52 ಜನರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ರದ್ದುಪಡಿಸಿ ಆದೇಶಿಸಿದ ರಾಜ್ಯ ಸರ್ಕಾರ
ಒಂದು ವಾರದ ಹಿಂದೆಯೇ ಸಿಎಂ ಕೈ ಸೇರಿದ್ದ ಪಟ್ಟಿ
ಬೆಂಗಳೂರು : ರಾಜ್ಯ ಸರ್ಕಾರ 52 ಜನರ ನಿಗಮ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನವನ್ನು ರದ್ದುಪಡಿಸಿ ಹಿಂಪಡೆಯುವುದಾಗಿ ಸಿಎಂ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ ಟಿಪ್ಪಣಿಯಲ್ಲಿ ಮಾಹಿತಿ ನೀಡಿದ್ದು, ಮುಖ್ಯಮಂತ್ರಿಗಳ ಆದೇಶದ ಅನುಸಾರ, ರಾಜ್ಯ ಮಟ್ಟದ ನಿಗಮ-ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರ, ಉಪಾಧ್ಯಕ್ಷರುಗಳ ನಾಮನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಿ, ಆಯಾ ಇಲಾಖೆಗಳ ವ್ಯಾಪ್ತಿಗೊಳಪಟ್ಟಂತೆ ಸರ್ಕಾರದ ಆದೇಶವನ್ನು ಮಂಗಳವಾರ ಹೊರಡಿಸುವಂತೆ ಆದೇಶಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆದಿದ್ದವರು ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುಂತೆ ಅಧಿಕಾರ ಕಳೆದುಕೊಳ್ಳಬೇಕಿದೆ.
ನಿಗಮ ಮಂಡಳಿಯಿಂದ ನಿರ್ಗಮನವಾಗುತ್ತಿರುವ ಪಟ್ಟಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಬಣದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪರಾಜಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತ ಮುಖಂಡರಿಗೆ ಯಡಿಯೂರಪ್ಪ ಕಾಲದಲ್ಲಿ ನಿಗಮ- ಮಂಡಳಿ ಸ್ಥಾನ ನೀಡಲಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಅವರು ಇದನ್ನು ರದ್ದುಪಡಿಸಿ ಹೊಸ ನೇಮಕಾತಿ ಮಾಡಲು ಮುಂದಾಗಿರುವುದು ಬಿಎಸ್ ವೈ ಬಣದ ಕಣ್ಣು ಕೆಂಪಾಗಿಸಿದೆ.
ಶಾಸಕರ ನಿಗಮ ಮಂಡಳಿ ಸ್ಥಾನಕ್ಕಿಲ್ಲ ಬದಲಾವಣೆ :
ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಬಹುತೇಕ ಶಾಸಕರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಮಾಡಲಾಗಿದೆ. ಈಗ ವಿಧಾನಸಭೆ ಚುನಾವಣೆ ಹತ್ತಿರದಲ್ಲಿ ಇದೆ. ಈ ಸಮಯದಲ್ಲಿ ಶಾಸಕರಿಗೆ ಅಧ್ಯಕ್ಷ ಹುದ್ದೆಯಿಂದ ಕೈ ಬಿಟ್ಟರೇ, ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸಂಪುಟ ವಿಸ್ತರಣೆಗೆ ಕಾದವರಿಗೆ ನಿರಾಸೆ ಉಂಟಾಗಿದೆ. ಅತ್ತ ಸಂಪುಟ ವಿಸ್ತರಣೆಯೂ ಆಗದೆ, ಇತ್ತ ಅಧ್ಯಕ್ಷ ಸ್ಥಾನ ಕಳೆದುಕೊಂಡರೆ ಪಕ್ಷದಲ್ಲಿ ಅಸಮಾಧಾನ ತೀವ್ರ ಆಗಬಹುದು. ಹಾಗಾಗಿ ಚುನಾವಣೆ ಸಮಯದಲ್ಲಿ ಗೊಂದಲಗಳು ಇಲ್ಲದೆ, ನಿರ್ಧಾರ ಕೈಗೊಂಡಿರುವ ಪಕ್ಷ ಶಾಸಕರನ್ನು ಅಧ್ಯಕ್ಷ ಸ್ಥಾನದಿಂದ ರದ್ದು ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಒಂದು ವಾರದ ಹಿಂದೆ ಸಿಎಂ ಕೈ ಸೇರಿದ್ದ ಪಟ್ಟಿ :
ಬಿಜೆಪಿಯ ಹಿರಿಯ ಸಚಿವ ಆರ್. ಅಶೋಕ್, ಮಾಜಿ ಸಚಿವ ಲಕ್ಷ್ಮಣ ಸವದಿ, ಹಾಗೂ ಬಿಜೆಪಿಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಒಳಗೊಂಡ ಮೂವರ ಸಮಿತಿಯನ್ನು ನಿಗಮ ಮಂಡಳಿ ಆಯ್ಕೆ ಪ್ರಕ್ರಿಯೆಗೆ ರಚಿಸಲಾಗಿತ್ತು. ಕಳೆದ ವಾರವೇ ಸಿಎಂ ಬೊಮ್ಮಾಯಿಗೆ ಪಟ್ಟಿ ಸಲ್ಲಿಸಿತ್ತಾದರೂ, ಸಿಎಂ ಬೊಮ್ಮಾಯಿ ನಿನ್ನೆ ಅಂತಿಮವಾಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಪ್ರಮುಖ ಅಂಶಗಳು :
- ನಿಗಮ ಮಂಡಳಿಯ 52 ಜನರನ್ನು ಕೈ ಬಿಟ್ಟ ಸಮಿತಿ.
- ಒಂದು ವಾರದ ಹಿಂದೆಯೇ ಸಿಎಂ ಕೈ ಸೇರಿದ್ದ ಪಟ್ಟಿ
- ಬದಲಾವಣೆಯ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚಿಸಲಾಗಿತ್ತು ಎಂದ ಸಿಎಂ
- ಹೊಸಬರಿಗೆ ಅವಕಾಶ
ನಿಗಮ ಮಂಡಳಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಕೋರ್ ಕಮಿಟಿಯಲ್ಲಿ ಈ ಹಿಂದೆ ಚರ್ಚೆ ಮಾಡಲಾಗಿತ್ತು. ಆರು ತಿಂಗಳ ಹಿಂದೆಯೇ ಅಧ್ಯಕ್ಷರ ಬದಲಾವಣೆಗೆ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ, ಒಂದೂವರೆ ವರ್ಷ ಪೂರೈಸಿರುವ ಅಧ್ಯಕ್ಷರಗಳು ರಾಜೀನಾಮೆ ನೀಡಲು ಸೂಚನೆ ನೀಡಿದ್ದೇವೆ. ಅಂತಹವರ ಪಟ್ಟಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ಅದರ ಅಧಿಕೃತ ಆದೇಶ ಹೊರಡಿಸುತ್ತೇವೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.
