ತಿರುಚ್ಚಿ:

ಎಸ್ ದಾಮೋದರನ್
ದಕ್ಷಿಣ ಭಾರತದ ಅನೇಕ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಎಸ್. ದಾಮೋದರನ್ ಅವರ ಪ್ರಯತ್ನಕ್ಕೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರಿ ಸಂದಿದೆ.
59 ವರ್ಷದ ದಾಮೋದರನ್, 1987ರ ಹಿಂದೆ ಗ್ರಾಮಾಲಯವನ್ನು ಸ್ಥಾಪಿಸಿದ್ದು, ಅಂದಿನಿಂದಲೂ ಹಳ್ಳಿಗಳ ಜನರಿಗೆ ನೀರು ಪೂರೈಕೆ, ಒಳಚರಂಡಿ ಸೌಕರ್ಯ ಮತ್ತು ನೈರ್ಮಲ್ಯೀಕರಣ ಮತ್ತು ಪೌಷ್ಠಿಕಾಂಶವನ್ನು ಒದಗಿಸುತ್ತಿದ್ದಾರೆ. ಕೇವಲ ಮೂವರು ಸದಸ್ಯರಿಂದ ಆರಂಭವಾದ ಗ್ರಾಮಾಲಯದಲ್ಲಿ ಇದೀಗ 85 ಸದಸ್ಯರಿದ್ದಾರೆ.
M.Com ಮುಗಿಸಿದ ನಂತರ, ಆರ್ಥಿಕತೆ ಸುಧಾರಿಸುವ ದಾರಿಯಾಗಿ ಗ್ರಾಮಾಲಯವನ್ನು ಸ್ಥಾಪಿಸಿದೆ. ಆದರೆ, ಹಳ್ಳಿಗಳಲ್ಲಿ ಸರ್ವೇ ನಡೆಸಿದಾಗ ಕುಡಿಯುವ ನೀರಿನ ಸಮಸ್ಯೆ ಮತ್ತು ಬಯಲು ಶೌಚಾಲಯದಿಂದ ಆಗುವ ಕಾಯಿಲೆಗಳ ಸಮಸ್ಯೆ ಕಂಡುಬಂದಿತು. ಆದ್ದರಿಂದ ಕುಡಿಯುವ ನೀರು ಹಾಗೂ ಚರಂಡಿ ವ್ಯವಸ್ಥೆ ಸುಧಾರಿಸುವ ಕೆಲಸ ಆರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ.
2003ರಲ್ಲಿ ತಿರುಚಿಯಲ್ಲಿನ ತಾಂಡವಂಪಟ್ಟಿಯನ್ನು ಮೊದಲ ಬಯಲು ಶೌಚ ಮುಕ್ತ ಗ್ರಾಮವನ್ನಾಗಿ ಗ್ರಾಮಾಲಯ ಅಭಿವೃದ್ಧಿಪಡಿಸಿತು. ಇದು ದೇಶದಲ್ಲಿನ ಮೊದಲ ಬಯಲು ಶೌಚ ಮುಕ್ತ ಗ್ರಾಮವಾಗಿದೆ. ಇದೇ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಎಲ್ಲಾ ರಾಜ್ಯಗಳಲ್ಲಿ 600 ಹಳ್ಳಿಗಳು ಮತ್ತು 200 ಕೊಳಗೇರಿಗಳನ್ನು ಬಯಲು ಶೌಚ ಮುಕ್ತವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ.
ಸುಮಾರು ಆರು ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ, ಶಾಲೆಗಳಲ್ಲಿ 500 ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದೇವೆ. ಸುಮಾರು 2 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿರುವುದಾಗಿ ದಾಮೋದರನ್ ಹೇಳುತ್ತಾರೆ.
ಶಿಲ್ಪಿಗಳ ಕುಟುಂಬದಿಂದ ಬಂದಿರುವ ದಾಮೋದರ್, ಕುಟುಂಬದಲ್ಲಿ ಮೊದಲನೇ ಪದವೀಧರನಾಗಿದ್ದಾರೆ. 2021ರಲ್ಲಿ ಗ್ರಾಮಾಲಯ ತಿರುಚಿಯಲ್ಲಿ ಹರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜ್ ಸ್ಥಾಪಿಸಿದ್ದು, ಪೌರ ಕಾರ್ಮಿಕರಿಗೆ ಸ್ವಚ್ಛತೆ ಕುರಿತಂತೆ ತಿಳುವಳಿಕೆ ಮೂಡಿಸುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








