ಬೆಂಗಳೂರು
ರಾಜ್ಯದ ಪೊಲೀಸ್ ಶ್ವಾನದಳವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ 50 ಶ್ವಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.ನಗರದ ಕೋರಮಂಗಲದಲ್ಲಿರುವ ಆಡುಗೋಡಿಯಲ್ಲಿರುವ ಸಿಎಆರ್ ಸೌತ್ ನಲ್ಲಿ ಹೊಸದಾಗಿ ಉನ್ನತೀಕರಿಸಿರುವ ಶ್ವಾನ ಚಟುವಟಿಕೆಯ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಫೋಟಕ ವಸ್ತುಗಳನ್ನು, ಡ್ರಗ್ಸ್ಗಳನ್ನು ಪತ್ತೆಹಚ್ಚುವ ಹಾಗೂ ಅಪರಾಧ ಸ್ಥಳದಲ್ಲಿ ಅಪರಾಧಿಯನ್ನು ಪತ್ತೆ ಹಚ್ಚುವಲ್ಲಿ ನಮ್ಮ ಇಲಾಖೆಯ ಶ್ವಾನಗಳು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ತಂಡವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವುಗಳಿಗೆ ಅತ್ಯುತ್ತಮ ತರಬೇತಿ ನೀಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಿಎಆರ್ ಸೌತ್ ನಲ್ಲಿ ಡಿಸಿಪಿ ಯೋಗೇಶ್ ಹಾಗೂ ಎಸಿಪಿ ನಿಂಗಾರೆಡ್ಡಿ ಪಾಟೀಲ್ ಅವರ ನೇತೃತ್ವದಲ್ಲಿ ಶ್ವಾನ ಚಟುವಟಿಕೆಯ ಉದ್ಯಾನವನವನ್ನು ಉನ್ನತೀಕರಿಸಲಾಗಿದೆ. ಇದಕ್ಕೆ ಡಾಗ್ಗುರು ಎಂದೇ ಪ್ರಸಿದ್ದಿಯಾಗಿರುವ ಶ್ವಾನ ಮನೋವೈದ್ಯ ಅಮೃತ್ ಹಿರಣ್ಯ ಅವರು ಸಲಹೆಗಳನ್ನು ನೀಡಿದ್ದಾರೆ. ಈ ಚಟುವಟಿಕೆಯ ಉದ್ಯಾನವನವನ್ನು ನಮ್ಮ ಸಿಬ್ಬಂದಿಗಳೆ ಶ್ರದ್ಧೆಯಿಂದ ನಿರ್ಮಿಸಿದ್ದಾರೆ. ಈ ಶ್ವಾನದಳಕ್ಕೆ ಇನ್ನೂ ಹೆಚ್ಚಿನ ಶ್ವಾನಗಳನ್ನು ಸೇರಿಸುವ ಉದ್ದೇಶದಿಂದ ರಾಜ್ಯ ಸರಕಾರ 2.5 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ ಎಂದರು.
ಬೆಂಗಳೂರು ಉತ್ತರದಲ್ಲೂ ಕೂಡ ಶ್ವಾನ ತರಬೇತಿ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ. ಮುಂದಿನ ದಿನದಲ್ಲಿ ಪೆÇಲೀಸ್ ಇಲಾಖೆಯ ಮಹಿಳಾ ಕಾನ್ಸ್ಟೇಬಲ್ಗಳನ್ನು ಡಾಗ್ ಹ್ಯಾಂಡ್ಲರ್ಗಳಾಗಿ ನೇಮಿಸಲು ಚಿಂತನೆ ನಡೆಯುತ್ತಿದೆ. ಡಾಗ್ ಗುರು ಎಂದೇ ಖ್ಯಾತಿ ಪಡೆದಿರುವ ಶ್ವಾನ ಮನೋತಜ್ಞ ಅಮೃತ್ ಹಿರಣ್ಯ ಅವರ ಸೇವೆಯನ್ನು ಪಡೆದುಕೊಂಡು ಶ್ವಾನದಳವನ್ನು ಉನ್ನತೀಕರಿಸಲಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಅಮೃತ್ ಹಿರಣ್ಯ ಅವರ ತರಬೇತಿಯಂತೆ ಶ್ವಾನದಳ ವೆಹಿಕಲ್ ಹೈ ಜಾಕಿಂಗ್, ಸ್ಪೋಟಕ ಹಾಗೂ ಡ್ರಗ್ ಡಿಟೆಕ್ಷನ್, ಆಂಟಿ ಟೆರರಿಸ್ಟ್/ನಕ್ಸಲ್ ವಾರ್ ಫೇರ್ ನಂತಹ ನೂತನ ತಂತ್ರಗಳನ್ನು ಪ್ರದರ್ಶಿಸಿತು.
