ತುರುವೇಕೆರೆ
ತಾಲ್ಲೂಕಿನಲ್ಲಿ ಕೊರೋನಾ ಬಾಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 100 ಹಾಸಿಗೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಶಾಸಕ ಮಸಾಲಾ ಜಯರಾಮ್ ಹಾಗೂ ಉಪವಿಭಾಗಾಧಿಕಾರಿ ನಂದಿನಿ ತಿಳಿಸಿದ್ದಾರೆ.
ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿರುವ ವ್ಯವಸ್ಥೆಯನ್ನು ಪರಿಶೀಲಿಸಲು ಸೋಮವಾರ ಆಗಮಿಸಿದ್ದ ಶಾಸಕರಿಗೆ ಉಪವಿಭಾಗಾಧಿಕಾರಿ ನಂದಿನಿಯವರು ವ್ಯವಸ್ಥೆ ಬಗ್ಗೆ ವಿವರಿಸಿದರು.
ಸೋಂಕಿತರ ಪ್ರಥಮ ಚಿಕಿತ್ಸೆಗೆ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಗ್ರಾಮಗಳಿಗೆ ಬರುತ್ತಿರುವ ಮಂದಿಯಿಂದ ಕೊರೋನಾ ಹಬ್ಬುತ್ತಿರುವುದು ವಿಷಾದನೀಯ. ರೋಗದಿಂದ ಮುಕ್ತವಾಗಿದ್ದ ತಾಲ್ಲೂಕಿನಲ್ಲಿ ಕೊರೋನಾ ಹರಡುತ್ತಿರುವುದು ಗಾಬರಿ ಹುಟ್ಟಿಸಿದೆ. ಗ್ರಾಮಗಳಿಗೆ ಬರುವ ಇತರೆ ಊರಿನವರ ಬಗ್ಗೆ ಕೂಡಲೆ ಮಾಹಿತಿ ನೀಡಿದಲ್ಲಿ, ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಸಾರ್ವಜನಿಕರು ಕೊರೋನಾದಿಂದ ದೂರವಿರಲು ಜಾಗೃತರಾಗುವುದು ಮುಖ್ಯ. ಪ್ರತಿ ಕ್ಷಣ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ತಮ್ಮ ಆರೋಗ್ಯದತ್ತ ಗಮನ ನೀಡಿದಲ್ಲಿ ತಮ್ಮ ಆರೋಗ್ಯವೂ ಹಾಗೂ ಇತರರ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.
ತಾಲ್ಲೂಕಿನ ಮೇಲಿನ ಹೊರಗೇನಹಳ್ಳಿಯ ಬಾಲಕನೋರ್ವನಿಗೆ ಸೋಂಕು ತಗುಲಿದೆ. ಬೆಂಗಳೂರಿನಿಂದ ಬಂದಿದ್ದವರಿಂದ ಈ ಸೋಂಕು ತಗುಲಿದೆ ಎಂದು ಅನುಮಾನವಿದೆ. ಸದ್ಯ ಬಾಲಕನಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ಚೇತರಿಸಿ ಕೊಳ್ಳುತ್ತಿದ್ದಾನೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸುಪ್ರಿಯಾ ಮಾಹಿತಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ನಯೀಮ್ ಉನ್ನಿಸಾ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
