ಹುಳಿಯಾರಿನಲ್ಲಿ ಈರುಳ್ಳಿ ಹರಾಜು ; ವಿವಿಧ ಜಿಲ್ಲೆಗಳ ಖರೀದಿದಾರರು ಭಾಗಿ

 ಹುಳಿಯಾರು :

      ಹುಳಿಯಾರಿನ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಈರುಳ್ಳಿ ಹರಾಜು ಪ್ರಕ್ರಿಯೆ ಇಲ್ಲಿನ ಈರುಳ್ಳಿ ವ್ಯಾಪಾರಿ ಹಾರೂನ್ ಷರೀಫ್ ಅವರ ಅಂಗಡಿ ಬಳಿ ಭಾನುವಾರ ನಡೆಯಿತು. ಸ್ಥಳಿಯವಾಗಿ ಉತ್ತಮ ಬೆಲೆ ಸಿಕ್ಕ ಸಂತಸ ರೈತರದಾದರೆ, ಗುಣಮಟ್ಟದ ಈರುಳ್ಳಿ ಲಭಿಸಿದ ತೃಪ್ತಿ ಖರೀದಿದಾರದಾಗಿತ್ತು.

      ಹೌದು ಎಪಿಎಂಸಿ ಕಾಯ್ದೆಯನ್ನು ಸರ್ಕಾರ ತಿದ್ದುಪಡಿ ಮಾಡಿ ರೈತರು ತಮ್ಮ ಬೆಳೆಗಳನ್ನು ಎಲ್ಲಿಯಾದರೂ, ಯಾರಿಗಾದರೂ ಮಾರುವ ಸ್ವಾತಂತ್ರ್ಯ ನೀಡಿತು. ಕಾಯ್ದೆ ತಿದ್ದುಪಡಿಯ ಲಾಭ ರೈತರಿಗೆ ನೀಡುವ ನಿಟ್ಟಿನಲ್ಲಿ ಮೂರ್ನಾಲ್ಕು ದಶಕಗಳಿಂದ ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದ ಹಾರೂನ್ ಷರೀಪ್ ಅವರು ಹುಳಿಯಾರಿನಲ್ಲಿ ಈರುಳ್ಳಿ ಹರಾಜು ಪ್ರಕ್ರಿಯೆ ಆರಂಭಿಸುವ ಕಾರ್ಯಕ್ಕೆ ಕೈ ಹಾಕಿದರು. ಎರಡ್ಮೂರು ತಿಂಗಳುಗಳ ಕಾಲ ರೈತರು ಮತ್ತು ಖರೀದಿದಾರರ ಮನೆಮನೆಗೆ ತಿರುಗಿ ಹರಾಜಿನಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಅನೇಕ
ಇವರ ಪರಿಶ್ರಮದ ಫಲವಾಗಿ ಈರುಳ್ಳಿ ಹರಾಜಿಗೆ ಹಿರಿಯೂರು, ಚಿಕ್ಕನಾಯಕನಹಳ್ಳಿ, ಶಿರಾ, ಹೊಸದುರ್ಗ, ಮಡಕಶಿರಾ ತಾಲೂಕಿನ ಐವತ್ತಕ್ಕೂ ಹೆಚ್ಚು ರೈತರು ಆಗಮಿಸಿದ್ದರು. ಇಂಡೋ ಅಮೇರಿಕ, ಸತಾರ, ಪ್ರೇಮ್, ಜಿಂದಾಲ್ ಸೇರಿದಂತೆ ಅನೇಕ ತಳಿಗಳ ಈರುಳ್ಳಿಯನ್ನು ಮಾರಾಟಕ್ಕೆ ತಂದಿದ್ದರು. ನಾಗಮಂಗಲ, ತುರುವೇಕೆರೆ, ತಿಪಟೂರು, ಶಿರಾ ಮತ್ತಿತರ ಭಾಗದಿಂದ ಖರೀದಿದಾರರು ಬಂದಿದ್ದರು. ರೈತರು ಮತ್ತು ಖರೀದಿದಾರರು ಉತ್ಸಾಹದಿಂದ ಹರಾಜಿನಲ್ಲಿ ಪಾಲ್ಗೊಂಡರಲ್ಲದೆ ಕ್ವಿಂಟಲ್ ಈರುಳ್ಳಿಗೆ ಕನಿಷ್ಠ 2 ಸಾವಿರ ಗರಿಷ್ಠ 4600 ರೂಗೆ ಮಾರಾಟವಾಗಿ ಸಂತೋಷದಿಂದ ಹಿಂದಿರುಗಿದರು.

       ಬೆಳಗ್ಗೆ 11 ಗಂಟೆಗೆ ಆರಂಭವಾದ ಹರಾಜು ಪ್ರಕ್ರಿಯೆ 12 ಗಂಟೆಗೆ ಮುಕ್ತಾಯವಾಯಿತು. ಖರೀದಿದಾರರಿಗೆ ಈರುಳ್ಳಿ ಗುಣಮಟ್ಟ ಪರಿಶೀಲನೆಗೆ ಅವಕಾಶ ನೀಡಲಾಗಿತ್ತು. ಹರಾಜು ಮುಗಿದ ಬಳಿಕ ರೈತರಿಂದ ಈರುಳ್ಳಿ ತೂಕ ಹಾಕಿಸಿ ವರ್ತಕರಿಗೆ ಹಸ್ತಾಂತರಿಸಲಾಯಿತು. ಸಣ್ಣ ರೈತರಿಗೆ ಸ್ಥಳದಲ್ಲೇ ನಗದು ಹಣ ನೀಡಲಾಯಿತು. ದೊಡ್ಡ ರೈತರಿಗೆ ಬ್ಯಾಂಕ್ ಮೂಲಕ ಹಣ ವರ್ಗಾಯಿಸುವ ವ್ಯವಸ್ಥೆ ಮಾಡಲಾಯಿತು. ಪ್ರತಿ ಭಾನುವಾರ ಮತ್ತು ಬುಧವಾರ ಹುಳಿಯಾರಿನಲ್ಲಿ ಈರುಳ್ಳಿ ಹರಾಜು ಪ್ರಕ್ರಿಯೆ ನಡೆಸಲು ರೈತರು ಮತ್ತು ವರ್ತಕರು ಸಮ್ಮತಿ ನೀಡಿದರು.