ಶ್ವಾನದಳದ ಹಿನ್ನೆಲೆ
1986ನೇ ಇಸವಿಯಲ್ಲಿ ವಿಲಿಯಮ್ಸ್ ಎಂಬ ಡಿವೈಎಸ್ಪಿ ಪ್ರಾರಂಭಿಸಿದ ಈ ಶ್ವಾನ ಇಲಾಖೆ, ಸಿಎಎಆರ್ ಸೌತ್ ಬೆಂಗಳೂರು ಕರ್ನಾಟಕ ಪೊಲೀಸ್ ಅಡಿಯಲ್ಲಿ ಇಂದು 60ಕ್ಕೂ ಹೆಚ್ಚು ಮಾದಕ ಹಾಗೂ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಕ್ರೈಂ ಐಡೆಂಟಿಫಿಕೇಷನ್ ಇತರ ಡಿಸಿಪ್ಲಿನ್ಗಳನ್ನು ಶ್ವಾನಗಳು ಚೆನ್ನಾಗಿ ಕಲಿತು ನಮ್ಮ ರಾಜ್ಯವನ್ನು ಶಿಸ್ತಿನಿಂದ ಸುರಕ್ಷತೆಯನ್ನು ಒದಗಿಸುತ್ತಿದೆ.
ಈ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಟಿ.ಸುನೀಲ್ ಕುಮಾರ್ ಅವರು ಶ್ವಾನ ಮನೋ ವೈದ್ಯರಾದ ಡಾಗ್ ಗುರು ಅಮೃತ್ ಅವರನ್ನು ನೇಮಕ ಮಾಡಿದ್ದರು. ಇದರಿಂದ ಶ್ವಾನಗಳಿಗೆ ಆಟ, ಊಟದಿಂದ ತರಬೇತಿ ಕೊಟ್ಟು ಪಾಸಿಟಿವ್ ರಿ ಇನ್ಫೋರ್ಸ್ಮೆಂಟ್ ಎಂಬ ಶೈಲಿಯ ತರಬೇತಿಯನ್ನು ಶ್ವಾನಗಳಿಗೆ ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ತರಬೇತಿ ನೀಡಲು ಸಾಧ್ಯವಾಗಿದೆ. ಡಿಸಿಪಿ ಯೋಗೇಶ್ ಅವರು ಹಾಗೂ ಅಮೆರಿಕದಲ್ಲಿ ತರಬೇತಿ ಹೊಂದಿ ಬಂದಿರುವ ಎಸಿಪಿ ನಿಂಗಾರೆಡ್ಡಿ ಪಾಟೀಲ್ ಅವರು ಈಗಿನ ಶ್ವಾನದಳವನ್ನು ಭಾಸ್ಕರ್ ರಾವ್ ಅವರ ಆದೇಶದಂತೆ ಎಲ್ಲಾ ರೀತಿಯಲ್ಲೂ ಉನ್ನತೀಕರಣಗೊಳಿಸುತ್ತಿದ್ದಾರೆ.
