ಮುಂಬೈ:
ಪದೇ ಪದೇ ಕರೆ ಮಾಡಿ ಮಹಾರಾಷ್ಟ್ರ ರಾಜ್ಯದ ಸಚಿವರಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ರಾಜ್ಯ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ. ಮಹಾರಾಷ್ಟ್ರದ ಪರಿಸರ ಸಚಿವೆ ಪಂಕಜಾ ಮುಂಡೆ ಅವರಿಗೆ ದೂರವಾಣಿ ಮೂಲಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪದವೀಧರನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬೀಡ್ ಜಿಲ್ಲೆಯ ನಿವಾಸಿ, 25 ವರ್ಷದ ಎಂಜಿನಿಯರಿಂಗ್ ಪದವೀಧರ ಅಮೋಲ್ ಛಗನ್ರಾವ್ ಕಾಳೆ ಎಂಬಾತನನ್ನು ಪುಣೆ ಬಳಿಯ ಭೋಸ್ರಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸರ ಸಚಿವೆ ಪಂಕಜಾ ಮುಂಡೆ ಅವರಿಗೆ ಎಂಜಿನಿಯರಿಂಗ್ ಪದವೀಧರನ ಅಮೋಲ್ ಛಗನ್ರಾವ್ ಕಾಳೆ ಪದೇ ಪದೇ ಫೋನ್ ಕರೆಗಳನ್ನು ಮಾಡುತ್ತಿದ್ದ. ಅಲ್ಲದೇ ಸಂದೇಶಗಳನ್ನು ಕಳುಹಿಸುತ್ತಿದ್ದ. ಇದರಿಂದ ತೊಂದರೆ ಅನುಭವಿಸಿದ ಸಚಿವರು ಬಿಜೆಪಿಯ ರಾಜ್ಯ ಸಾಮಾಜಿಕ ಮಾಧ್ಯಮ ಸಂಯೋಜಕ ಪ್ರಕಾಶ್ ಗಾಡೆ ಅವರಿಗೆ ಮಾಹಿತಿ ನೀಡಿದ್ದಾರೆ. ಪ್ರಕಾಶ್ ಗಾಡೆ ಅವರು ಬಿಜೆಪಿಯ ಮಹಾರಾಷ್ಟ್ರ ಕಚೇರಿಯ ಸಾಮಾಜಿಕ ಮಾಧ್ಯಮ ಸಂಯೋಜಕ ನಿಖಿಲ್ ಭಮ್ರೆ ಅವರಿಗೆ ಈ ವಿಷಯ ತಿಳಿಸಿದ್ದರು.
ಗಾಡೆ ಅವರ ಸಲಹೆಯ ಮೇರೆಗೆ ಭಮ್ರೆ ಮುಂಬೈ ನೋಡಲ್ ಸೈಬರ್ ಪೊಲೀಸರಿಗೆ ಔಪಚಾರಿಕವಾಗಿ ದೂರು ನೀಡಿದ್ದಾರೆ. ಬಳಿಕರಾಜ್ಯ ಪೊಲೀಸರ ಸೈಬರ್ ವಿಭಾಗ ಪ್ರಕರಣ ದಾಖಲಿಸಲಾಗಿದೆ. ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರಿನ ಅನಂತರ ಸ್ಥಳೀಯ ಪೊಲೀಸ್ ಠಾಣೆಯ ಸಹಾಯದಿಂದ ಕಾಳೆ ಇರುವ ಸ್ಥಳವನ್ನು ಪತ್ತೆ ಹಚ್ಚಿದರು. ಬಳಿಕ ಆತನನ್ನು ಪುಣೆ ಬಳಿಯ ಭೋಸ್ರಿಯಲ್ಲಿ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಕಾಳೆ ಸಚಿವರಿಗೆ ಕರೆಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಬಿಜೆಪಿ ನಾಯಕಿ ಪಂಕಜಾ ಮುಂಡೆ ಅವರ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಕಳೆದ ಕೆಲವು ದಿನಗಳಿಂದ ಆರೋಪಿ ಕಾಳೆ ಪದೇ ಪದೇ ಕರೆ ಮಾಡುತ್ತಿದ್ದ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಮಹಾರಾಷ್ಟ್ರ ಸೈಬರ್ನಲ್ಲಿ ದೂರು ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 78ರ ಅಡಿಯಲ್ಲಿ ಹಿಂಬಾಲಿಸುವುದು, 79ರ ಅಡಿಯಲ್ಲಿ ಮಹಿಳೆಯರ ನಮ್ರತೆಯನ್ನು ಅವಮಾನಿಸುವ ಉದ್ದೇಶವಿರುವ ಕೃತ್ಯಗಳು ಅಥವಾ ಪದಗಳ ಬಳಕೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕಾಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯ ಬಳಕೆದಾರರನ್ನು ಪತ್ತೆಹಚ್ಚಲಾಗಿದೆ.
ಬಿಎನ್ಎನ್ಎಸ್ ಕಾಯ್ದೆಯಡಿ ನೋಟಿಸ್ ನೀಡಿ ಆರೋಪಿಯನ್ನು ಮುಂಬೈಗೆ ಕರೆತರಲಾಗಿದ್ದು ಅಲ್ಲಿ ಆತನನ್ನು ಔಪಚಾರಿಕವಾಗಿ ಬಂಧಿಸಲಾಗಿದೆ. ಆತನ ಕೃತ್ಯಗಳ ಹಿಂದಿನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಆತನ ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
