ಶಿರಾ :

ಕೋವಿಡ್ ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯವಾಗಬೇಕು. ಆದರೆ ಶಿರಾ ಕ್ಷೇತ್ರದಲ್ಲಿ ಲಸಿಕೆ ನೀಡುವ ಸಂಬಂಧ ವ್ಯಾಪಕ ತಾರತಮ್ಯಗಳಾಗುತ್ತಿವೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆರೋಪಿಸಿದ್ದಾರೆ.
ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನ ಲಸಿಕೆ ನೀಡುವ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ ಲಸಿಕೆ ನೀಡುವ ಸಂಬಂಧ ಕಿಡಿ ಕಾರಿದರು. 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನ ವಯೋಮಾನದವರಿಗೆ ಲಸಿಕೆಗಾಗಿ ಹೆಸರು ನೋಂದಾಯಿಸುವ ಸಂಬಂಧ ಹೇಳಿಕೆಗಾಗಿಯೇ ಹೊರತು ನಿಜ ಸ್ಥಿತಿಯಲ್ಲಿ ಇಲ್ಲ. ಶಿರಾ ಕ್ಷೇತ್ರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರಿಂದ ಲಸಿಕೆ ಹೆಚ್ಚು ನೀಡುವ ಕೆಲಸವೂ ಆಗಬೇಕು. ಲಸಿಕೆಯ ಕೊರತೆ ಸಾಕಷ್ಟಿದ್ದು ಮೊದಲು ಕೊರತೆ ನೀಗಿಸಿ ಎಂದರು.
ನಾನು ಕೆಲವು ಲಸಿಕೆ ನೀಡುವ ಕೇಂದ್ರಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಲಸಿಕೆ ನೀಡುವ ಸಂಬಂಧ ತಾರತಮ್ಯ ನಡೆಯುತ್ತಿವೆ. ಕೆಲವರು ಲಸಿಕೆ ಕೇಂದ್ರದಲ್ಲಿ ಕೂತು ತಮಗೆ ಬೇಕಾದವರಿಗೆ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಲಸಿಕೆ ನೀಡುವಾಗ ಪಕ್ಷ, ಜಾತಿ ನೋಡಬೇಡಿ. ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೊದಲು ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದ ಜಯಚಂದ್ರ ಅವರು, ಲಸಿಕೆ ನೀಡುವ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ತಹಸೀಲ್ದಾರ್ ಕೂಡಲೆ ಕ್ರಮ ಕೈಗೊಂಡು ತಾರತಮ್ಯವೆಸಗದೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








