ಕಳೆಪೆ ಕಾಮಗಾರಿಗೆ ಅಲಂಕಾರ : ರೈತ ಸಂಘ ಆರೋಪ

ತಿಪಟೂರು : 

     ತಾಲ್ಲೂಕಿನ ತಿಪಟೂರು-ತುರುವೇಕೆರೆ ರಸ್ತೆಯಲ್ಲಿ ಬರುವ ಕೈದಾಳ ಗೇಟ್‍ನಿಂದ ಚಿಗ್ಗಾವಿಯವರೆಗೆ ನಿರ್ಮಿಸಿರುವ ಡಾಂಬಾರು ರಸ್ತೆ ಸಂಪೂರ್ಣ ಕಳಪೆಯಿಂದ ಕೂಡಿದ್ದು ಕಿತ್ತು ಬರುತ್ತಿದೆ. ಈಗ ಕಿತ್ತು ಹೋದ ರಸ್ತೆಗೆ ಸಿಂಗಾರ ಮಾಡುತ್ತಿದ್ದಾರೆ ಎಂದು ತಿಪಟೂರು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಕಿಡಿಕಾರಿದ್ದಾರೆ.

      ಪತ್ರಿಕೆಯೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಬಹುತೇಕ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಸಾಕಷ್ಟು ಕಳಪೆಯಿಂದ ಕೂಡಿದ್ದರೂ ಸಹ ಜನಪ್ರತಿನಿಧಿಗಳು ಇದರ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ನೋಡಿದರೆ ಗುತ್ತಿಗೆದಾರರಿಗೂ, ಇಂಜಿನಿಯರ್‍ಗೂ ಮತ್ತು ಶಾಸಕರಿಗೂ ಏನೋ ಒಳ ಒಪ್ಪಂದವಾಗಿರುವಂತೆ ಕಾಣುತ್ತಿದೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕರು ಕುದ್ದು ಎಲ್ಲಾ ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸುತ್ತಿದ್ದರು, ಈಗ ಮತ್ತೆ ಆಯ್ಕೆಯಾಗಿರುವ ಶಾಸಕರು ಅವರೇನಾ ಎನ್ನುವಷ್ಟು ಮಟ್ಟಿಗೆ ಅನುಮಾನ ಪ್ರಾರಂಭವಾಗಿದ್ದು, ಸಾರ್ವಜನಿಕರ ಹಣದಲ್ಲಿ ನಿರ್ಮಿಸುತ್ತಿರುವ ರಸ್ತೆಗಳು ಜನರ ಸಂಚಾರಕ್ಕೂ ಮೊದಲೆ ಕಿತ್ತು ಬರುತ್ತಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ ಎಂದು ಆರೋಪಿಸಿದರು.

     ಕಿತ್ತು ಹೋಗಿರುವ ರಸ್ತೆಗೆ ಸೂಕ್ತವಾಗಿ ರಸ್ತೆ ಬದಿಗೆ ಮಣ್ಣನ್ನು ಹಾಕಿಲ್ಲ ಆದರೂ ಸಹ ರಸ್ತೆಯ ಅಂಚುಗಳಿಗೆ ರೇಡಿಯಂ ಮಿಶ್ರಿತ ವೈಟ್ ಟ್ಯಾಪಿಂಗ್ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೂಕ್ತವಾಗಿ ರಸ್ತೆಮಾಡದೆ, ಕೇವಲ ಬಿಲ್‍ಗಾಗಿ ಮಾತ್ರ ರಸ್ತೆಗಳನ್ನು ಮಾಡುತ್ತಿದ್ದಾರೆ. ನಂತರ ರಸ್ತೆ ಚೆನ್ನಾಗಿದೆ, ಹೊಸ ರಸ್ತೆ ಎಂದು ಗೊತ್ತಿಲ್ಲದ ವಾಹನ ಸವಾರರು ಅಪಘಾತ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುವ ಮೊದಲೆ ಸೂಕ್ತವಾದ ರಸ್ತೆಯನ್ನು ಮರು ನಿರ್ಮಿಸಲಿ, ಅಲ್ಲಿಯವರೆಗೆ ಬಿಲ್‍ಪಾಸ್ ಮಾಡಬಾರದೆಂದು ತಿಪಟೂರು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link