ಮೈಸೂರು :

ಸುದ್ದಿಗೋಷ್ಠಿಯ ಆರಂಭದಲ್ಲೇ ಕಣ್ಣೀರಿಟ್ಟ ಶಿವಣ್ಣಮೈಸೂರಿನಲ್ಲಿ ಜೇಮ್ಸ್ ಚಿತ್ರ ವೀಕ್ಷಣೆ ಮಾಡಿದ ಶಿವರಾಜ್ಕುಮಾರ್ ಬಳಿಕ ಸುದ್ದಿಗೋಷ್ಟಿ ನಡೆಸಿದ್ರು. ಸುದ್ದಿಗೋಷ್ಠಿ ಆರಂಭದಲ್ಲೇ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಪ್ಪು ಇಲ್ಲದ ಈ ದಿನ ಅವನ ಚಿತ್ರದ ಬಗ್ಗೆ ಮಾತಾಡೋಕೆ ನನ್ನ ಕೈಯಲ್ಲಿ ಆಗ್ತಿಲ್ಲ. ಬಹಳ ಬೇಜಾರ್ ಆಗ್ತಿದೆ. ಒಬ್ಬ ಅಭಿಮಾನಿಯಾಗಿ ನಾನು ಚಿತ್ರ ನೋಡಿದ್ದೇನೆ. ಪ್ರತಿ ಚಿತ್ರ ಬಿಡುಗಡೆಯಾದಾಗ್ಲು ಅಪ್ಪು ಕಾಲ್ ಮಾಡಿ ಹೇಳ್ತಿದ್ರು. ಇವತ್ತು ಅವನಿಲ್ಲದೆ ಅವನ ಚಿತ್ರ ನೋಡೋಕೆ ನನ್ನ ಕೈಯಲ್ಲಿ ಆಗ್ತಿಲ್ಲ ಎಂದ್ರು.
ಅವನ ಬಗ್ಗೆ ಮಾತಾಡೋದು ಹೆಮ್ಮೆ
ಅವನ ಅಣ್ಣನಾಗಿ ನನಗೆ ಕಷ್ಟ ಆಗ್ತಿದೆ. ಅವನ ನೆನಪು ಯಾವತ್ತು ನಮ್ಮಮ್ಮ ಬಿಟ್ಟು ಹೋಗಲ್ಲ. ನನ್ನ ತಮ್ಮ ಯಾವಾಗಲು ಆಗೇ ಇರರ್ಬೇಕು ಹೀಗೆ ಇರ್ಬೇಕು ಅಂತ ಯೋಚಿಸುತ್ತಿದ್ದವನು ನಾನು. ಅವನ ಪ್ರತಿ ಚಿತ್ರಕ್ಕೂ ನನಗೆ ಕರೆ ಮಾಡಿ ಹೇಗಿದೆ ಎಂದು ಕೇಳುತ್ತಿದ್ದ. ಅಪ್ಪು, ಅಪ್ಪಾಜಿ, ಅಮ್ಮನನ್ನು ನಾವು ಸ್ಪೂರ್ತಿಯಾಗಿ ತೆಗೆದುಕೊಂಡು ಬದುಕಬೇಕು. ಅಪ್ಪು ಎಲ್ಲರ ಮನಸ್ಸಿನಲ್ಲೂ ಇದ್ದಾರೆ. ಅವನು ತುಂಬಾ ಎತ್ತರಕ್ಕೆ ಬೆಳೆದುಬಿಟ್ಟಿದೆ. ಚಿಕ್ಕವಯಸ್ಸಿನಿಂದಲೇ ಅವನು ಎಲ್ಲರಿಗೂ ಹತ್ತಿರವಾಗಿಬಿಟ್ಟಿದ್ದ ಅವನನ್ನು ಪ್ರೀತಿಸದವರಲ್ಲ. ಚಿಕ್ಕವರಿಂದ ದೊಡ್ಡವರ ವರೆಗೆ ಅವನನ್ನು ಇಷ್ಟಪಡ್ತಿದ್ದಾರೆ.
ಅಪ್ಪು ಯಾವಾಗಲು ದೊಡ್ಡದಾಗಿಯೇ ಯೋಚಿಸೋದು
ಕನ್ನಡ ಸಿನಿಮಾಗಳನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯೋದು ಪುನೀತ್ ಕನಸಾಗಿತ್ತು. ಇವತ್ತು ವಿಶ್ವದಾದ್ಯಂತ ಅವನ ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದು ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅವನು ಯಾವಾಗಲು ದೊಡ್ಡದಾಗಿ ಯೋಚಿಸುತ್ತಿದ್ದ. ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡ್ಬೇಕು ಅನ್ನೋದು ಕೂಡ ಅವನ ಆಸೆಯಾಗಿತ್ತು. ಪ್ರತಿ ಚಿತ್ರದಲ್ಲೂ ಹೊಸತನ್ನು ಬಯಸುತ್ತಿದ್ದ ಅಪ್ಪು ಎಂದು ಶಿವಣ್ಣ ಹೇಳಿದ್ದಾರೆ.
ಶಕ್ತಿಧಾಮದಲ್ಲಿ ಶಿವಣ್ಣ ದಂಪತಿ
ಮತ್ತೊಂದೆಡೆ ಶಿವಣ್ಣ ದಂಪತಿ ಮೈಸೂರಿನಲ್ಲಿರುವ ಶಕ್ತಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿ ಧಾಮಕ್ಕೆ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿ ಸ್ವತಃ ಬೈಕ್ನಲ್ಲಿ ಬಂದಿದ್ದಾರೆ. ಕಳೆದ ಮೂರು ದಿನಗಳಿಂದಲೂ ಶಕ್ತಿ ಧಾಮದಲ್ಲಿರುವ ಶಿವಣ್ಣ ದಂಪತಿ, ಆಶ್ರಮದ ಮಕ್ಕಳಿಗೆ ಸಿಹಿ ಹಂಚಿ ಸಿನಿಮಾ ಬರಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿರುವ ಶಿವಣ್ಣ, ಅಪ್ಪು ಕೊನೆಯ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಮೈಸೂರಿನ ವುಡ್ ಲ್ಯಾಂಡ್, ಗಾಯತ್ರಿ, ಸಂಗಂ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ರು. ಇನ್ನು ದೊಡ್ಮನೆಯಿಂದ 300 ಕುಟುಂಬಗಳಿಗೆ ಸಸಿ, ಬಟ್ಟೆ ವಿತರಿಸಲಾಗಿದೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ನಟ ಶ್ರೀ ಮುರಳಿ, ನಟ ಯುವರಾಜ್ ಕುಮಾರ್ ಮತ್ತು ಡಾ. ರಾಜ್ ಕುಟುಂಬದಿಂದ 300 ಕುಟುಂಬಗಳಿಗೆ ಸಸಿ, ಬಟ್ಟೆ ವಿತರಿಸಿದ್ರು.