ಬೆಲ್ಜಿಯಂ ಶೆಪರ್ಟ್ ಎಂಬ ಒಂದು ತಳಿ ಪ್ರಪಂಚದ ಅತಿ ಬುದ್ಧಿವಂತ ಪೊಲೀಸ್ ನಾಯಿ ಎಂದು ಹೆಸರು ಪಡೆದಿದ್ದು, ಒಸಾಮ ಬಿನ್ ಲಾಡೇನ್ ಹಾಗೂ ಹಲವಾರು ಜಾಗತಿಕ ಭಯೋತ್ಪಾದಕರನ್ನು ಕಂಡು ಹಿಡಿದು ಮಟ್ಟ ಹಾಕಲು ಸಹಾಯ ಮಾಡಿದ್ದುಂಟು. ದೇಶದ ಕೆಲವೇ ರಾಜ್ಯಗಳಲ್ಲಿ ನಮ್ಮ ರಾಜ್ಯ ಮುಂದೆ ನಿಂತು ಈ ಶ್ವಾನಗಳನ್ನು ನಮ್ಮ ಪೊಲೀಸ್ ಶ್ವಾನ ದಳಕ್ಕೆ ಸೇರಿಸಿಕೊಂಡಿದ್ದಲ್ಲದೆ ಡಾಗ್ ಗುರು ಅಮೃತ್ ಅವರ ಸಲಹೆಯಂತೆ ಅತಿ ಶೀಘ್ರದಲ್ಲಿ ಇವುಗಳನ್ನು ಮಾದಕ ಹಾಗೂ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಲು, ಭಯೋತ್ಪಾದಕರನ್ನು ಮಟ್ಟ ಹಾಕಲು ಅಸಾಲ್ಟ್ ಟ್ರೈನಿಂಗ್ ಗಳಿಗೆ ತರಬೇತಿ ಹೊಂದಿದ್ದಾರೆ.
ಹ್ಯಾಂಡ್ಲರ್ಗಳಾದ ಅಶೋಕ್ ರಾಥೋಡ್, ಜಿತೇಂದರ್ ರಾಥೋಡ್, ವಿ ಬಳೂದ್, ರವಿ ಭಂಡಾರಿ ಮುಂತಾದವರು ಈ ಹೊಸ ತರಬೇತಿಯ ವಿಧಾನಗಳನ್ನು ಕಲಿತುಕೊಂಡು ಈ ಶ್ವಾನ ಚಟುವಟಿಕೆಯ ಪಾರ್ಕ್ ನಿರ್ಮಾಣಕ್ಕೆ ಅಗಾಧ ಕೊಡುಗೆಯನ್ನು ನೀಡಿದ್ದಾರೆ.
ಶ್ವಾನ ಚಟುವಟಿಕೆ ಉದ್ಯಾನವನ:
ಶ್ವಾನಗಳಿಗೆ ಚಟುವಟಿಕೆ ಹಾಗೂ ಅದು ಒಂದು ಉದ್ಯಾನವನದಲ್ಲಿ ಇದ್ದಾಗಿ ಅದು ಸಣ್ಣ ವಯಸ್ಸಿನಿಂದ ಆಟದಿಂದ ಪಾಠ ಕಲಿಯುವುದಕ್ಕೆ ಅತಿ ಶೇಷ್ಠವಾದ ಶೈಲಿ ಟನಲ್. ಸಣ್ಣ ಸುರಂಗದಲ್ಲಿ ಹೋಗಿ ಒಂದು ಬಾಂಬ್ ಹಾಗೂ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವುದರಿಂದ, ಜಂಪ್ ಮಾಡಿ ಒಂದು ಬಸ್ ಅಥವಾ ಟೈನ್ ಕಿಟಕಿ ಒಳಗೆ ಹೋಗಿ ಅಪರಾಧಿಗಳನ್ನು ಹಿಡಿಯುವುದಲ್ಲದೆ, ಆರು ಅಥವಾ ಹತ್ತು ಅಡಿ ಎತ್ತರದಲ್ಲಿರುವ ಜಾರುವ ಜಾಗಗಳಲ್ಲೂ ತಮ್ಮನ್ನು ತಾವೇ ಬ್ಯಾಲೆನ್ಸ್ ಮಾಡಿಕೊಂಡು ನಡೆಯುವುದು ಹೇಗೆ? ಜನ ಸಾಮಾನ್ಯರ ಕಾಲಿನ ನಡುವೆ ಹಾವಿನಂತೆ ತೆವಳುವುದು ಹೇಗೆ ಎನ್ನುವುದನ್ನು ಕಲಿಯಲು ಅತಿ ಮುಖ್ಯವಾದ ಪ್ರಾಂಗಣ ಈ ಚಟುವಟಿಕೆಯ ಉದ್ಯಾನವನ. ಇದರಲ್ಲಿ ಅವುಗಳಿಗೆ ತರಬೇತಿ ನೀಡಿದ ನಂತರ ಆಟ ಆಡುತ್ತಿದ್ದ ಒಂದು ಶ್ವಾನ ಕೆಲಸ ಮಾಡುವಂತೆ ಒಬ್ಬ ಪೊಲೀಸ್ ಶ್ವಾನ ಆಗುವುದಕ್ಕೆ ಸಿದ್ಧವಾಗಿರುತ್ತದೆ. ತರಬೇತಿಗೆ ಬಹಳ ಮುಖ್ಯವಾದ ಪ್ರಾಂಗಣ ಇದಾಗಿದೆ.
ಈ ಮುಂದಿನ 50 ನಾಯಿಗಳಲ್ಲಿ ಜೆರ್ಮನ್ ಶೆಪರ್ಡ್, ಬೆಲ್ಜಿಯಂ ಶೆಪರ್ಡ್, ಲಾಬ್ರೆಡಾರ್, ಗೋಲ್ಡನ್ ರಿಟ್ರೀವರ್ ಹಾಗೂ ಡಾಬೆರ್ ಮನ್ ಜಾತಿಯ ನಾಯಿಗಳನ್ನು ಡಾಗ್ ಗುರು ಅಮೃತ್ ಅವರ ಸಲಹೆಯಂತೆ ಅತಿ ಶೀಘ್ರದಲ್ಲಿ ಅವಶ್ಯಕತೆ ಉಳ್ಳ ಕೆಲಸ ಕಾರ್ಯಗಳಿಗೆ ತರಬೇತಿ ನೀಡಿ ನಮ್ಮ ರಾಜ್ಯ ಹಾಗೂ ನಾಡನ್ನು ರಕ್ಷಿಸಲು ನೇಮಿಸಲಿದ್ದಾರೆ.
ಆಯುಕ್ತಾದ ಭಾಸ್ಕರ್ ರಾವ್ ಬೆಂಗಳೂರು ದಕ್ಷಿಣ ಡಿಸಿಪಿ ರೋಹಿಣಿ ಸೆಪಟ್ ಅವರ ನೇತೃತ್ವದಲ್ಲಿ ಕೆಲವು ಭಾರತೀಯ ಬೀದಿ ನಾಯಿಗಳ ಮರಿಗಳನ್ನು ಇಂಡಿಯನ್ ಡಾಗ್ಸ್ ಎಂದು ಗುರುತಿಸಿ ಅವುಗಳಿಗೆ ಡಾಗ್ ಗುರು ಅಮೃತ್ ಹಾಗೂ ಎಸಿಪಿ ನಿಂಗಾ ರೆಡ್ಡಿ ಪಾಟೀಲ್ ಅವರ ಸಹಾಯದಿಂದ ಪೊಲೀಸ್ ಕಾರ್ಯಗಳಿಗೆ ತರಬೇತಿ ನೀಡಿ, ಇಂತಹ ದೇಸಿಯ ತಳಿ ಶ್ವಾನಗಳು ಕೂಡ ಸರಿಯಾದ ತರಬೇತಿಯಿಂದ ನಮ್ಮ ದೇಶ ಹಾಗೂ ರಾಜ್ಯವನ್ನು ಕಾಪಾಡಬಲ್ಲವು ಎಂದು ನಿರೂಪಿಸಲು ಹೊರಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








