ಶಿಮ್ಲಾ:
ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹಿಮಾಚಲ ಪ್ರದೇಶ ಹೈಕೋರ್ಟ್, ಅವರಿಗೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 21ರ ಒಳಗಾಗಿ ಉತ್ತರ ನೀಡಬೇಕು ಎಂದು ನ್ಯಾಯಮೂರ್ತಿ ಜೋತ್ಸ್ನಾ ರೆವಾಲ್ ಅವರು ನೋಟಿಸ್ ನೀಡುವ ವೇಳೆ ನಿರ್ದೇಶನ ನೀಡಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆ ತನ್ನ ನಾಮಪತ್ರವನ್ನು ಚುನಾವಣಾ ಅಧಿಕಾರಿ (ಮಂಡಿಯ ಜಿಲ್ಲಾಧಿಕಾರಿ) ಅನ್ಯಾಯವಾಗಿ ತಿರಸ್ಕರಿಸಿದ್ದರು ಎಂದು ಕಿನ್ನೂರು ನಿವಾಸಿ ಲಾಯಕ್ ರಾಮ್ ನೇಗಿ ಎಂಬವರು ದೂರು ಸಲ್ಲಿಸಿದ್ದರು. ಅಲ್ಲದೆ ಜಿಲ್ಲಾಧಿಕಾರಿಯವರನ್ನೂ ಪಕ್ಷಗಾರರನ್ನಾಗಿ ಮಾಡಿದ್ದರು.
ಅರಣ್ಯ ಇಲಾಖೆಯ ಮಾಜಿ ಅಧಿಕಾರಿಯಾಗಿರುವ ನೇಗಿ, ಮೇ 14ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮೇ 15ರಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಚುನಾವಣಾ ಅಧಿಕಾರಿ ಅದನ್ನು ಸ್ವೀಕರಿಸಿರಲಿಲ್ಲ ಎಂದು ನೇಗಿ ಆರೋಪಿದ್ದಾರೆ.
ಇದರ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್.. ಆಗಸ್ಟ್ 21 ರೊಳಗೆ ಉತ್ತರ ನೀಡುವಂತೆ ಕಂಗನಾ ರಣಾವತ್ ನೋಟಿಸ್ ಜಾರಿ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಂಗನಾ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,755 ಮತಗಳ ಅಂತರದಿಂದ ಗೆದ್ದು ಸಂಸದರಾಗಿದ್ದಾರೆ. ಇದೀಗ ಕಂಗನಾರ ಲೋಕಸಭೆ ಸದಸ್ಯತ್ವವನ್ನು ರದ್ದು ಮಾಡುವಂತೆ ಲಾಯಿಕ್ ರಾಮ್ ನೇಗಿ ಆಗ್ರಹಿಸಿದ್ದಾರೆ. ಮಾಜಿ ಅರಣ್ಯ ಇಲಾಖೆ ನೌಕರ ಆಗಿರುವ ಲಾಯಿಕ್ ರಾಮ್ ನೇಗಿ, ಸರ್ಕಾರಿ ಕೆಲಸಕ್ಕೆ ಗುಡ್ಬೈ ಹೇಳಿ ಚುನಾವಣೆಗೆ ನಿಂತಿದ್ದರು.
ವಿದ್ಯುತ್, ದೂರವಾಣಿ ಹಾಗೂ ನೀರಾವರಿ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು. ಅದಕ್ಕೆ ಒಂದು ದಿನದ ಅವಕಾಶ ನೀಡಲಾಗಿತ್ತು. ಆದರೆ ದಾಖಲೆಗಳನ್ನು ಸಲ್ಲಿಸುವಾಗ ಅದನ್ನು ಸ್ವೀಕರಿಸಲು ಚುನಾವಣಾಧಿಕಾರಿ ನಿರಾಕರಿಸಿ, ನಾಮಪತ್ರವನ್ನು ತಿರಸ್ಕರಿಸಿದ್ದರು ಎಂದು ನೇಗಿ ದೂರಿನಲ್ಲಿ ಹೇಳಿದ್ದರು. ಒಂದು ವೇಳೆ ತಿರಸ್ಕೃತವಾಗದಿದ್ದರೆ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸುತ್ತಿದ್ದೆ. ಹೀಗಾಗಿ ಮಂಡಿ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಬೇಕು’ ಎಂದು ಅವರು ಕೋರಿದ್ದರು.