2018ರ ಫಲಿತಾಂಶವನ್ನು ನೋಡಿದರೆ ಮಳವಳ್ಳಿಯಲ್ಲಿ ಕಾಂಗ್ರೆಸ್ ಜನತಾ ದಳಕ್ಕೆ ಸುಮಾರು 28,000 ಮತಗಳಲ್ಲಿ, ಮದ್ದೂರಿನಲ್ಲಿ ಸುಮಾರು 55,000, ಶ್ರೀರಂಗಪಟ್ಟಣದಲ್ಲಿ ಸುಮಾರು 43,000, ನಾಗಮಂಗಲದಲ್ಲಿ ಸುಮಾರು 47,000, ಕೆ.ಆರ್.ಪೇಟೆಯಲ್ಲಿ 17,000 ಮತಗಳ ಹತ್ತಿರದಲ್ಲಿ ಸೋಲು ಕಂಡಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿಯಿದೆ. ಆದರೆ ಕೆ.ಆರ್.ನಗರದಲ್ಲಿ ಕಳೆದ ಬಾರಿ ಕೇವಲ 1,800 ಮತಗಳಿಂದ ಸೋತಿದ್ದು,ಈ ಬಾರಿ ಅಲ್ಲಿ ಪಕ್ಷಕ್ಕೆ ಗೆಲುವಿನ ನಿರೀಕ್ಷೆಯಿದೆ.
“ರಮ್ಯಾ ಅವರು ನಮ್ಮ ಸ್ಟಾರ್ ಪ್ರಚಾರಕಿ. ಅವರು ಎಲ್ಲಿ ಪ್ರಚಾರ ಮಾಡಬೇಕೆಂಬುದನ್ನು ಪಕ್ಷದ ಘಟಕ ನಿರ್ಧರಿಸಲಿದೆ. ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರು ಪ್ರಮುಖ ಜಿಲ್ಲೆಗಳಲ್ಲಿ ಪ್ರಚಾರ ಮಾಡುವ ನಿರೀಕ್ಷೆಯಿದೆ,’’ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ
ಜನತಾ ಪಕ್ಷ ಹಾಗೂ ಜೆಡಿಎಸ್ ನಿಂದ ನಾಲ್ಕು ಬಾರಿ ಮಳವಳ್ಳಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದ ಮಾಜಿ ಸಚಿವ ಬಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಮದ್ದೂರಿನಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾರೆ. ಕೆಆರ್ ಪೇಟೆ ಮತ್ತು ಮೇಲುಕೋಟೆಯಲ್ಲಿ ಸಹ ಉತ್ತಮ ಫಲಿತಾಂಶ ಸಿಗಬಹುದು ಎಂದಿದ್ದಾರೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಗೆ ಕಡಿಮೆ ಸೀಟು ಬರುವ ಸಾಧ್ಯತೆ ಹೆಚ್ಚಾಗಿದೆ. ರಮ್ಯಾ ಮಂಡ್ಯದಲ್ಲಿ ಪ್ರಚಾರ ನಡೆಸಿದರೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಳ್ಳೆಯದು ಎನ್ನುತ್ತಾರೆ.