ಟೊರೊಂಟೊ:
ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಅಥವಾ ಕೆನಡಿಯನ್ನರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಯಾವುದೇ ರಾಜತಾಂತ್ರಿಕರನ್ನು ಸರ್ಕಾರ ಸಹಿಸುವುದಿಲ್ಲ ಹೇಳಿರುವ ಕೆನಡಾ ಹೇಳಿದ್ದು, ಭಾರತವನ್ನು ರಷ್ಯಾಗೆ ಹೋಲಿಕೆ ಮಾಡಿದೆ.
ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನರ್ ಸಿಖ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾದ ಬಳಿಕ ಭಾರತೀಯ ರಾಜತಾಂತ್ರಿಕರಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಅವರು ಹೇಳಿದ್ದಾರೆ.ಅಲ್ಲದೆ, ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಅಥವಾ ಕೆನಡಿಯನ್ನರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಯಾವುದೇ ರಾಜತಾಂತ್ರಿಕರನ್ನು ಸರ್ಕಾರ ಸಹಿಸುವುದಿಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ರಾಜತಾಂತ್ರಿಕರು ಕೆನಡಾದಲ್ಲಿ ನರಹತ್ಯೆಗಳು, ಕೊಲೆ ಬೆದರಿಕೆಗಳು ಮತ್ತು ಬೆದರಿಕೆಗಳಿಗೆ ಸಂಬಂಧಿಸಿದಂತೆ ಕೆನಡಾದ ರಾಷ್ಟ್ರೀಯ ಪೊಲೀಸ್ ಪಡೆ ಗಮನಿಸುತ್ತಿದೆ. ನಮ್ಮ ಇತಿಹಾಸದಲ್ಲಿ ನಾವು ಇಂತಹದ್ದನ್ನು ನೋಡಿಲ್ಲ. ಕೆನಡಾದ ನೆಲದಲ್ಲಿ ಆ ಮಟ್ಟದ ಅಂತರಾಷ್ಟ್ರೀಯ ದಮನ ನಡೆಯಲು ನಾವು ಬಿಡುವುದಿಲ್ಲ. ನಾವು ಯುರೋಪಿನ ಬೇರೆಡೆ ನೋಡಿದ್ದೇವೆ, ಜರ್ಮನಿ ಮತ್ತು ಯುಕೆಯಲ್ಲಿ ರಷ್ಯಾ ಇಂತಹದ್ದನ್ನು ಮಾಡಿದೆ. ನಾವು ಈ ವಿಷಯದಲ್ಲಿ ದೃಢವಾಗಿ ನಿಲ್ಲುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಇತರ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಲಿ, ಅವರಿಗೆ ಈಗಾಗಲೇ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಒಟ್ಟಾವಾದಲ್ಲಿನ ಹೈಕಮಿಷನರ್ ಸೇರಿದಂತೆ ಆರು ಮಂದಿಯನ್ನು ಈಗಾಗಲೇ ಹೊರಹಾಕಲಾಗಿದೆ. ಇತರರು ಮುಖ್ಯವಾಗಿ ಟೊರೊಂಟೊ ಮತ್ತು ವ್ಯಾಂಕೋವರ್ನಿಂದ ಬಂದವರಿಗೆ ಸ್ಪಷ್ಟವಾಗಿ ಸೂಚನೆ ಕೊಡಲಾಗಿದೆ. ವಿಯೆನ್ನಾ ಸಮಾವೇಶಕ್ಕೆ ವಿರುದ್ಧವಾಗಿರುವ ಯಾವುದೇ ರಾಜತಾಂತ್ರಿಕರನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ.
ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ನನ್ನು ಕೆನಡಾದ ಸರ್ರೆಯಲ್ಲಿನ ಸಿಖ್ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಿಜ್ಜಾರ್ನನ್ನು 2020ರಲ್ಲಿ ಭಾರತ ಸರ್ಕಾರ ‘ಉಗ್ರ’ ಎಂದು ಘೋಷಿಸಿತ್ತು. ಹತ್ಯೆ ನಡೆದ ವೇಳೆ ಸ್ವತಂತ್ರ ಸಿಖ್ ದೇಶಕ್ಕಾಗಿ ನಿಜ್ಜಾರ್ ಜನಮತಗಣನೆಗೆ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆಗೆ ಕಿಡಿ ಹೊತ್ತಿಸಿತ್ತು. ಇಂದಿರಾ ಗಾಂಧಿ ಅವರನ್ನು ಇಬ್ಬರು ಸಿಖ್ ಅಂಗರಕ್ಷಕರು ಕೊಂದ ಚಿತ್ರದೊಂದಿಗೆ ಒಂಟಾರಿಯೋದಲ್ಲಿ ಸಿಖ್ಖರು ಮೆರವಣಿಗೆ ನಡೆಸಲು ಅವಕಾಶ ನೀಡಿದ್ದ ಕೆನಡಾ ಸರ್ಕಾರದ ವಿರುದ್ಧ ಭಾರತ ಹರಿಹಾಯ್ದಿತ್ತು.
ಭಾರತದ ಜತೆಗಿನ ವ್ಯಾಪಾರ ಒಪ್ಪಂದಗಳಿಗೆ ಕೆನಡಾ ಸೆ 1ರಂದು ಅನಿರೀಕ್ಷಿತ ತಡೆ ನೀಡಿತ್ತು. ಅದಕ್ಕೆ ಅದು ಸೂಕ್ತ ಕಾರಣ ನೀಡಲಿಲ್ಲ. ನವದೆಹಲಿಯಲ್ಲಿ ಸೆ 9- 10ರಂದು ಜಿ20 ಶೃಂಗಸಭೆ ನಡೆದಾಗ ಈ ಬಿಕ್ಕಟ್ಟು ಮತ್ತಷ್ಟು ಜಟಿಲಗೊಂಡಿತ್ತು.
ಪ್ರಧಾನಿ ಮೋದಿ ಅನೇಕ ಜಾಗತಿಕ ನಾಯಕರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಆದರೆ ಟ್ರುಡೋರನ್ನು ಕಡೆಗಣಿಸಿದ್ದರು. ಟ್ರುಡೋ ಅವರ ವಿಮಾನ ಸಮಸ್ಯೆಯಾಗಿ ಅವರು ಭಾರತದಲ್ಲಿಯೇ ಉಳಿದುಕೊಳ್ಳುವ ಅವಮಾನಕ್ಕೂ ಒಳಗಾದರು. ಸೆ 19ರಂದು ಭಾರತದ ರಾಯತಾಂತ್ರಿಕರೊಬ್ಬರನ್ನು ಕೆನಡಾ ಉಚ್ಚಾಟನೆ ಮಾಡಿತ್ತು. ಅದಕ್ಕೆ ಭಾರತವೂ ಪ್ರತಿ ಉಚ್ಚಾಟನೆ ಕ್ರಮ ಜರುಗಿಸಿತ್ತು. ಕೆನಡಾದೊಂದಿಗಿನ ವೀಸಾ ಚಟುವಟಿಕೆಗಳನ್ನು ಸಹ ಭಾರತ ಅಮಾನತುಗೊಳಿಸಿತ್ತು. ಭಾರತದಲ್ಲಿನ ರಾಜತಾಂತ್ರಿಕರು ಹಾಗೂ ಅವರ ಕುಟುಂಬಗಳಿಗೆ ನೀಡಿರುವ ಭದ್ರತೆಯನ್ನು ಹಾಗೂ ಸವಲತ್ತುಗಳನ್ನು ಹಿಂದಕ್ಕೆ ಪಡೆಯುವುದಾಗಿ ಭಾರತ ಹೇಳಿಕೆ ನೀಡಿದ ಬಳಿಕ ಅಕ್ಟೋಬರ್ 19ರಂದು ತನ್ನ 44 ರಾಜತಾಂತ್ರಿಕರನ್ನು ಕೆನಡಾ ಹಿಂದಕ್ಕೆ ಕರೆಸಿಕೊಂಡಿತ್ತು. ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕೆನಡಾ ಆರೋಪಿಸಿತ್ತು.