ನವದೆಹಲಿ:
ಈ ಬಾರಿ ದೆಹಲಿ ವಿಧಾನಸಭೆ ಚುನಾವಣೆ ಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಬಿಜೆಪಿ ಬರೋಬ್ಬರಿ 27ವರ್ಷಗಳ ನಂತರ ಕಮ್ ಬ್ಯಾಕ್ ಮಾಡಿದೆ. ಫಲಿತಂಶ ಪ್ರಕಟಗೊಂಡು 10ದಿನ ಕಳೆದರೂ ಮುಂದಿನ ಸಿಎಂ ಯಾರೆಂಬ ಸಸ್ಪೆನ್ಸ್ ಇನ್ನೂ ಹಾಗೆಯೇ ಇದೆ. ನಾಳೆ ರಾಮ್ಲೀಲಾ ಮೈದಾನದಲ್ಲಿ ನೂತನ ಸಿಎಂ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆದರೆ ಸಿಎಂ ಯಾರೆಂಬ ಕುತೂಹಲ ಇನ್ನೂ ಹಾಗೆಯೇ ಉಳಿದಿದೆ. ಇದೀಗ ಅಧಿಕೃತ ಮೂಲಗಳ ಪ್ರಕಾರ ಸಿಎಂ ಯಾರೆಂಬುದು ಇಂದು ನಿರ್ಧಾರವಾಗಲಿದೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ಸಿಎಂ ಬಗ್ಗೆ ನಿರ್ಧಾರವಾಗಲಿದೆ.
ಮುಖ್ಯಮಂತ್ರಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಬಿಜೆಪಿ ನಾಯಕರಾದ ತರುಣ್ ಚುಗ್ ಮತ್ತು ವಿನೋದ್ ತಾವ್ಡೆ ಅವರ ನೇತೃತ್ವದಲ್ಲಿ ನಡೆಯುತ್ತಿದೆ. 27 ವರ್ಷಗಳ ನಂತರ ದೆಹಲಿಯಲ್ಲಿ ಪಕ್ಷ ಸರ್ಕಾರ ರಚಿಸುತ್ತಿರುವುದರಿಂದ ಈ ಸಮಾರಂಭವು ವಿಶೇಷವಾಗಿದೆ ಎಂದು ಬಿಜೆಪಿ ಸಂಸದ ಯೋಗೇಂದರ್ ಚಂದೋಲಿಯಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. “ದೆಹಲಿಯ ಜನರು ನರೇಂದ್ರ ಮೋದಿಗೆ ಜನಾದೇಶ ನೀಡಿದ್ದಾರೆ” ಎಂದು ಸಂಸದ ಚಂದೋಲಿಯಾ ತಿಳಿಸಿದರು.
ಈ ಉನ್ನತ ಮಟ್ಟದ ಕಾರ್ಯಕ್ರಮಕ್ಕಾಗಿ ಭದ್ರತಾ ವ್ಯವಸ್ಥೆಗಳಲ್ಲಿ ತುರ್ತು ಪ್ರತಿಕ್ರಿಯೆ ತಂಡಗಳು, ಸ್ವಾಟ್ ತಂಡಗಳು ಮತ್ತು ಪಿಸಿಆರ್ ವ್ಯಾನ್ಗಳ ಜೊತೆಗೆ 5,000 ಭದ್ರತಾ ಸಿಬ್ಬಂದಿಯ ನಿಯೋಜನೆ ಸೇರಿದೆ. ಅರೆಸೈನಿಕ ಪಡೆಗಳು ದಿನವಿಡೀ ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆ ನಡೆಸಲಿವೆ.
ಇನ್ನು ಮುಖ್ಯಮಂತ್ರಿ ರೇಸ್ನಲ್ಲಿ ಪ್ರಮುಖ ನಾಯಕರು ಮುಂಚೂಣಿಯಲ್ಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ಹೀನಾಯವಾಗಿ ಸೋಲಿಸಿದ ಪರ್ವೇಶ್ ವರ್ಮಾ, ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಮಹಿಳಾ ನಾಯಕಿ ರೇಖಾ ಗುಪ್ತಾ, ದೆಹಲಿ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಬ್ರಾಹ್ಮಣ ನಾಯಕ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಉಪಾಧ್ಯಾಯ, ವೈಶ್ಯ ಸಮುದಾಯದ ಪ್ರಬಲ ಮತ್ತು ಆರ್ಎಸ್ಎಸ್ ಪ್ರತಿನಿಧಿ ಜಿತೇಂದ್ರ ಮಹಾಜನ್ ಹೆಸರು ರೇಸ್ನಲ್ಲಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದ 48 ಬಿಜೆಪಿ ಶಾಸಕರ ಪೈಕಿ 15 ಹೆಸರುಗಳನ್ನು ಸಚಿವ ಸ್ಥಾನಗಳಿಗೆ ಶಾರ್ಟ್ಲಿಸ್ಟ್ ಮಾಡಲಾಗಿದೆ. ಅದರಲ್ಲಿ ಪ್ರಭಾವಿ ನಾಯಕರನ್ನು ಮುಖ್ಯಮಂತ್ರಿ, ರಾಜ್ಯ ಕ್ಯಾಬಿನೆಟ್ ಸಚಿವರು ಮತ್ತು ಸ್ಪೀಕರ್ನಂತಹ ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
