ಬೆಂಗಳೂರು
ಬೆಂಗಳೂರು ನಗರದ ಮಧ್ಯ ಭಾಗದಲ್ಲಿರುವ ಕಂಠೀರವ ಸ್ಟುಡಿಯೋವು ಸರ್ಕಾರದ ಪ್ರಮುಖ ಆಸ್ತಿಯಾಗಿದ್ದು, ನವಯುಗಕ್ಕೆ ಹೊಂದಿಕೊಳ್ಳುವ ಅಧುನಿಕ ಸ್ಪರ್ಶ ನೀಡುವ ನಿಟ್ಟಿನಲ್ಲಿ, ಹೊಸ ಕ್ರಿಯಾ ಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ: ಪಿ.ಎಸ್.ಹರ್ಷ ತಿಳಿಸಿದರು.
ಕಂಠೀರವ ಸ್ಟುಡಿಯೋ, ಡಾ: ರಾಜ್ಕುಮಾರ್ ಸ್ಮಾರಕ ಹಾಗೂ ಡಾ: ಅಂಬರೀಶ್ ಸ್ಮಾರಕಕ್ಕೆ ಗುರುತಿಸಿರುವ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಆಯುಕ್ತರು, ಸ್ಟುಡಿಯೋದಲ್ಲಿ ಹೆಚ್ಚಾಗಿ ಚಿತ್ರೀಕರಣ ನಡೆಯುವಂತೆ, ವಾತಾವರಣ ಸೃಷ್ಟಿ ಮಾಡಬೇಕು.ರಾಮೋಜಿರಾವ್ ಸ್ಟುಡಿಯೋ ಮಾದರಿಯಲ್ಲಿ ಕಂಠೀರವ ಸ್ಟುಡಿಯೋವನ್ನು ಅಭಿವೃದ್ಧಿ ಪಡಿಸಬೇಕು. ಕಂಠೀರವ ಸ್ಟುಡಿಯೋದಲ್ಲಿ ಹೆಚ್ಚು ಚಿತ್ರೀಕರಣ ನಡೆಸುವವರಿಗೆ, ಸರ್ಕಾರದಿಂದ ನೀಡುವಂತಹ ಸಬ್ಸಿಡಿಯಲ್ಲಿ ಆದ್ಯತೆ ನೀಡಲು ಕ್ರಮವಹಿಸುವ ನಿಟ್ಟಿನಲ್ಲಿ ಚಿಂತಿಸಲಾಗುವುದು ಎಂದು ಹೇಳಿದರು.
ಚಲನಚಿತ್ರ, ಧಾರಾವಾಹಿ ಹಾಗೂ ಟಿವಿ ಶೋಗಳ ಚಿತ್ರೀಕರಣಕ್ಕಾಗಿ, ಬೆಂಗಳೂರು ನಗರದ ಮಧ್ಯ ಭಾಗದಲ್ಲಿ ವಿಶಾಲವಾದ ಆವರಣ ಇರುವ ಕಂಠೀರವ ಸ್ಟುಡಿಯೋವನ್ನು ಬಳಸುವುದರಿಂದ ನಿರ್ಮಾಪಕರುಗಳಿಗೆ ಆರ್ಥಿಕವಾಗಿ ಹೆಚ್ಚು ಹೊರೆ ಆಗುವುದಿಲ್ಲ ಹಾಗೂ ಹೆಚ್ಚು ಚಿತ್ರೀಕರಣ ನಡೆದರೆ ಸರ್ಕಾರಕ್ಕೆ ಆದಾಯವು ಸಹ ಬರಲಿದೆ ಎಂದು ಹೇಳಿದರು.
ಡಾ: ರಾಜ್ಕುಮಾರ್ ಸ್ಮಾರಕವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ, ಮೇರು ನಟರ ಕುಟುಂಬದೊಂದಿಗೆ ಚರ್ಚಿಸಿ, ಅಭಿವೃದ್ಧಿಯ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇತರೆ ಆಕರ್ಷಣೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಬೇಕು. ಕನ್ನಡ ನಾಡು ನುಡಿಗೆ ಡಾ: ರಾಜ್ಕುಮಾರ್ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಗೌರವಿಸಿ, ಪ್ರೀತಿಸುವ ಜನರ, ಪುಣ್ಯ ಭೂಮಿಯಾಗಿರುವ ಅವರ ಸ್ಮಾರಕದ ನಿರ್ವಹಣೆ ಮುಖ್ಯವಾಗಿದ್ದು, ಯಾವುದೇ ಸಂದರ್ಭದಲ್ಲಿ ಅನುದಾನದ ಅವಶ್ಯವಿದಲ್ಲಿ, ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಬಳಿಕ, ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ: ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳವನ್ನು ಪರಿಶೀಲಿಸಿದ, ಆಯುಕ್ತರು, ಸ್ಮಾರಕ ನಿರ್ಮಾಣದ ಆರಂಭಕ್ಕೆ, ಮುಂಗಡವಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ರೂ. 5 ಕೋಟಿ ಅನುದಾನವನ್ನು ಘೋಷಿಸಿದ್ದು, ಕಾಮಗಾರಿ ಆರಂಭಕ್ಕೆ ಬೇಕಾಗುವ ಎಲ್ಲಾ ಹಂತದ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.
ಈ ವೇಳೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರುಗಳಾದ ಎ.ಆರ್.ಪ್ರಕಾಶ್, ಡಿ.ಪಿ.ಮುರಳೀಧರ್, ಕಂಠೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕಿ ಮಮತಾ, ಡಾ: ರಾಜ್ಕುಮಾರ್, ಡಾ: ವಿಷ್ಣುವರ್ಧನ್ ಹಾಗೂ ಡಾ: ಅಂಬರೀಶ್ ಪ್ರತಿಷ್ಠಾನಗಳ ಸದಸ್ಯ ಕಾರ್ಯದರ್ಶಿ ಕೆ.ಎನ್.ವಿಜಯಾನಂದ ಹಾಗೂ ಇತರರು ಉಪಸ್ಥಿತರಿದ್ದರು.
ಜಾಗೃತಿ ಕಾರ್ಯಕ್ರಮಕ್ಕೆ ಒತ್ತು
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ಭೇಟಿ ನೀಡಿದ ಆಯುಕ್ತರು, ಸಾರ್ವಜನಿಕರಲ್ಲಿ ಮದ್ಯಪಾನ ಹಾಗೂ ಇತರೆ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು. ಮಾದಕವ್ಯಸನ ನಿಯಂತ್ರಣ ಕೇಂದ್ರಗಳನ್ನು ನಡೆಸುತ್ತಿರುವವ ಸಭೆಯನ್ನು ಶೀಘ್ರವಾಗಿ ನಡೆಸಬೇಕು ಹಾಗೂ ದೇಶ ಮತ್ತು ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ಮಂಡಳಿ ಸದಾ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎಸ್.ಶಂಕರಪ್ಪ ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