       ಹಿರಿಯೂರು, ಚಿಕ್ಕನಾಯಕನಹಳ್ಳಿ, ಶಿರಾ, ಹೊಸದುರ್ಗ, ಮಡಕಶಿರಾ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಈರುಳ್ಳಿ ಬೆಳೆಗಾರರಿದ್ದಾರೆ. ಇವರೆಲ್ಲರೂ ಬೆಳೆ ಬಂದಾಗ ಬೆಂಗಳೂರು ಅಥವಾ ಚಿತ್ರದುರ್ಗಕ್ಕೆ ಮಾರಲು ಹೋಗುತ್ತಿದ್ದರು. ಹುಳಿಯಾರು ಎಪಿಎಂಸಿಯಲ್ಲೇ ಹರಾಜು ಸ್ಟಾರ್ಟ್ ಮಾಡಿದರೆ ಸಾವಿರಾರು ಈರುಳ್ಳಿ ಬೆಳೆಗಾರರಿಗೆ ಅನುಕೂಲ ಆಗುತ್ತದೆ ಎಂದು ದಶಕಗಳಿಂದ ಮನವಿ ಮಾಡಿಕೊಂಡು ಬಂದೆ. ಆದರೆ ಎಪಿಎಂಸಿ ಸ್ಪಂಧಿಸಲಿಲ್ಲ. ಈಗ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಲಾಭ ಪಡೆದು ನಮ್ಮ ಅಂಗಡಿ ಬಳಿಯೇ ಹರಾಜು ಆರಂಭಿಸಿದ್ದೇನೆ. ರೈತರು, ಖರೀಧಿದಾರರು ಉತ್ಸಾಹದಿಂದ ಪಾಲ್ಗೊಂಡು ಸಂತೋಷದಿಂದ ಹಿಂದಿರುಗಿದ್ದಾರೆ. ಇನ್ಮುಂದೆ ಭಾನುವಾರ ಮತ್ತು ಬುಧವಾರ ಎರಡೂ ದಿನವೂ ಈರುಳ್ಳಿ ಹರಾಜು ನಡೆಸಲಾಗುವುದು.

ಹಾರೂನ್ ಷರೀಫ್, ಈರುಳ್ಳಿ ಹರಾಜು ರುವಾರಿ.

      ಹತ್ತಿಪ್ಪತ್ತು ವರ್ಷಗಳಿಂದ ಈರುಳ್ಳಿ ಬೆಳೆಯುತ್ತಿದ್ದೇನೆ. ಬೆಳೆ ಬಂದಾಗ 6 ಸಾವಿರ ರೂ. ಲಾರಿ ಬಾಡಿಗೆ ಕೊಟ್ಟು ಬೆಂಗಳೂರಿನ ಮಾರುಕಟ್ಟೆಗೆ ಹೋಗಿ ಈರುಳ್ಳಿ ಮಾರಿ ಬರುತ್ತಿದೆ. ಇನ್ನೂ ಕೆಲ ವರ್ತಕರು ನಮ್ಮ ಜಮೀನಿಗೆ ಬಂದು ಖರೀದಿಗೆ ಕೇಳುತ್ತಿದ್ದರಾದರೂ ಕನಿಷ್ಠ ಬೆಲೆ ಕೇಳುತ್ತಿದ್ದರು. ಹುಳಿಯಾರಿನಲ್ಲೇ ಹರಾಜು ಪ್ರಕ್ರಿಯೆ ಆರಂಭಿಸಿರುವುದರಿಂದ ಬೆಂಗಳೂರಿಗೆ ಹೋಗುವ ಸಮಯ ಮತ್ತು ಲಾರಿ ಬಾಡಿಗೆ ಉಳಿದಿದೆ.

-ರಂಗನಾಥಪ್ಪ, ಈರುಳ್ಳಿ ವ್ಯಾಪಾರಿ, ದಸೂಡಿ

      1984 ರಿಂದ ಈರುಳ್ಳಿ ಖರೀದಿ ಮಾಡುತ್ತಿದ್ದು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೂ ಹೋಗಿ ಈರುಳ್ಳಿ ಹರಾಜಿನಲ್ಲಿ ಭಾಗವಹಿಸಿದ್ದೇನೆ. ಈ ಭಾಗದ ಸ್ಥಳೀಯ ಈರುಳ್ಳಿಗೆ ಉತ್ತಮ ಮಾರುಕಟ್ಟೆಯಿದೆ. ಹಾಗಾಗಿ ಉತ್ತಮ ತಳಿ ಮತ್ತು ಗುಣಮಟ್ಟದ ಈರುಳ್ಳಿ ಖರೀದಿಸಲು ಇಲ್ಲಿಗೆ ಬಂದಿದ್ದೇನೆ.

-ನಾಸೀರ್‍ಖಾನ್, ಈರುಳ್ಳಿ ಖರೀದಿದಾರ, ತಿಪಟೂರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link