪರ ಘೋಷಣೆ ಕೂಗಿದ ಘಟನೆ ಮೇಲ್ಮನೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಬಿಸಿ ಬಿಸಿ ಚರ್ಚೆ, ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಯಿತು. ಶೂನ್ಯವೇಳೆಯಲ್ಲಿ ಜೆಡಿಎಸ್ ನ ಬಸವರಾಜ ಹೊರಟ್ಟಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಪಾಕಿಸ್ತಾನಪರ ಘೋಷಣೆ ಕೂಗಿದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದರು. ಈ ಯುವಕರನ್ನು ಪೊಲೀಸರು ಬಿಡುಗಡೆ ಮಾಡಿದ್ದು ಸರಿಯಲ್ಲ. ಪೊಲೀಸ್ ಆಯುಕ್ತರ ನಡೆ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ ಅವರು, ಸರ್ಕಾರ ಪಾಕ್ ಪರಘೋಷಣೆ ಕೂಗಿದವರ ಪರ ಸರ್ಕಾರ ಮೃದು ಧೋರಣೆತೋರಿದ್ದು ಏಕೆ? ಎಂದು ಪ್ರಶ್ನಿಸಿದರು.
ಹೊರಟ್ಟಿ ಮಾತಿಗೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಧ್ವನಿಗೂಡಿಸಿ, ಸರ್ಕಾರ ಮೃಧು ಧೋರಣೆ ತಾಳಲು ಒತ್ತಡ ಇರಬೇಕು. ಪೊಲೀಸ್ ಅಧಿಕಾರಿಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು. ಪೊಲೀಸರ ಮೃದುಧೋರಣೆ ಬಗ್ಗೆ ಹುಬ್ಬಳ್ಳಿಯ ಜನ ಆಕ್ರೋಶಗೊಂಡಿದ್ದು, ಇದು ಗಂಭೀರಪ್ರಕರಣ. ರಾಷ್ಟೃವಿರೋಧಿ ಚಟುವಟಿಕೆ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇವರ ಬಗ್ಗೆ ಮೃದು ಧೋರಣೆ ತಳೆಯಲು ಒತ್ತಡ ಹೇರಿದ್ದು ಯಾರು?.
ಈ ನೆಲದ ಅನ್ನ ಉಂಡು ನೀರು ಕುಡಿದು ಪಾಕ್ ಪರ ಘೋಷಣೆ ಕೂಗುವುದು ಅಪರಾಧ. ಇವರನ್ನು ನ್ಯಾಯಾಂಗ ಬಂಧನಕ್ಕೆ ನೀಡದಿರುವುದಕ್ಕೆ ಕಾರಣ ಏನು? ಎಂದು ಸಿಡಿಮಿಡಿಗೊಂಡರು. ಕಾಂಗ್ರೆಸ್ನ ಐವಾನ್ ಡಿಸೋಜ, ಮಾತುಮಾತಿಗೆ ದೇಶದ್ರೋಹಿ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಯು.ಟಿ.ಖಾದರ್ ಮೇಲೆ ಮೈಸೂರಿನಲ್ಲಿ ವಿನಾಕಾರಣ ಬಿಜೆಪಿ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ಆದರೆ ಈಗ ಹುಬ್ಬಳ್ಳಿಯ ರಾಷ್ಟ್ರವಿರೋಧಿ ಘೋಷಣೆಗೆ ಬಿಜೆಪಿ ಮೌನ ವಹಿಸಿದ್ದು ಏಕೆ ಎಂದು ಸದನದಲ್ಲಿ ಕಿಡಿಕಾರಿದರು.
ಪ್ರತಿಪಕ್ಷ ಸದಸ್ಯರ ಮಾತಿಗೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿ, ಪೊಲೀಸ್ ಆಯುಕ್ತರನ್ನು ಸೇವೆಯಿಂದ ಅಮಾನತು ಮಾಡಿದ್ದೇವೆ. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕಗೊಳ್ಳಲಿದೆ. ರಾಷ್ಟ್ರವಿರೋಧಿ ಚಟುವಟಿಕೆ ಬಗ್ಗೆ ವಿಪಕ್ಷಗಳು ಈಗ ಮೊದಲ ಬಾರಿಗೆ ಧ್ವನಿಯೆತ್ತಿ ನಮಗೆ ಬೆಂಬಲ ನೀಡಿದ್ದಾರೆ ಎಂದು ಲೇವಡಿ ಮಾಡಿದರು.
ಆಗ ಕೋಟಾ ಶ್ರೀನಿವಾಸ ಪೂಜಾರಿ ಲೇವಡಿಗೆ ಕಿಡಿಕಾರಿದ ಹೊರಟ್ಟಿ, ದೇಶಭಕ್ತರು ನೀವೊಬ್ಬರೇ ಅಲ್ಲ. ನಮಗೂ ರಾಷ್ಟ್ರಾಭಿಮಾನವಿದೆ ಎಂದರು.ಬಿಜೆಪಿಯ ಪ್ರಾಣೇಶ್ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ 330ಎ ಅಡಿ ಶೂನ್ಯವೇಳೆ ಕೇವಲ ಪ್ರಶ್ನೆಕೇಳಲು ಮಾತ್ರ ಅವಕಾಶವಿದೆ. ಚರ್ಚೆಗೆ ಆಸ್ಪದವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಐವಾನ್ ಡಿಸೋಜಾ ಬೀದರ್ ಶಾಹೀನ್ ಪ್ರಕರಣ ಪ್ರಸ್ತಾಪಿಸಲು ಮುಂದಾದದರು. ಆಗ ಹೊರಟ್ಟಿ ಮತ್ತು ಎಸ್.ಆರ್.ಪಾಟೀಲ್ ಸರ್ಕಾರದ ಉತ್ತರ ಇಂದೇ ಬೇಕು ಎಂದು ಪಟ್ಟು ಹಿಡಿದರು. ಸರ್ಕಾರದಿಂದ ಉತ್ತರಿಸುವುದಾಗಿ ಸಭಾನಾಯಕರು ಭರವಸೆ ನೀಡಿದಾಗ ವಿಪಕ್ಷ ಸದಸ್ಯರು ಸುಮ್ಮನಾದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