ನಿವೃತ್ತಿಯ ಸುಳಿವು ಕೊಟ್ರಾ ಸ್ಟಾರ್‌ ನಟ?

ಚೆನ್ನೈ:

     ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಅಜಿತ್ ಕುಮಾರ್‌ ಅವರಿಗೆ ಇತ್ತೀಚೆಗೆ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಈ ನಡುವೆ, ಅವರು ಚಿತ್ರರಂಗದಿಂದ ಅನಿರೀಕ್ಷಿತವಾಗಿ ನಿವೃತ್ತಿಯ  ಸಾಧ್ಯತೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇಂಡಿಯಾ ಟುಡೇ ಜೊತೆಗಿನ ಸಂದರ್ಶನದಲ್ಲಿ, ಜೀವನದ ಅನಿಶ್ಚಿತತೆ ಮತ್ತು ಅದನ್ನು ಪೂರ್ಣವಾಗಿ ಜೀವಿಸುವ ತಮ್ಮ ಆಸೆಯ ಬಗ್ಗೆ ಅವರು ತೆರೆದಿಟ್ಟಿದ್ದಾರೆ.

    ನಿವೃತ್ತಿಯ ಬಗ್ಗೆ ಪ್ರಶ್ನಿಸಿದಾಗ, ಅಜಿತ್ ಆಶ್ಚರ್ಯಕರ ಆದರೆ ಚಿಂತನಶೀಲ ಉತ್ತರ ನೀಡಿದರು. “ಏನಾಗುತ್ತದೆ ಎಂದು ಯಾರಿಗೆ ಗೊತ್ತು? ನಿವೃತ್ತಿಯನ್ನು ಯೋಜಿಸುವುದು ನನ್ನಿಂದಾಗಲ್ಲ, ಬದಲಾಗಿ ನಾನು ನಿವೃತ್ತಿಗೆ ಒತ್ತಾಯಕ್ಕೊಳಗಾಗಬಹುದು. ಯಾವುದನ್ನೂ ಗ್ಯಾರಂಟಿಯಾಗಿ ತೆಗೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ಜನರು ಜೀವನದ ಬಗ್ಗೆ ದೂರುತ್ತಾರೆ. ಆದರೆ ಬೆಳಗ್ಗೆ ಎದ್ದು ಜೀವಂತವಾಗಿರುವುದೇ ಒಂದು ಆಶೀರ್ವಾದ. ಇದು ತಾತ್ವಿಕ ಮಾತಲ್ಲ. ನಾನು ಶಸ್ತ್ರಚಿಕಿತ್ಸೆಗಳು, ಗಾಯಗಳನ್ನು ಎದುರಿಸಿದ್ದೇನೆ. ನನ್ನ ಸ್ನೇಹಿತರು, ಕುಟುಂಬದವರಲ್ಲಿ ಕ್ಯಾನ್ಸರ್‌ನಿಂದ ಬದುಕುಳಿದವರಿದ್ದಾರೆ. ಜೀವನದ ಮೌಲ್ಯ, ಕೇವಲ ಜೀವಂತವಾಗಿರುವುದರ ಮಹತ್ವ ನಮಗೆ ಗೊತ್ತು. ನಾನು ಜೀವನದ ಪ್ರತಿ ಕ್ಷಣವನ್ನು ಬಳಸಿಕೊಳ್ಳಲು ಬಯಸುತ್ತೇನೆ, ಪೂರ್ಣವಾಗಿ ಜೀವಿಸಲು ಇಷ್ಟಪಡುತ್ತೇನೆ,” ಎಂದು ಅವರು ಹೇಳಿದರು.ತಮ್ಮ ವಿನಯಶೀಲತೆ ಮತ್ತು ಸರಳ ಸ್ವಭಾವಕ್ಕೆ ಹೆಸರಾದ ಅಜಿತ್‌ ಈ ಸಂದರ್ಶನದಲ್ಲಿ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 

    1990ರಲ್ಲಿ ‘ಎನ್ ವೀಡು ಎನ್ ಕಣವರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅಜಿತ್, ‘ವೀರಮ್’, ‘ಬಿಲ್ಲಾ’, ‘ಮಂಕಾಠ’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದ ಬಳಿಕ, ಏಪ್ರಿಲ್ 28ರಂದು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನವಾಯಿತು. ಈ ಸಮಾರಂಭದಲ್ಲಿ ಅವರ ಪತ್ನಿ ಶಾಲಿನಿ ಮತ್ತು ಮಕ್ಕಳು ಉಪಸ್ಥಿತರಿದ್ದು, ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿತ್ತು.

   ತಮ್ಮ ಪಯಣವನ್ನು ಸ್ಮರಿಸಿದ ಅಜಿತ್, ನಟನೆ ತಮ್ಮ ಯೋಜನೆಯ ಭಾಗವಾಗಿರಲಿಲ್ಲ ಎಂದು ಹೇಳಿದರು. “ನಟನೆ ಎಂದಿಗೂ ನನ್ನ ಗುರಿಯಾಗಿರಲಿಲ್ಲ. ನಾನೊಬ್ಬ ಆಕಸ್ಮಿಕ ನಟ. ಶಾಲೆ ಮುಗಿದ ಬಳಿಕ, ಆರು ತಿಂಗಳ ಕಾಲ ಆಟೋ ತಯಾರಿಕಾ ಕಂಪನಿಯೊಂದರಲ್ಲಿ ಕೆಲಸ ಮಾಡಿದೆ. 18ನೇ ವಯಸ್ಸಿನಲ್ಲಿ ಮೋಟಾರ್‌ಸೈಕಲ್ ರೇಸಿಂಗ್ ಆರಂಭಿಸಿದೆ. ನಂತರ, ಗೊತ್ತಿಲ್ಲದಂತೆ ಪ್ರಿಂಟ್ ಜಾಹೀರಾತುಗಳು, ಟಿವಿ ಕಮರ್ಷಿಯಲ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡೆ” ಎಂದು ಅವರು ನೆನಪಿಸಿಕೊಂಡರು.

Recent Articles

spot_img

Related Stories

Share via
Copy link