ತುಮಕೂರು:
ತುಮಕೂರು ನಗರ ಮೆಳೆಕೋಟೆ-ವೀರಸಾಗರ ವಸತಿ ಬಡಾವಣೆಯಲ್ಲಿ ಮೂಲಸೌಲಭ್ಯಗಳಿಲ್ಲದೆ ಒಳಚರಂಡಿಗಳು (ಯಜಿಡಿ) ತುಂಬಿ ಅದರ ನೀರು ರಸ್ತೆಗೆಲ್ಲಾ ಹರಿಯುತ್ತಿರುವುದರ ಬಗ್ಗೆ ಪತ್ರಿಕೆಯಲ್ಲಿ ಇತ್ತೀಚೆಗೆ ನಗರದ ನರಕಯಾತನೆ ಕಾಲಂನಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಇದಾದ ನಂತರ ಹರೀಶ್ ಎಂಬುವರು ಸಾರ್ವಜನಿಕ ದೂರನ್ನು ಸಲ್ಲಿಸಿದ್ದರು.
ಪತ್ರಿಕಾ ವರದಿ ಹಾಗೂ ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಘವೇಂದ್ರ ಶೆಟ್ಟಿಗಾರ್ ಅವರು ಕಲ್ಪತರು ಬಡಾವಣೆಗೆ ಭೇಟಿ ನೀಡಿ ಅಲ್ಲಿನ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯ ನಾಗರಿಕ ವೇದಿಕೆಯ ಸದಸ್ಯರು ಹಾಜರಿದ್ದು, ನ್ಯಾಯಾಧೀಶರಿಗೆ ಸಮಸ್ಯೆಗಳ ವಿವರ ನೀಡಿದರು. ಅಲ್ಲಿಯೇ ಇದ್ದ ಟೂಡಾ ಆಯುಕ್ತರಿಗೆ, ಒಳಚರಂಡಿ ಮಂಡಳಿಯ ಎಇಇ ಮಹಾನಗರ ಪಾಲಿಕೆಯ ಇಂಜಿನಿಯರ್ ಅವರಿಗೆ ಸೂಚನೆ ನೀಡಿದ ನ್ಯಾಯಾಧೀಶರು ಮುಂದಿನ ಸೋಮವಾರದ ಒಳಗೆ ಯುಜಿಡಿ ಕೆಲಸ ಪೂರ್ಣಗೊಳಿಸಲು ಆದೇಶ ನೀಡಿದರು. ಈ ಯುಜಿಡಿ ನೀರು ಬೋರ್ವೆಲ್ ಪಕ್ಕದಲ್ಲಿ ಇರುವುದರಿಂದ ಕುಡಿಯುವ ನೀರೂ ಸಹ ಮಲೀನವಾಗುತ್ತಿದ್ದು, ಪ್ರತ್ಯೇಕ ಒಂದು ಬೋರ್ವೆಲ್ ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಟೂಡಾ ಆಯುಕ್ತರಿಗೆ ನಿರ್ದೇಶನ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
