ನವದೆಹಲಿ:
ಭಾರತದ ಆಪರೇಷನ್ ಸಿಂದೂರ್ ನಂತರ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಭಾರತದ ಸೇನಾ ನೆಲೆ ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪ್ರಯತ್ನಿಸಿತ್ತು. ಆದರೆ ಭಾರತ ತನ್ನ ಮೇಲಿನ ದಾಳಿಯನ್ನು ತಡೆ ಹಿಡಿದಿದೆ. ಪ್ರತಿದಾಳಿಯಲ್ಲಿ ಭಾರತ ಪಾಕಿಸ್ತಾನದ ಪ್ರಮುಖ 16 ನಗರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು. LoC ಬಳಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದೀಗ ಜಮ್ಮುವಿನ ಸಾಂಬಾ ಜಿಲ್ಲೆಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಂತರರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ತಿಳಿದು ಬಂದಿದೆ.
ಸಾಂಬಾ ಜಿಲ್ಲೆಯಲ್ಲಿ LOC ಬಳಿ ಗಡಿಯಿಂದ ಒಳಗೆ ನುಸುಳುತಿದ್ದ ಏಳು ಜೈಶ್ ಭಯೋತ್ಪಾದಕರನ್ನು ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ ಎಂದು ತಿಳಿದು ಬಂದಿದೆ. 0-12 ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಭದ್ರತಾ ಪಡೆ ತಿಳಿಸಿದೆ. ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲಿ ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ರಜ್ರ್ವಾನಿಯಿಂದ ಬಾರಾಮುಲ್ಲಾಗೆ ಹೋಗುತ್ತಿದ್ದ ವಾಹನವು ಮೊಹುರಾ ಬಳಿ ಗುಂಡಿನ ದಾಳಿಗೆ ತುತ್ತಾಗಿದೆ. ಘಟನೆಯಲ್ಲಿ ನರ್ಗಿಸ್ ಬೇಗಂ ಸಾವನ್ನಪ್ಪಿದ್ದಾರೆ. ರಾಜಿಕ್ ಅಹ್ಮದ್ ಖಾನ್ ಅವರ ಪತ್ನಿ ಹಫೀಜಾ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಜಿಎಂಸಿ ಬಾರಾಮುಲ್ಲಾಗೆ ಕರೆದೊಯ್ಯಲಾಗಿದೆ.
ಅಖ್ನೂರ್, ಸಾಂಬಾ, ಬಾರಾಮುಲ್ಲಾ, ಕುಪ್ವಾರಾ ಮತ್ತು ಇತರ ಹಲವಾರು ಸ್ಥಳಗಳಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ರಾಜಸ್ಥಾನದ ಕೆಲ ನಗರ ಹಾಗೂ ಜಮ್ಮುವಿನಲ್ಲಿ ಬ್ಲಾಕ್ಔಟ್ ಜಾರಿ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್ ಮತ್ತು ಮೂರು ಸೇನಾ ಮುಖ್ಯಸ್ಥರನ್ನು ಭೇಟಿಯಾದರು. ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ಇತ್ತೀಚೆಗೆ ನಡೆಸಿದ ಗಡಿಯಾಚೆಗಿನ ದಾಳಿಯ ನಂತರದ ಭದ್ರತಾ ಪರಿಸ್ಥಿತಿಯನ್ನು ನಿರ್ಣಯಿಸಲು ಈ ಸಭೆ ನಡೆದಿದೆ.
