ಶಿರಾ : ಸರ್ಕಾರಿ ಶಾಲೆಗೆ ಬಣ್ಣದ ಮೆರುಗು ನೀಡಿದ ಕ್ಷೇತ್ರ ಕ್ಷಮತೆ ತಂಡ

 ಬರಗೂರು : 

      ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಮನೋಭಾವನೆಯಿಂದ ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತಗೊಳಿಸಿದ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಇಲ್ಲೊಂದು ಅಚ್ಚರಿ ಸಂಗತಿ ಎಂದರೆ ಸರ್ಕಾರಿ ಪ್ರೌಢಶಾಲೆಗೆ ಸುಣ್ಣ, ಬಣ್ಣಗಳೊಂದಿಗೆ ಜನಪದ ಸೊಗಡಿನ ಚಿತ್ತಾರಗಳ ಸುಂದರ ರೂಪ ನೀಡಿ, ಮಾದರಿ ಶಾಲೆಯಾಗಿ ಮಾರ್ಪಡಿಸಿದ ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ದೊಡ್ಡಬಾಣಗೆರೆ ಗ್ರಾಮದ ಕ್ಷೇತ್ರ ಕ್ಷಮತೆ ತಂಡದ ಹಳೆ ವಿದ್ಯಾರ್ಥಿ ಯುವಕರ ಕಾರ್ಯವೈಖರಿಯನ್ನು ಮೆಚ್ಚಲೆ ಬೇಕಾಗಿದೆ.

      ಶಿರಾ ತಾಲ್ಲೂಕಿನ ಆಂಧ್ರ ಗಡಿ ಭಾಗದ ದೊಡ್ಡಬಾಣಗೆರೆ ಸರ್ಕಾರಿ ಪ್ರೌಢಶಾಲೆ ಆಂಧ್ರ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಹೆಸರಾಗಿದೆ. ಸರ್ಕಾರಿ ಶಾಲೆಯೂ ಪ್ರತಿಷ್ಠಿತ ಖಾಸಗಿ ಶಾಲೆಗಳ ರೀತಿ ಮಾದರಿ ಶಿಕ್ಷಣ ನೀಡುತ್ತ್ತವೆ ಎಂಬುದಕ್ಕೆ ಸತತವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಿಸಿ ಕೊಂಡು ಬಂದಿರುವುದು ಶಿಕ್ಷಣದ ಗುಣ ಮಟ್ಟವನ್ನು ಸಾಕ್ಷೀಕರಿಸುತ್ತದೆ.

      ನಾನು ಓದಿದ ಶಾಲೆಗೆ ನನ್ನದೊಂದು ಸೇವೆ :

     ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹಾಗೂ ಡಾ.ತೇಜಸ್ವಿನಿ ರಾಜೇಶ್‍ಗೌಡ ಸಹಭಾಗಿತ್ವದಲ್ಲಿ ಜನಸೇವೆಗೆ ಸಿದ್ದವಾಗಿರುವ ಕ್ಷೇತ್ರ ಕ್ಷಮತೆ ತಂಡದ ಬಹುತೇಕ ಯುವಕರು ದೊಡ್ಡಬಾಣಗೆರೆ ಸರ್ಕಾರಿ ಶಾಲೆಯಲ್ಲಿ ಕಲಿತು ಉತ್ತಮ ಸ್ಥಾನಮಾನದಲ್ಲಿದ್ದಾರೆ. ಇಂತಹ ಶಾಲೆಗೆ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಶಾಲೆಗೆ ಜನಪದ ಪರಂಪರೆ, ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸುವ ದೇಶ ಪ್ರೇಮಿಗಳ ಚಿತ್ತಾರ, ತಂತ್ರಜ್ಞಾನ ಕ್ಷೇತ್ರದ ಮಾಹಿತಿ, ಪರಿಸರ ಕಾಳಜಿ ಮಹತ್ವ ಸೇರಿದಂತೆ ಅತ್ಯಾಕರ್ಷಕ ಬಣ್ಣದ ಚಿತ್ತಾರ ಶಾಲೆಗೆ ಹೊದಿಸಿದ್ದಾರೆ. ಇದು ಶಾಲೆಯ ಶೈಕ್ಷಣಿಕ ಮೆರುಗಿಗೆ ಕಳಸವಿಟ್ಟಂತಾಗಿದೆ. 3.20 ಲಕ್ಷ ರೂಪಾಯಿ ವೆಚ್ಚದಲ್ಲಿ 14 ಕೊಠಡಿಗಳಿಗೆ ನುರಿತ ಕಲಾವಿದರು, ಸ್ವಯಂ ಆಸಕ್ತಿಯುಳ್ಳ ಯುವಕರ ತಂಡ ಎರಡು ದಿನಗಳಲ್ಲಿ ಬಣ್ಣದ ಚಿತ್ತಾರ ಮೂಡಿಸಿ, ಮಾದರಿ ಸರ್ಕಾರಿ ಶಾಲೆ ಮಾಡಿದ ಕ್ಷೇತ್ರ ಕ್ಷಮತೆ ತಂಡದ ಕಾರ್ಯ ವೈಖರಿಯು ಜನ ಮೆಚ್ಚುಗೆ ಗಳಿಸಿದೆ.

