ತುಮಕೂರು
ತುಮಕೂರು ನಗರದಲ್ಲಿ ಕೊರೊನಾ ಸೋಂಕಿತರು, ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತದೆ. ಸಾಲದಕ್ಕೆ ಮಳೆಗಾಲ ಆರಂಭವಾಗಿ ಡೇಂಗ್ಯೂ, ಚಿಕುನ್ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಈ ಪರಿಸ್ಥಿತಿಯಲ್ಲಿ ನಗರ ಪಾಲಿಕೆ ಹಾಗೂ ಇತರೆ ಇಲಾಖೆಗಳು ಅಗತ್ಯ ಎಚ್ಚರಿಕೆಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ, ನಗರ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾಗಿದೆ.
ನಗರದಲ್ಲಿ ಹೆಚ್ಚಿರುವ ಬೀದಿ ನಾಯಿಗಳು, ಹಂದಿಗಳ ಹಾವಳಿ ತಡೆಯುವ ಕೆಲಸ ಆಗಬೇಕಾಗಿದೆ. ಹಂದಿಗಳ ಹಾವಳಿ ವಿಪರೀತವಾಗಿದೆ. ಹಂದಿ-ನಾಯಿಗಳನ್ನು ನಿಯಂತ್ರಣ ಮಾಡಬೇಕೆಂದು ಪ್ರತಿ ನಿತ್ಯ ನಗರಪಾಲಿಕೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಸಾರ್ವಜನಿಕರಿಂದ ಒತ್ತಡದ ದೂರುಗಳು ಬರುತ್ತಿವೆ. ನಗರದ ಬಹುತೇಕ ಎಲ್ಲಾ ಬಡಾವಣೆಗಳ ಬೀದಿಬೀದಿಗಳಲ್ಲಿ ಹಂದಿ-ನಾಯಿಗಳು ಕಾಣಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಕಸದ ರಾಶಿ, ಚರಂಡಿಗಳ ಕೊಳಚೆಯನ್ನು ಕಿತ್ತು ಈಡಾಡಿ ನೈರ್ಮಲ್ಯ ಹಾಳು ಮಾಡುತ್ತಿವೆ. ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುತ್ತಾ ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿವೆ. ಹಂದಿಗಳಿಂದಾಗಿ ನಾಯಿಗಳ ಹಾವಳಿಯೂ ಹೆಚ್ಚಾಗುತ್ತಿದೆ.
ನಗರದಲ್ಲಿ ಹಂದಿ, ನಾಯಿಗಳ ನಿರ್ಮೂಲನೆ ಮಾಡಿ ಎಂಬ ಸಾರ್ವಜನಿಕ ಒತ್ತಾಯ ಇತ್ತೀಚಿನದಲ್ಲ. ಹತ್ತಾರು ವರ್ಷಗಳಿಂದ ಈ ಒತ್ತಡವಿದ್ದರೂ ನಗರಾಡಳಿತ ಈ ಬಗ್ಗೆ ಈವರೆಗೂ ಗಂಭೀರ ಕ್ರಮ ತೆಗೆದುಕೊಂಡಿಲ್ಲ. ಆಗಿಂದಾಗ್ಗೆ ನಗರಪಾಲಿಕೆಯಿಂದ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತದೆ. ಆದರೆ, ಈ ಮೂಲಕ ಎಷ್ಟು ನಾಯಿಗಳ ನಿಯಂತ್ರಣ ಮಾಡಲಾಗಿದೆ ಎಂಬ ಲೆಕ್ಕ ಪಾಲಿಕೆಗೂ ಇಲ್ಲ. ಆದರೆ ನಾಯಿ ಹಾವಳಿ ನಿಂತಿಲ್ಲ.
