ತಾಲ್ಲೂಕಿನಲ್ಲಿ 3 ನೆ ಸೋಂಕು ಪತ್ತೆ

ತುಮಕೂರು

   ಗುಬ್ಬಿ ತಾಲ್ಲೂಕಿನ ಚೇಳೂರು ಸಮೀಪದ ಅಂತಾಪುರ ಕೋಡಿ ಎಂಬ ಗ್ರಾಮದಲ್ಲಿ ಕಾಣಿಸಿಕೊಂಡ ಮೂರನೆ ಕೊರೋನಾ ಸೋಂಕಿತ ಪ್ರಕರಣವು ಇಡೀ ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ.

   ಚೇಳೂರು ಕಲ್ಯಾಣ ಮಂಟಪದಲ್ಲಿ ಕ್ವಾರೆಂಟೈನ್‍ನಲ್ಲಿದ್ದ ದೆಹಲಿ ಮೂಲದ ಕ್ರೇನ್ ಆಪರೇಟರ್ ಎತ್ತಿನಹೊಳೆ ಯೋಜನೆ ಕೆಲಸಕ್ಕೆ ಬರುವಾಗ್ಗೆ ಕೊರೋನಾ ವೈರಸ್ ಅಂಟಿಸಿಕೊಂಡು ಬಂದಿದ್ದು, ತಾಲ್ಲೂಕಿಗೆ ಕೊರೋನಾ ವೈರಸ್ ಪದಾರ್ಪಣೆ ಎಂದೆನಿಸಿತು. ಈತನ ಸಂಪರ್ಕಕ್ಕೆ ಬಂದವರ ಸಂಖ್ಯೆ ಕಡಿಮೆ ಎನ್ನಿಸಿದ ಹಿನ್ನೆಲೆಯಲ್ಲಿ ಜನರಲ್ಲಿ ಈ ಪ್ರಕರಣದ ಬಗ್ಗೆ ಹೆಚ್ಚಿನ ಗಮನ ಸೆಳೆಯಲಿಲ್ಲ. ನಂತರ ಗುಬ್ಬಿ ಸಮೀಪದ ಕಿಟ್ಟದಕುಪ್ಪೆ ಗ್ರಾಮದಲ್ಲಿ ಕಾಣಿಸಿಕೊಂಡ ಅಡುಗೆ ತಯಾರಕನಲ್ಲಿನ ವೈರಸ್ ಪಾಸಿಟೀವ್ ಇಡೀ ತಾಲ್ಲೂಕನ್ನು ಬೆಚ್ಚಿ ಬೀಳಿಸಿತು. ಮೂರು ದಿನದಲ್ಲೇ ಮೂರನೇ ಪ್ರಕರಣ ಅಂತಾಪುರ ಕೋಡಿ ಎಂಬ ಸಣ್ಣ ಹಳ್ಳಿಯಲ್ಲಿ ಕಾಣಿಸಿರುವುದು, ವೈರಸ್ ಸಮುದಾಯದ ಹರಡುವಿಕೆಗೆ ಸಾಕ್ಷಿಯಾಗುತ್ತಿದೆ ಎಂಬ ಆತಂಕ ಮೂಡಿಸಿದೆ.

    ಚೇಳೂರಿನಿಂದ ಶಿರಾ ಮಾರ್ಗ ಮಧ್ಯೆ ಸಿಗುವ 40 ಮನೆಯ ಅಂತಾಪುರ ಸಣ್ಣ ಗ್ರಾಮದಲ್ಲಿ ವಾಸವಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿಯೋರ್ವನಲ್ಲಿ ವೈರಸ್ ಕಾಣಿಸಿಕೊಂಡಿದೆ. ಕಾಲೇಜು ರಜೆಯ ಹಿನ್ನೆಲೆ ಚೇಳೂರಿನ ಎಪಿಎಂಸಿಯಲ್ಲಿನ ಮಾವಿನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕ, ಶಿರಾದಲ್ಲಿನ ತನ್ನ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದ ಕಾರಣ, ಈ ಸೋಂಕು ಶಿರಾ ಮೂಲದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕಳೆದ 20 ನೆ ತಾರೀಖಿನಂದು ಗಂಟಲು ದ್ರವ ಪಡೆಯಲಾಗಿತ್ತು. ಪರೀಕ್ಷೆಯ ಬಳಿಕ ಕೋವಿಡ್-19 ವೈರಸ್ ದೃಢವಾಗಿದೆ. ಈತನ ಟ್ರ್ಯಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ. 18 ಮಂದಿ ಪ್ರಾಥಮಿಕ ಸಂಪರ್ಕ ಹಾಗೂ 28 ಮಂದಿ ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಗುರುತಿಸಲಾಗಿದೆ.

     ದ್ವಿತೀಯ ಸಂಪರ್ಕದ 28 ಜನರನ್ನು, ಪ್ರಾಥಮಿಕ ಸಂಪರ್ಕದ 18 ಮಂದಿಯನ್ನು ಕ್ವಾರೆಂಟೈನ್‍ಗೆ ಒಳಪಡಿಸಲಾಗಿದೆ. ಇಡೀ ಗ್ರಾಮಸ್ಥರನ್ನು ವೈದ್ಯಕೀಯ ಪರೀಕೆಗೆ ಒಳಪಡಿಸಿ ಸ್ಯಾನಿಟೈಸರ್ ಮಾಡಿಸುವ ಕೆಲಸವನ್ನು ಕಂದಾಯ ಇಲಾಖಾಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳು ನಡೆಸಿದ್ದಾರೆ. ಇಡೀ ಸಣ್ಣ ಗ್ರಾಮ ಅಂತಾಪುರ ಕೋಡಿಯನ್ನು ಕಂಟೈನ್ಮೆಂಟ್ ಏರಿಯಾ ಎಂದು ಗುರುತಿಸಿ ಗ್ರಾಮವನ್ನೇ ಸುತ್ತ್ತುವರಿದು ಪರದೆ ಅಳವಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖಾ ಸಿಬ್ಬಂದಿ ಇಲ್ಲಿನ ಜನರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link