      ಸೇವೆ ಸಲ್ಲಿಸುವ ದೃಷ್ಟಿ ಹೊಂದಿರುವ ಯುವಕ ತಂಡದೊಂದಿಗೆ ಕ್ಷೇತ್ರ ಕ್ಷಮತೆ ಧ್ಯೇಯ ವಾಕ್ಯದೊಂದಿಗೆ ಸ್ವಂತ ವೆಚ್ಚದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಮುನ್ನಡೆಯುತ್ತಿರುವ ಶಾಸಕ ರಾಜೇಶ್‍ಗೌಡರ ಕಾರ್ಯದಕ್ಷತೆ ಇತರರಿಗೆ ಮಾದರಿ. ಸಮಾಜಕ್ಕೆ ಭವಿಷ್ಯದ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಸರ್ಕಾರಿ ಶಾಲೆಗಳು ಭವ್ಯವಾಗಿದ್ದರೆ ಮಕ್ಕಳ ಭವಿಷ್ಯ ಸುಂದರವಾಗಿ ರೂಪುಗೊಳ್ಳಲಿದೆ.

-ವೈ.ಶಾಂತಪ್ಪ, ಮುಖ್ಯ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ದೊಡ್ಡಬಾಣಗೆರೆ.

      ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಲಭ್ಯವಾಗಬೇಕೆಂಬ ಉದ್ದೇಶದೊಂದಿಗೆ ಕ್ಷೇತ್ರ ಕ್ಷಮತೆ ಅಭಿಯಾನ ಪ್ರಾರಂಭಿಸಿದ್ದೇವೆ. ಗುಣಮಟ್ಟದ ಶಿಕ್ಷಣ ನೀಡುವಂತ ಸರ್ಕಾರಿ ಶಾಲೆಗಳು ವೈಭವಯುತವಾಗಿರಬೇಕೆಂಬ ಸದುದ್ದೇಶದೊಂದಿಗೆ ಈ ಶಾಲೆಗೆ ಸುಂದರ ರೂಪ ನೀಡಿದ್ದೇವೆ. ಶಿರಾ ತಾಲ್ಲೂಕಿನಲ್ಲಿ ಮತ್ತಷ್ಟು ಶಾಲೆಗಳನ್ನು ಇದೇ ಮಾದರಿ ಮಾಡುವ ಗುರಿ ಹೊಂದಲಾಗಿದೆ. ಸೇವಾ ಮನೋಭಾವದಿಂದ ಸಮಾಜ ಮುಖಿ ಕಾರ್ಯಗಳಲ್ಲಿ ಪಾಲ್ಗೊಂಡು ಕೆಲಸ ಮಾಡುತ್ತಿರುವ ಯುವಕರು ಸಮಾಜವನ್ನು ಉತ್ತಮ ಮಾರ್ಗದತ್ತ ಮುನ್ನಡೆಸುವ ಸಾರ್ಮಥ್ಯ ಹೊಂದಿರುತ್ತಾರೆ.

-ಡಾ.ಸಿ.ಎಂ.ರಾಜೇಶ್‍ಗೌಡ, ಶಾಸಕರು, ಶಿರಾ ಕ್ಷೇತ್ರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link