ಬೆಂಗಳೂರು:
ಕಾಲ್ತುಳಿತ, ಬೆಂಕಿಯಂತಹ ತ್ವರಿತ ಸಮಸ್ಯೆಗಳನ್ನು ನಿಯಂತ್ರಿಸುವ ಕುರಿತು ತರಬೇತಿ ನೀಡುವ ಸಲುವಾಗಿ ದೇವಾಲಯಗಳಲ್ಲಿ ಕಾರ್ಯಪಡೆ ರಚಿಸುವ ಬಗ್ಗೆ ಶಾಸಕ ಆರ್ ವಿ ದೇಶಪಾಂಡೆ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ – 2 ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತನ್ನ ಎಂಟನೇ ಶಿಫಾರಸು ವರದಿಯನ್ನು ಒಪ್ಪಿಸಿದೆ. ದೇವಸ್ಥಾನದಲ್ಲಿ ಉಂಟಾಗುವ ತುರ್ತು ಪರಿಸ್ಥಿತಿಗಳಾದಂತಹ ಅಗ್ನಿ ಅವಘಡಗಳು, ವೈದ್ಯಕೀಯ ಬಿಕ್ಕಟ್ಟುಗಳು, ಕಾಲ್ತುಳಿತದಂತಹ ಅನೇಕ ಅವಘಡಗಳನ್ನು ತಪ್ಪಿಸುವ ಹೊಣೆ ಹೊರುವ ಕಾರ್ಯಪಡೆ ದೇವಾಲಯದ ದಕ್ಷ ನಿರ್ವಹಣೆಗೆ ಉತ್ತೇಜನ ನೀಡಲಿದೆ. ಟಿಕೆಟ್ ಕೌಂಟರ್ಗಳು, ಭಕ್ತಾದಿಗಳ ಸರದಿ ಸಾಲುಗಳು ಮತ್ತು ಪ್ರಸಾದ ವಿತರಣೆಗೆ ವ್ಯವಸ್ಥಿತ ಸರದಿಗಳನ್ನು ನಿರ್ವಹಿಸುವುದನ್ನು ಖಾತರಿಪಡಿಸಲಿದೆ ಎಂದು ಆಯೋಗ ತಿಳಿಸಿದೆ.
ದೇವಸ್ಥಾನದ ಪ್ರವೇಶ ಕೇಂದ್ರಗಳಲ್ಲಿ ಉಂಟಾಗುವ ಜನದಟ್ಟಣೆಯನ್ನು ನಿಯಂತ್ರಿಸಲು ಬ್ಯಾರಿಕೇಡ್ಗಳನ್ನು ಅಳವಡಿಸುವುದು, ಪ್ರೋಟೋಕಾಲ್ನಂತಹ ನೂತನ ಕ್ರಮವನ್ನು ಜಾರಿಗೆ ತರಲಿದೆ. ತುರ್ತು ಪ್ರತಿಕ್ರಿಯೆ ಯೋಜನೆಯನ್ನು ರಚಿಸಲು ಇದು ಸ್ಥಳೀಯ ಅಧಿಕಾರಿಗಳು, ವೈದ್ಯಕೀಯ ಸೇವೆಗಳು ಮತ್ತು ಅಗ್ನಿಶಾಮಕ ಸುರಕ್ಷತಾ ಸಿಬ್ಬಂದಿಯೊಂದಿಗೆ ಒಟ್ಟಾಗಿ ಕೆಲಸ ಮಾಡಲಿದೆ. ದೇವಸ್ಥಾನದ ಪ್ರಮುಖ ಕಾರ್ಯಕ್ರಮಗಳಲ್ಲಿ ಏನಾದರೂ ಅವಘಡಗಳು ಸಂಭವಿಸಿ ಭಕ್ತಾದಿಗಳಿಗೆ ತೊಂದರೆಯಾದರೆ ಬಗೆಹರಿಸಲು ತಾತ್ಕಾಲಿಕ ವೈದ್ಯಕೀಯ ಬೂತ್ಗಳನ್ನು ಸ್ಥಾಪಿಸುವುದು, ದೇವಾಲಯದ ಒಳಗೆ ಮತ್ತು ಸುತ್ತಮುತ್ತ ಭದ್ರತಾ ಉಪಸ್ಥಿತಿಯನ್ನು ಹೆಚ್ಚಿಸಲು ಶಿಫಾರಸು ಮಾಡಿದೆ.
ಭಕ್ತಾದಿಗಳ ಸರದಿ ವ್ಯವಸ್ಥೆ, ಪ್ರವೇಶ ಮತ್ತು ನಿರ್ಗಮನ ಸ್ಥಳ, ಸುರಕ್ಷತಾ ಪ್ರೋಟೋಕಾಲ್ಗಳು ಮತ್ತು ದೇವಾಲಯದ ಸಮಯ ಅಥವಾ ಕಾರ್ಯವಿಧಾನಗಳಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ಭಕ್ತರಿಗೆ ತಿಳಿಸಲು ಕಾರ್ಯಪಡೆ ಸ್ಪಷ್ಟ ಸೂಚನಾ ಫಲಕಗಳು, ಧ್ವನಿವರ್ಧಕಗಳು ಮತ್ತು ಇತರ ಸಂವಹನ ಸಾಧನಗಳನ್ನು ಬಳಸಲಿದೆ. ಇವೆಲ್ಲವಕ್ಕೆ ಪೂರಕವಾಗಿ , ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ನಿಯಮಗಳಿಗೆ ಸೂಕ್ತ ನಿಬಂಧನೆಗಳನ್ನು ತಿದ್ದುಪಡಿ ಮಾಡಬಹುದು ಎಂದು ಆಯೋಗ ಶಿಫಾರಸು ಮಾಡಿದೆ.