ಮುನಿಸಿಪಲ್ ನಿಯಮಗಳ ಪ್ರಕಾರ ನಗರ ವ್ಯಾಪ್ತಿಯಲ್ಲಿ ಹಂದಿ ಸಾಕಾಣೆಗೆ ಅವಕಾಶವಿಲ್ಲ, ಅದರಲ್ಲೂ ಹಂದಿಗಳನ್ನು ಬೀದಿಗೆ ಬಿಡಲು ಅವಕಾಶವೇ ಇಲ್ಲ. ಹೀಗಿದ್ದೂ ಹಲವು ವರ್ಷಗಳಿಂದ ಹಂದಿಗಳು ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಸಾಕಾಣಿಕೆದಾರರೂ ಪಾಲಿಕೆಯ ಯಾವ ಸೂಚನೆಗಳನ್ನೂ ಪಾಲಿಸದೆ ನಗರದ ಮಧ್ಯೆ ಹಂದಿ ಸಾಕುತ್ತಿದ್ದಾರೆ.
ಸಾರ್ವಜನಿಕರ ಒತ್ತಡ ಹೆಚ್ಚಾದ ನಂತರ ನಗರಪಾಲಿಕೆ ಆಯುಕ್ತರಾದ ರೇಣುಕಾ ಅವರು ಕಳೆದ ವಾರ ಹಂದಿ ಸಾಕಾಣಿಕೆದಾರರಿಗೆ ನೊಟೀಸು ಜಾರಿ ಮಾಡಿದ್ದಾರೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳಿಂದ ಕೋವಿಡ್-19 ಹಾಗೂ ಮತ್ತಿತರ ಸಾಂಕ್ರಮಿಕ ರೋಗಗಳು ಉಲ್ಬಣವಾಗುವ ಸಾಧ್ಯತೆಯಿದ್ದು, ಬಿಡಾಡಿ ಹಂದಿಗಳ ಮಾಲಿಕರು/ ಸಾಕಾಣಿಕೆದಾರರು ತಮ್ಮ ಹಂದಿಗಳನ್ನು ಹಿಡಿದು ನಗರ ಪ್ರದೇಶದಿಂದ ಹೊರಸಾಗಿಸಬೇಕೆಂದು ಸೂಚನೆ ನೀಡಿದ್ದಾರೆ.
ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ರಸ್ತೆ, ಖಾಲಿ ನಿವೇಶನ ಹಾಗೂ ಎಲ್ಲೆಂದರಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿ ಓಡಾಡಿಕೊಂಡಿರುವುದರಿಂದ ನಗರದಲ್ಲಿ ರೋಗ-ರುಜಿನ ಮತ್ತು ಅನೈರ್ಮಲ್ಯಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ 15 ದಿನಗಳ ಒಳಗಾಗಿ ಹಂದಿಗಳ ಮಾಲಿಕರು ಬಿಡಾಡಿಯಾಗಿ ಓಡಾಡಿಕೊಂಡಿರುವ ತಮ್ಮ ಹಂದಿಗಳನ್ನು ಹಿಡಿದು ನಗರ ಪ್ರದೇಶದಿಂದ ಹೊರಸಾಗಿಸದಿದ್ದಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ 345 ವಿಧಿಯನ್ವಯ ಸೂಕ್ತ ಕ್ರಮಕೈಳ್ಳಲಾಗುವುದು. ಇದರಿಂದ ಹಂದಿ ಮಾಲೀಕರಿಗಾಗುವ ಯಾವುದೇ ರೀತಿಯ ಕಷ್ಟ_ನಷ್ಟಗಳಿಗೆ ಮಹಾನಗರ ಪಾಲಿಕೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆಗೆ ನಗರಪಾಲಿಕೆ ಅನುಮತಿ, ಪರವಾನಗಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಪಶುಪಾಲನಾ ಇಲಾಖೆಯಿಂದ ಪರವಾನಗಿ ಪಡೆಯಬೇಕು ಹಾಗೂ ಸಾರ್ವಜನಿಕವಾಗಿ ಬಿಟ್ಟು ಹಂದಿ ಮೇಯಿಸಲು ಅವಕಾಶವಿಲ್ಲ, ಕೋಳಿ, ಕುರಿ ಫಾರಂ ರೀತಿ ಶೆಡ್ ಕಟ್ಟಿಕೊಂಡು ನಗರದ ಹೊರಗೆ ಹಂದಿ ಫಾರಂ ಮಾಡಿಕೊಳ್ಳಬಹುದು. ಆದರೆ, ಅನಧಿಕೃತವಾಗಿ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ನಗರದಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿರುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಂದಿ ಸಾಕಾಣಿಕೆ ಮಾಡುತ್ತಿರುವ 50-60 ಕುಟುಂಬದವರಿಂದ ನಗರದ 4 ಲಕ್ಷ ಜನರಿಗೆ ತೊಂದರೆಯಾಗುತ್ತದೆ.
ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರು ನಗರದಲ್ಲಿ ಹಂದಿಗಳ ಹಾವಳಿ ತಡೆಯಲೇಬೇಕು. ಹಂದಿಗಳನ್ನು ನಗರದಿಂದ ಹೊರ ಹಾಕಲೇಬೇಕು, ಇಲ್ಲವೆ ಸಾಕಾಣಿಕೆದಾರರು ನಗರದಿಂದ ಹೊರಗೆ ಶೇಡ್ ನಿರ್ಮಿಸಿ ಸಾಕಾಣಿಕೆ ಮಾಡಿಕೊಳ್ಳಬೇಕು ಎಂದು ನಗರ ಪಾಲಿಕೆಯ ನಗರ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಮಲ್ಲಿಕಾರ್ಜುನ್ ಹೇಳಿದರು.
ಸಾರ್ವಜನಿಕರು ಮನೆಯ ಮಿಕ್ಕಿದ ಆಹಾರ ಪದಾರ್ಥಗಳನ್ನು ಬೀದಿಗೆ, ಚರಂಡಿಗೆ ತಂದು ಸುರಿಯುವುದರಿಂದ ಹಂದಿ, ನಾಯಿಗಳು ತಿನ್ನಲು ಬರುತ್ತವೆ, ಒಮ್ಮೆ ಇಲ್ಲಿ ಆಹಾರ ಸಿಗುತ್ತದೆ ಎಂಬ ಅರಿವಾಗಿ ಅಲ್ಲಿಗೆ ಬರಲು ಶುರುವಾಗುತ್ತವೆ. ಈ ಪರಿಸ್ಥಿತಿ ನಗರದ ಎಲ್ಲಾ ಬಡಾವಣೆಗಳಲ್ಲೂ ಕಂಡುಬರುತ್ತದೆ ಎಂದರು.
ಸಾಲದಕ್ಕೆ ನಗರದ ಹಲವು ಬಡಾವಣೆಗಳಲ್ಲಿ ಇರುವ ಮಾಂಸದ ಅಂಗಡಿಗಳು ಮಾಂಸದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ, ಚರಂಡಿಗೆ ಸುರಿಯುವುದರಿಂದ ಇಂತಹ ಕಡೆ ಹಂದಿ, ನಾಯಿಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ನಗರದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಮಟನ್ ಮಾರ್ಕೆಟ್ ಸ್ಥಾಪಿಸಿ, ನಗರದ ಮಧ್ಯೆ ಇರುವ ಮಾಂಸದ ಅಂಗಡಿಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು, ಅಲ್ಲಿನ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ವ್ಯವಸ್ಥೆ ಮಾಡಿದರೆ ಹಂದಿ, ನಾಯಿಗಳ ಹಾವಳಿ ನಿಯಂತ್ರಿಸಬಹುದು ಹಾಗೂ ನಗರ ನೈರ್ಮಲ್ಯ ಕಾಪಾಡಬಹುದು ಎಂದು ಮಲ್ಲಿಕಾರ್ಜುನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್ ಸಿಟಿಯಲ್ಲಿ ನಾಗರೀಕರಿಗೆ ಆರೋಗ್ಯ, ಮೂಲ ಸೌಲಭ್ಯ ಆದ್ಯತೆಯಾಗಬೇಕು. ಹಂದಿಗಳನ್ನು ಹೊರ ಹಾಕದೆ ಇನ್ನೂ ನಗರದಲ್ಲಿ ಉಳಿಸಿಕೊಂಡಿರುವುದು ನಗರಪಾಲಿಕೆ ಆಡಳಿತ ವ್ಯವಸ್ಥೆಗೆ ತಕ್ಕುದ್ದಲ್ಲ. ಹಂದಿ ಹಾವಳಿ ನಿಯಂತ್ರಿಸಿ ಎಂದು ನಾನು ಹಲವಾರು ಬಾರಿ ನಗರ ಪಾಲಿಕೆ ಅಧಿಕಾರಿಗಳಿಗೆ ಲಿಖಿತ ರೂಪದ ಅರ್ಜಿ ಕೊಟ್ಟಿದ್ದೇನೆ, ಈವರೆಗೆ ಅದನ್ನು ಗಂಭೀರವಾಗಿ ಪರಿಗಣಿಸಿ, ಹಂದಿಗಳನ್ನು ನಗರದಿಂದ ನಿರ್ಮೂಲನೆ ಮಾಡಲೇ ಇಲ್ಲ ಎಂದು ಜಯನಗರದ ಎಸ್. ಕೆ. ನರಸಿಂಹರಾಜು ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಬಾರಿ ಹಂದಿ ಹಿಡಿಯಲು ಹೋದ ನಗರ ಪಾಲಿಕೆ ಸಿಬ್ಬಂದಿಯನ್ನು ಸಾಕಾಣಿಕೆದಾರರು ಅವಾಚ್ಯವಾಗಿ ಬೈದು, ಅವರ ಮೇಲೆ ಕಲ್ಲು ತೂರಿ ಆತಂಕ ಸೃಷ್ಟಿಸಿದ್ದರು ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
ಆದರೆ, ಈಗ ಸಾರ್ವಜನಿಕರಿಂದ ಒತ್ತಡ ಹೆಚ್ಚಾಗಿರುವ ಕಾರಣ ಹಂದಿಗಳನ್ನು ನಗರದಿಂದ ಹೊರ ಹಾಕಲು ನಗರಪಾಲಿಕೆಯಲ್ಲಿ ಗಂಭೀರ ಪ್ರಯತ್ನ ನಡೆದಿದೆ. ಈ ಬಗ್ಗೆ ಆಯುಕ್ತರು ಹಂದಿ ಸಾಕಾಣಿಕೆದಾರರಿಗೆ ನೋಟೀಸ್ ನೀಡಿದ್ದಾರೆ, ಮುಂದಿನ ವಾರ ನಡೆಯುವ ನಗರಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹಂದಿ ಹಾವಳಿಯನ್ನು ಪ್ರಮುಖ ವಿಷಯವಾಗಿ ಚರ್ಚಿಸಿ, ಸೂಕ್ತ ತೀಮಾನ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ.
ತಾವು ನೊಟಿಸ್ ನೀಡಿದ ನಂತರ ಹಂದಿ ಸಾಕಾಣಿಕೆದಾರರು, ಈ ಮಧ್ಯೆ, ತಮಗೆ ಬೇರೆ ಕಡೆ ಜಾಗ ಕೊಟ್ಟರೆ ಸ್ಥಳಾಂತರಿಸುತ್ತೇವೆ ಎಂದು ನಗರಪಾಲಿಕೆಗೆ ಹೇಳಿದ್ದಾರೆ. ಆದರೆ, ಈ ಬಗ್ಗೆ ಪಾಲಿಕೆಯಿಂದ ಯಾವುದೇ ತೀರ್ಮಾನವಾಗಿಲ್ಲ. ಹಿಂದೆ ಭೂಬಾಲನ್ ಆಯುಕ್ತರಾಗಿದ್ದಾಗ ಹಂದಿ ಸಾಕಾಣಿಕೆದಾರರು ಹಂದಿ ಮೇಯಿಸಲು ಅಜ್ಜಗೊಂಡನಹಳ್ಳಿಯ ತ್ಯಾಜ್ಯವಿಲೇವಾರಿ ಘಟಕದಲ್ಲಿ ನಾಲ್ಕು ಎಕರೆ ಜಾಗ ನೀಡಿ, ಅಲ್ಲಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿತ್ತು.
ಆದರೆ ಇದಕ್ಕೆ ಇಲಾಖೆ ಮಟ್ಟದಲ್ಲಿ ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ತುಮಕೂರು ನಗರದ ಜನ ಸಂಖ್ಯೆ ಹೆಚ್ಚಾಗುತ್ತಿದೆ, ಇನ್ನೂ ಹತ್ತು-ಹದಿನೈದು ವರ್ಷಗಳಲ್ಲಿ ಜನ ಸಂಖ್ಯೆ ಹೆಚ್ಚಾಗಿ, ಕಸ ಸಂಗ್ರಹಣೆ ಪ್ರಮಾಣ ಹೆಚ್ಚುತ್ತದೆ. ಅಜ್ಜಗೊಂಡನಹಳ್ಳಿ ಘಟಕದಲ್ಲಿ ಕಸ ಸಂಸ್ಕರಣೆಗೆ ಜಾಗದ ಕೊರತೆಯಾಗಿ, ಕಸ ಸಂಸ್ಕರಣೆಗೆ ಪರದಾಡುವ ಪರಿಸ್ಥಿತಿ ಎದುರಾಗಬಹುದು, ತ್ಯಾಜ್ಯ ಘಟಕದಲ್ಲಿ ಬೇರೆ ಉದ್ದೇಶಕ್ಕೆ ಸ್ಥಳ ನೀಡಬಾರದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಹೀಗಾಗಿ, ಹಂದಿ ಸಾಕಣಿಕೆದಾರರಿಗೆ ನಗರ ಪಾಲಿಕೆಯಿಂದ ಜಾಗ ನೀಡುವ ಪ್ರಸ್ತಾಪವಿಲ್ಲ ಎಂದು ಗೊತ್ತಾಗಿದೆ.
ಹಂದಿಗಳ ಹಾವಳಿ ಬಗ್ಗೆ ತಮಗೂ ಸಾರ್ವಜನಿಕರಿಂದ ದಿನಾ ದೂರುಗಳು ಬರುತ್ತಲೇ ಇವೆ. ಕೆಲವರು ಹಂದಿಗಳಿಂದ ಆಗುತ್ತಿರುವ ಅವಾಂತರಗಳನ್ನು ಫೋಟೋ ವೀಡಿಯೋ ಮಾಡಿ ತಮಗೆ ವಾಟ್ಸಾಪ್ ಮಾಡುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯ, ನಗರ ನೈರ್ಮಲ್ಯದ ದೃಷ್ಟಿಯಿಂದ ನಗರದಲ್ಲಿ ಹಂದಿಗಳ ಓಡಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ನಗರ ಪಾಲಿಕೆ ಆಯುಕ್ತರಾದ ರೇಣುಕಾ ಹೇಳಿದರು.
ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ 15 ದಿನಗಳ ಒಳಗಾಗಿ ಹಂದಿಗಳನ್ನು ನಗರದಿಂದ ಹೊರಗೆ ಸಾಗಿಸುವಂತೆ ಸಾಕಾಣಿಕೆದಾರರಿಗೆ ನೋಟೀಸ್ ನೀಡಲಾಗಿದೆ. ಮುಂದಿನ ವಾರ ನಡೆಯುವ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲಿನ ತೀರ್ಮಾನ ಆಧರಿಸಿ, ಜಿಲ್ಲಾಧಿಕಾರಿಗಳು, ಎಸ್ಪಿಯವರ ಸಹಕಾರ ಪಡೆದು ಹಂದಿಗಳ ಹಾವಳಿ ತಡೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
